Lead Newsಯುರೋಪಿನಾದ್ಯಂತ ಭಾರತೀಯ ಕಲಾಪ್ರಕಾರಗಳಿಗೆ ಆಸರೆಯಾಗಿರುವ 'ಬೆಲ್ಜಿಯಂ ಕಲಾ ವೇದಿಕೆ'

ಯುರೋಪಿನಾದ್ಯಂತ ಭಾರತೀಯ ಕಲಾಪ್ರಕಾರಗಳಿಗೆ ಆಸರೆಯಾಗಿರುವ ‘ಬೆಲ್ಜಿಯಂ ಕಲಾ ವೇದಿಕೆ’

ಕಲೆಗಳ ಉಳಿವಿಗಾಗಿ ನಮ್ಮಂಥ ಸಂಸ್ಥೆಗಳನ್ನು ಸರಕಾರ ಬೆಂಬಲಿಸಲಿ: ಡಾ.ನವೀನ್ ಶೆಟ್ಟಿ

ವಿಶೇಷ ಸಂದರ್ಶನ: ಎಂ.ಇಕ್ಬಾಲ್ ಉಚ್ಚಿಲ, ದುಬೈ

ದೂರದ ಯುರೋಪಿನ ನೆಲದಲ್ಲಿ ಭಾರತೀಯ ಕಲಾಪ್ರಕಾರಗಳನ್ನು, ಅದರಲ್ಲೂ ಕನ್ನಡ ನಾಡಿನ ಕಲೆ, ಸಂಸ್ಕೃತಿ ಹಾಗೂ ಭಾಷೆಯನ್ನು ಕನ್ನಡಿಗರು ಮತ್ತು ಸ್ಥಳೀಯರ ನಡುವೆ ಪಸರಿಸುವ ಮಹತ್ವಾಕಾಂಕ್ಷೆಯೊಂದಿಗೆ ಹುಟ್ಟಿಕೊಂಡ ‘ಬೆಲ್ಜಿಯಂ ಕಲಾ ವೇದಿಕೆ’ಯು ಇಂದು ಕಲಾವಿದರ ನೆಚ್ಚಿನ ಆಸರೆಯಾಗಿ ರೂಪುಗೊಂಡಿದೆ. ಜೊತೆಗೆ ಭಾರತೀಯ ಕಲೆ, ಸಾಂಸ್ಕೃತಿಕ ಪರಂಪರೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.

ಕರ್ನಾಟಕ ಸಂಗೀತ ಕಛೇರಿ, ಭರತನಾಟ್ಯ, ಯಕ್ಷಗಾನ, ಜಾನಪದ ನೃತ್ಯರೂಪಕ, ನಾಟಕ, ಸಾಹಿತ್ಯ, ಸಂಗೀತದ ಜೊತೆಗೆ ಯುಗಾದಿ, ಗಣೇಶೋತ್ಸವದಂಥ ಹಬ್ಬದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯುರೋಪಿನಾದ್ಯಂತ ಅದ್ದೂರಿಯಾಗಿ ನಡೆಸುವ ಮೂಲಕ ಕನ್ನಡಿಗರ ರಾಯಭಾರಿಯಾಗಿ ಕೆಲಸ ಮಾಡುತ್ತಿರುವ ‘ಬೆಲ್ಜಿಯಂ ಕಲಾ ವೇದಿಕೆ’ಯನ್ನು ಹುಟ್ಟುಹಾಕಿದ್ದು ನಮ್ಮವರೇ ಆದ ಡಾ.ನವೀನ್ ಶೆಟ್ಟಿ.

ಮೂಲತಃ ಉಡುಪಿಯವರಾದ ಡಾ.ನವೀನ್ ಶೆಟ್ಟಿ, ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ತನ್ನ ಹದಿಹರೆಯದ ಜೀವನವನ್ನು ಬೆಂಗಳೂರಿನಲ್ಲಿ ಕಳೆದ ಅವರು, ಕಾರ್ಮೆಲ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು, ಕುಮಾರನ್ಸ್ ಕಾಲೇಜಿನಲ್ಲಿ ಪಿಯುಸಿ ಅಧ್ಯಯನವನ್ನು, ತದನಂತರ ದಯಾನಂದಸಾಗರ್ ಎಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. 2012ರಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಜರ್ಮನಿಗೆ ಪಯಣ ಬೆಳೆಸಿದ ಡಾ.ನವೀನ್ ಶೆಟ್ಟಿ, 2015 ರಲ್ಲಿ ಕ್ಯಾಥೋಲಿಕ್ ಯೂನಿವರ್ಸಿಟಿ ಆಫ್ ಲ್ಯೂವೆನ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಲು ಬೆಲ್ಜಿಯಂಗೆ ತೆರಳಿದರು. ಅನಂತರ 2019 ರಲ್ಲಿ ಕ್ಯಾಥೋಲಿಕ್ ಯೂನಿವರ್ಸಿಟಿ ಆಫ್ ಲ್ಯೂವೆನ್‌ನಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ನಂತರ, ಬೆಲ್ಜಿಯಂನಲ್ಲಿ ಸ್ಥಾಪಿತವಾದ ಕಂಪನಿಯೊಂದರಲ್ಲಿ ಸ್ಟ್ರಕ್ಚರಲ್ ಎಂಜಿನಿಯರ್ ಮತ್ತು ಪ್ರಾಜೆಕ್ಟ್ ಲೀಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ 2015ರಿಂದ ಬೆಲ್ಜಿಯಂನಲ್ಲಿರುವ ಕನ್ನಡಿಗರಿಗೆ ಸಹಾಯ ಮಾಡಲು ಆರಂಭಿಸಿದರು. ಭಾರತೀಯ ಕಲೆ, ಸಂಸ್ಕೃತಿಯ ಮೇಲಿನ ಇವರ ಅಭಿಮಾನ, ಅದನ್ನು ಯುವಪೀಳಿಗೆಗೆ ಉಳಿಸಿ ಬೆಳೆಸುವಂತೆ ಮಾಡುವ ಸದುದ್ದೇಶ ಹಾಗು ಇತರರಿಗೆ ಪರಿಚಯಿಸುವ ಮಹತ್ವಾಕಾಂಕ್ಷೆ ‘ಬೆಲ್ಜಿಯಂ ಕಲಾ ವೇದಿಕೆ’ ಹುಟ್ಟುಹಾಕಲು ಕಾರಣವಾಯಿತು. ಈ ಸಂಘಟನೆಯ ಸ್ಥಾಪಕ ಹಾಗು ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ.ನವೀನ್ ಶೆಟ್ಟಿ ಅವರೊಂದಿಗೆ globalkannadiga.com ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

ಪ್ರಶ್ನೆ: ‘ಬೆಲ್ಜಿಯಂ ಕಲಾ ವೇದಿಕೆ’ಯ ಹುಟ್ಟು, ಬೆಳವಣಿಗೆಯ ಬಗ್ಗೆ ವಿವರಿಸುತ್ತೀರಾ?

