Lead Newsವಿದೇಶಗಳಲ್ಲಿ ನಡೆಸುವ ಕನ್ನಡ ತರಗತಿಗಳಿಗೆ ಮಾನ್ಯತೆ ನೀಡಲು ಅನಿವಾಸಿ...

ವಿದೇಶಗಳಲ್ಲಿ ನಡೆಸುವ ಕನ್ನಡ ತರಗತಿಗಳಿಗೆ ಮಾನ್ಯತೆ ನೀಡಲು ಅನಿವಾಸಿ ಕನ್ನಡಿಗರ ಬೇಡಿಕೆ

ಮಂಡ್ಯ: ತಮ್ಮ ಮಕ್ಕಳಿಗೆ ತಾಯ್ನುಡಿ ಕಲಿಸಲು ವಿದೇಶಗಳಲ್ಲಿ ನಡೆಸುವ ಕನ್ನಡ ತರಗತಿಗಳಿಗೆ ಮಾನ್ಯತೆ ನೀಡಬೇಕೆಂದು ಅನಿವಾಸಿ ಕನ್ನಡಿಗರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ ರವಿವಾರ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂತಿಮ ದಿನದಂದು ನಡೆದ “ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ”ಎಂಬ ಅಧಿವೇಶನದಲ್ಲಿ ಮಾತನಾಡಿದ ಜರ್ಮನಿಯ ನಿವಾಸಿ ರಶ್ಮಿ ನಾಗರಾಜ್, ʼವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ವಾರಾಂತ್ಯದಲ್ಲಿ ತಮ್ಮ ಮಕ್ಕಳಿಗಾಗಿ ಕನ್ನಡ ತರಗತಿಗಳನ್ನು ನಡೆಸುತ್ತಿದ್ದಾರೆ. ಜರ್ಮನಿಯಲ್ಲಿ ನಾವು ನಮ್ಮ ತರಗತಿಗಳಲ್ಲಿ ಇಲ್ಲಿ ಕಲಿಸಲಾಗುವ ಕಲಿ-ನಲಿ ಪಠ್ಯಕ್ರಮವನ್ನು ಅಳವಡಿಸಿಕೊಂಡಿದ್ದೇವೆʼ ಎಂದು ಹೇಳಿದರು.

“ಜರ್ಮನ್ ಶಾಲೆಗಳಲ್ಲಿ, ಇಂಗ್ಲಿಷ್ ಮತ್ತು ಫ್ರೆಂಚ್ ಜೊತೆಗೆ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಲು ಅವಕಾಶವಿದೆ. ರಾಜ್ಯ ಸರ್ಕಾರವು ನಮ್ಮ ಕನ್ನಡ ತರಗತಿಗಳಿಗೆ ಮಾನ್ಯತೆ ನೀಡಿದರೆ, ಅದನ್ನು ಅಧಿಕೃತವೆಂದು ಪರಿಗಣಿಸಲಾಗುತ್ತದೆ. ಇದರೊಂದಿಗೆ, ಶಾಲೆಗಳಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಪರಿಚಯಿಸಲು ನಾವು ಅಲ್ಲಿನ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಬಹುದು. ಇದು ವಿದೇಶಗಳಲ್ಲಿ ಕನ್ನಡವನ್ನು ಸಂರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ಅವರು ಮನವಿ ಮಾಡಿದರು.

ಇದೇ ವಿಷಯದ ಕುರಿತು ಮಾತನಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ ನಿವಾಸಿ ಶಶಿಧರ್ ನಾಗರಾಜಪ್ಪ, ವಿವಿಧ ದೇಶಗಳಲ್ಲಿ ಒಟ್ಟು 5,866 ಅನಿವಾಸಿ ಭಾರತೀಯ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. 704 ಬೋಧಕರು ಕನ್ನಡ ಕಲಿಸುವಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ, ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರನಾಥ ಗೌಡ, ʼಪ್ರತಿ ವರ್ಷ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿʼ ಎಂದು ಕರೆ ನೀಡಿದರು.
   “ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ” ವಿಷಯದ ಬಗ್ಗೆ ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮರನಾಥ ಗೌಡ, ʼವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದಾರೆ. ಅಕ್ಕ ಸಮೇಳನದ ಮೂಲಕ ವಿದೇಶದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಲಾಗುತ್ತಿದೆʼ ಎಂದು ಹೇಳಿದರು.

ಬಹರೇನ್ ನ ಕಿರಣ್ ಉಪಾಧ್ಯಾಯ ಅವರು ಆಶಯ ನುಡಿಗಳನ್ನಾಡಿದರು. “ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆಗಳು, ಪರಿಹಾರಗಳು” ವಿಷಯದ ಬಗ್ಗೆ ಕತಾರ್ ನ ಎಚ್. ಕೆ. ಮಧು ಅವರು, “ಜಗತ್ತಿನ ರಾಷ್ಟ್ರಗಳಲ್ಲಿ ಮಾತೃಭಾಷೆಯನ್ನು ನೋಡುವ ಕ್ರಮ” ವಿಷಯದ ಬಗ್ಗೆ ಇಂಗ್ಲೆಂಡ್ ನ ಅಶ್ವಿನ್ ಶೇಷಾದ್ರಿ, “ಹೊರನಾಡಿನಲ್ಲಿ ಕನ್ನಡದ ಅಸ್ತಿತ್ವ, ಸವಾಲುಗಳು” ವಿಷಯದ ಬಗ್ಗೆ ಮಹಾರಾಷ್ಟ್ರದ ಕಮಲಾಕರ ಕಡವೆ, ವಿದೇಶದಲ್ಲಿರುವ “ಕನ್ನಡ ಶಾಲೆಗಳ ಸ್ಥಿತಿಗತಿಗಳು” ವಿಷಯದ ಬಗ್ಗೆ ಶಶಿಧರ ನಾಗರಾಜಪ್ಪ ಅವರು ವಿಷಯ ಮಂಡಿಸಿದರು.

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories