ಒಮಾನ್ಮೂರು ತಿಂಗಳಿಂದ ಮಸ್ಕತ್ –ಮಂಗಳೂರು ನೇರ ವಿಮಾನ ಸೇವೆ...

ಮೂರು ತಿಂಗಳಿಂದ ಮಸ್ಕತ್ –ಮಂಗಳೂರು ನೇರ ವಿಮಾನ ಸೇವೆ ಸ್ಥಗಿತ; ಸಂಕಷ್ಟದಲ್ಲಿ ಪ್ರಯಾಣಿಕರು! ಪುನರಾರಂಭಿಸುವಂತೆ ಒತ್ತಾಯಿಸಿ ಅನಿವಾಸಿ ಕನ್ನಡಿಗರಿಂದ ಸಂಸದರಿಗೆ ಮನವಿ

ಮಸ್ಕತ್: ಮಂಗಳೂರು–ಮಸ್ಕತ್ ನೇರ ವಿಮಾನಯಾನ ಸೇವೆಯನ್ನು ಕಳೆದ ಮೂರು ತಿಂಗಳಿಂದ ವಿಮಾನಯಾನ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಅನಿವಾಸಿ ಭಾರತೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಈ ವಿಮಾನಯಾನ ಸೇವೆಯನ್ನು ಪುನರಾರಂಭಿಸುವಂತೆ ಅನಿವಾಸಿ ಭಾರತೀಯರು ಒತ್ತಾಯಿಸಿದ್ದು, ಸಂಸದರಿಗೆ ಮನವಿ ಸಲ್ಲಿಸಿದ್ದಾರೆ.

ಈ ಮಾರ್ಗದಲ್ಲಿ ಮೊದಲು ವಾರಕ್ಕೆ ನಾಲ್ಕು ವಿಮಾನಗಳು ನಿಯಮಿತವಾಗಿ ಸಂಚಾರ ನಡೆಸುತ್ತಿದ್ದವು. ದಶಕಗಳಿಂದ ನಿರಂತರವಾಗಿ ನಡೆದಿದ್ದ ಈ ಸೇವೆ ಅಚಾನಕ್ ಸ್ಥಗಿತಗೊಂಡಿದ್ದು, ಮಸ್ಕತ್‌ನಲ್ಲಿ ನೆಲೆಸಿರುವ ಕರಾವಳಿ ಪ್ರದೇಶದ ಅನಿವಾಸಿ ಭಾರತೀಯ ಪ್ರಯಾಣಿಕರಿಗೆ ಸಂಕಷ್ಟ ಉಂಟುಮಾಡಿದೆ.

ಗಲ್ಫ್‌ನ ಬಹುತೇಕ ರಾಷ್ಟ್ರಗಳಿಗೆ ನೇರ ವಿಮಾನ ಸೇವೆ ಮುಂದುವರಿದಿರುವ ಸಂದರ್ಭದಲ್ಲಿ, ಇತ್ತೀಚೆಗೆ ಕುವೈತ್ ದೇಶಕ್ಕೂ ನೇರ ವಿಮಾನ ಸೇವೆ ಆರಂಭಗೊಂಡಿದೆ. ಆದರೆ ಮಸ್ಕತ್‌ನಿಂದ ಮಂಗಳೂರಿಗೆ ಪ್ರಯಾಣಿಸುವವರು ಈಗ ದೆಹಲಿ, ಮುಂಬೈ ಅಥವಾ ಕೇರಳದ ಕನ್ನೂರು ಮೂಲಕ ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದಿನವಿಡೀ ಪ್ರಯಾಣದ ಬಳಿಕ ಮಾತ್ರ ಮಂಗಳೂರು ತಲುಪಬೇಕಾಗಿರುವುದರಿಂದ ಅನೇಕರು ಸಂಕಷ್ಟ ಎದುರಿಸುವಂತಾಗಿದೆ.

ವಾರಕ್ಕೆ ನಾಲ್ಕು ವಿಮಾನಗಳ ಬದಲು ಕನಿಷ್ಠ ಎರಡು ವಿಮಾನ ಸೇವೆ ಮರುಪ್ರಾರಂಭಿಸಬೇಕೆಂಬುದು ಓಮಾನ್‌ನಲ್ಲಿ ನೆಲೆಸಿರುವ ಕುಮುಟ, ಕುಂದಾಪುರ, ಉಡುಪಿ, ಚಿಕ್ಕಮಗಳೂರು, ಮಂಗಳೂರು ಹಾಗೂ ಕಾಸರಗೋಡು ಪ್ರದೇಶದ ಅನಿವಾಸಿಗಳ ಒತ್ತಾಯವಾಗಿದೆ. ಈ ಕುರಿತು ತಕ್ಷಣದ ಸ್ಪಂದಿಸುವಂತೆ ಅವರು ಮನವಿ ಮಾಡಿದ್ದಾರೆ.

ಸಂಸದರಿಗೆ ಮನವಿ ಪತ್ರ ಸಲ್ಲಿಕೆ
ಮಸ್ಕತ್ ಮತ್ತು ಕರಾವಳಿ ಪ್ರದೇಶದ ಅನಿವಾಸಿ ಭಾರತೀಯರು (NRI) ಈ ನೇರ ವಿಮಾನ ಸೇವೆಯನ್ನು ಮರುಪ್ರಾರಂಭಿಸಲು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹಾಗೂ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತು ಓಮಾನ್‌ನ ಹಿರಿಯ ಸಮುದಾಯ ನಾಯಕ ಮಲ್ಲಾರ್ ಶಶಿಧರ ಶೆಟ್ಟಿಯವರು ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರಿಗೆ ವಿಷಯ ತಿಳಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿದ್ದಾರೆ.

ಓಮಾನ್‌ನ ಸಮುದಾಯ ಸಂಘಟನೆಗಳಿಂದ ಮನವಿ
ಶಶಿಧರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಓಮಾನ್‌ನಲ್ಲಿರುವ ಕರಾವಳಿ ಕರ್ನಾಟಕದ ಹಲವು ಸಮುದಾಯ ಸಂಘಟನೆಗಳು ಮತ್ತು ಸಾಂಸ್ಕೃತಿಕ ವೇದಿಕೆಗಳು ಈ ವಿಷಯವನ್ನು ಸಂಸದರು ಮತ್ತು ಶಾಸಕರ ಗಮನಕ್ಕೆ ತಂದಿದ್ದು, ಕೂಡಲೇ ಸ್ಪಂದಿಸುವಂತೆ ಮನವಿ ಮಾಡಿದೆ.

ಗಡಿನಾಡ ಸಾಹಿತ್ಯ ಅಕಾಡೆಮಿ– ಓಮಾನ್, ಕೆಎಂಸಿಸಿ ಮಂಜೇಶ್ವರ ಮಂಡಲ ಅಧ್ಯಕ್ಷ ಅಬುಬಕರ್ ರಾಯಲ್ ಬೂಲ್ಲಾರ್, ಕರ್ನಾಟಕ ಜಾನಪದ ಪರಿಷತ್ತು – ಓಮಾನ್ ಘಟಕ ಅಧ್ಯಕ್ಷ ಶಿವಾನಂದ ಕೋಟ್ಯಾನ್, ಮೂಗವೀರ ಮಸ್ಕತ್ ಅಧ್ಯಕ್ಷ ಪದ್ಮಕರ ಮೆಂಡನ್, ಮಸ್ಕತ್ ಹಿರಿಯರಾದ ಯುವರಾಜ್ ಮಸ್ಕತ್, ವಿಠಲ ಪೂಜಾರಿ ಮತ್ತು ಮಸ್ಕತ್ ನ ಹಿರಿಯ ಕ್ರಿಕೆಟ್ ಆಟಗಾರ ಸತೀಶ್ ಬಾರ್ಕೂರು ಸಹಿತ ಉಡುಪಿ ಸಮಾಜಿಕ ಮುಂದಾಳು ಉದಯ ಕುಮಾರ್ ಶೆಟ್ಟಿ ಮತ್ತು ಕಲಾವಿದ ರಾಜಾ ಕಟಪಾಡಿ ಮುಂತಾದವರು ಮನವಿಯನ್ನು ಸಲ್ಲಿಸಿದ್ದಾರೆ. ಸರ್ಕಾರ ಮತ್ತು ವಿಮಾನಯಾನ ಇಲಾಖೆಯು ಈ ಬಗ್ಗೆ ತಕ್ಷಣ ಸ್ಪಂದಿಸಿ, ಮಸ್ಕತ್–ಮಂಗಳೂರು ನೇರ ವಿಮಾನ ಸೇವೆ ಪುನರಾರಂಭಿಸುವಂತೆ ಅವರು ಒತ್ತಾಯಿಸಿದ್ದಾರೆ.

Hot this week

ಅಮೇರಿಕದಲ್ಲಿ ‘ಕಾಂತಾರ: ಚಾಪ್ಟರ್ 1’ ಯಶಸ್ಸಿನ ಅಬ್ಬರ! ಸಿನೆಮಾ ನೋಡಿದವರು ಏನೆಂದಿದ್ದಾರೆ ನೋಡಿ…!

ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್...

ಅದ್ದೂರಿಯಾಗಿ ನಡೆದ ಕರ್ನಾಟಕ ಸಂಘ ಖತರ್‌ನ ‘ಎಂಜಿನಿಯರ್ಸ್ ಡೇ’

ದೋಹಾ(ಖತರ್): ಜಗಮೆಚ್ಚಿದ ಎಂಜಿನಿಯರ್ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ...

ಸೆ.26ರಂದು ಬಹರೈನ್ ಕನ್ನಡ ಸಂಘದ ‘ಯಕ್ಷ ವೈಭವ-2025’; ‘ಗಜೇಂದ್ರ ಮೋಕ್ಷ – ಇಂದ್ರಜಿತು ಕಾಳಗ’ ಯಕ್ಷಗಾನ ಪ್ರದರ್ಶನ

ಬಹರೈನ್: ದ್ವೀಪ ರಾಷ್ಟ್ರ ಬಹರೈನ್ ನಲ್ಲಿ ಕರಾಳಿಯ ಗಂಡು ಕಲೆ ಯಕ್ಷಗಾನ...

Related Articles

Popular Categories