ಡಾ.ನವೀನ್ ಶೆಟ್ಟಿ: 2015ರಲ್ಲಿ ನಾನು ಬೆಲ್ಜಿಯಂ ಕನ್ನಡ ಸಂಘ ಸೇರಿದ ಬಳಿಕ ಬಹಳಷ್ಟು ಸೇವೆ, ಕೊಡುಗೆಯನ್ನು ನೀಡಿದ್ದೆ. ಇದೇ ವೇಳೆ ನನ್ನ ಇತರ ಸ್ನೇಹಿತರೊಂದಿಗೆ ಸೇರಿ ವಾಟ್ಸಾಪ್ ಕನ್ನಡ ಸಂಘ ಗುಂಪನ್ನು ರಚಿಸಿದ್ದೆ. ಹೊಸದಾಗಿ ಬೆಲ್ಜಿಯಂಗೆ ಬರುವ ಕನ್ನಡಿಗರಿಗೆ ಸ್ನೇಹ, ಸಹಕಾರ ಮತ್ತು ಪರಿಚಯದ ಸೇತುವೆಯಾಗಿ ಅದು ಕಾರ್ಯನಿರ್ವಹಿಸುತ್ತಿದೆ. 2016 ರಿಂದ ಬೆಲ್ಜಿಯಂನಲ್ಲಿ ಕನ್ನಡ ಚಲನಚಿತ್ರಗಳನ್ನು ಪ್ರದರ್ಶನವನ್ನು ಮಾಡಲು ಆರಂಭಿಸಿದೆ. 2018 ರಲ್ಲಿ ಮೊದಲ ಬಾರಿಗೆ ಕನ್ನಡ ಸಮುದಾಯಕ್ಕಾಗಿ ಗಣೇಶ ಉತ್ಸವವನ್ನು ಆಯೋಜಿಸಿದೆ. ಕೋವಿಡ್ ಸಮಯದಲ್ಲಿ ನಾನಾಗಲಿ, ಬೇರೆ ಯಾರು ಕೂಡಾ ಕನ್ನಡ ಸಮುದಾಯಕ್ಕಾಗಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ. 2024ರಲ್ಲಿ, ಯುಗಾದಿ ಉತ್ಸವ ಮತ್ತು ಗಣೇಶ ಉತ್ಸವವನ್ನು ಆಯೋಜಿಸಿದೆ. ಕೆಲವು ಸದಸ್ಯರಿಂದ ಉಂಟಾದ ತಪ್ಪು ತಿಳುವಳಿಕೆ, ವಿಶ್ವಾಸದ ದುರುಪಯೋಗ ಹಾಗೂ ಉದ್ದೇಶಪೂರ್ವಕ ನಡೆಗಳಿಂದ, ಹೊಸ ಸಂಸ್ಥೆಯನ್ನು ಸ್ಥಾಪಿಸುವ ಅಗತ್ಯತೆ ಎದುರಾಯಿತು.

ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ನಾನು ಮತ್ತು ನನ್ನ ಪತ್ನಿ ರಶ್ಮಿ ರಂಗಸ್ವಾಮಯ್ಯ ‘ಬೆಲ್ಜಿಯಂ ಕಲಾ ವೇದಿಕೆ’ಯನ್ನು ರಚಿಸಿದೆವು. ಹೆಸರೇ ಸೂಚಿಸುವಂತೆ, ಇದು ಸಂಸ್ಕೃತಿ ಮತ್ತು ಕಲಾ ಪ್ರಕಾರಗಳಿಗೆ ಒಂದು ವೇದಿಕೆಯಾಗಿದೆ. ನವೆಂಬರ್ 2024 ರಲ್ಲಿ ನಾವು ಇದನ್ನು ಬೆಲ್ಜಿಯಂ ಸರ್ಕಾರಿ ವಲಯದಲ್ಲಿ ಅಧಿಕೃತವಾಗಿ ನೋಂದಾಯಿಸಿದ್ದೇವೆ. ಇಲ್ಲಿ ಇದು ಕನ್ನಡಿಗರಿಂದ ನೋಂದಾಯಿತವಾದ ಮೊದಲ ಸಂಸ್ಥೆಯಾಗಿದೆ.

ಮೊದಲ ಬಾರಿಗೆ ನಾವು ಬೆಲ್ಜಿಯಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ತೊಡಗಿಸಿಕೊಂಡೆವು. ಅವರು ನಮ್ಮನ್ನು ಕನ್ನಡ ಸಂಘಟನೆ ಎಂದು ಗುರುತಿಸಲು ಪ್ರಾರಂಭಿಸಿದರು ಮತ್ತು ನಮ್ಮ ಮುಂದಿನ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದರು.

ಪ್ರಶ್ನೆ: ಯಾವ ಉದ್ದೇಶವನ್ನು ಇಟ್ಟುಕೊಂಡು ‘ಬೆಲ್ಜಿಯಂ ಕಲಾ ವೇದಿಕೆ’ಯನ್ನು ಆರಂಭಿಸಿದ್ದೀರಿ?

ಡಾ.ನವೀನ್ ಶೆಟ್ಟಿ: ನನ್ನ ಉದ್ದೇಶ ಒಂದೇ ಆಗಿತ್ತು, ನಮ್ಮ ನಾಡಿನ ಹಾಗು ಭಾರತೀಯ ಕಲಾಪ್ರಕಾರಗಳನ್ನು ಬೆಲ್ಜಿಯಂಗೆ ತರುವುದು. ನಮ್ಮ ಸುತ್ತಮುತ್ತಲಿನ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಮತ್ತು ಅವರಿಗೆ ಮಾನ್ಯತೆ ನೀಡಿ ವೇದಿಕೆಯನ್ನು ಒದಗಿಸುವುದು. ಇತರ ಭಾರತೀಯ ಸಮುದಾಯಗಳು ಮತ್ತು ಬೆಲ್ಜಿಯಂನ್ನರೊಂದಿಗೆ ಸಾಂಸ್ಕೃತಿಕ ವಿನಿಮಯ. ಇಲ್ಲಿ ಬೆಳೆಯುತ್ತಿರುವ ನಮ್ಮ ಭವಿಷ್ಯದ ಪೀಳಿಗೆಗಳು ನಮ್ಮ ಸಂಸ್ಕೃತಿಯನ್ನು ಕಲಿಯಬೇಕು ಮತ್ತು ಅದರಲ್ಲಿ ಬೇರೂರಬೇಕು ಎಂಬ ಉದ್ದೇಶದಿಂದ ಭಾರತೀಯ ಸಮುದಾಯಗಳೊಂದಿಗೆ ಭಾರತೀಯ ಹಬ್ಬಗಳನ್ನು ಆಚರಿಸಬೇಕು ಎಂಬುದೇ ನನ್ನ ಉದ್ದೇಶವಾಗಿತ್ತು.

ಪ್ರಶ್ನೆ: ‘ಬೆಲ್ಜಿಯಂ ಕಲಾ ವೇದಿಕೆ’ಯ ಹಿಂದಿರುವ ಧೈಯೋದ್ದೇಶಗಳು ಏನೇನು?

ಡಾ.ನವೀನ್ ಶೆಟ್ಟಿ: ನಮ್ಮ ಭಾರತೀಯ (ಕರ್ನಾಟಕ) ಕಲಾಪ್ರಕಾರಗಳನ್ನು ಬೆಲ್ಜಿಯಂಗೆ ತಂದು ಪರಿಚಯ ಮಾಡುವುದು. ಇಲ್ಲಿನ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ವೇದಿಕೆಯೊಂದನ್ನು ಕಲ್ಪಿಸುವುದು. ಇತರ ಭಾರತೀಯ ಸಮುದಾಯ ಮತ್ತು ಬೆಲ್ಜಿಯನ್ನರೊಂದಿಗೆ ಸಾಂಸ್ಕೃತಿಕ ವಿನಿಮಯ ಮಾಡಿಕೊಳ್ಳುವುದು, ಇಲ್ಲಿ ಬೆಳೆಯುತ್ತಿರುವ ನಮ್ಮ ಭವಿಷ್ಯದ ಪೀಳಿಗೆಗಳಿಗೆ ನಮ್ಮ ಸಂಸ್ಕೃತಿಯನ್ನು ಕಲಿತು ಮುಂದುವರಿಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಕಲಾ ವೇದಿಕೆಯನ್ನು ಹುಟ್ಟುಹಾಕಲಾಗಿದೆ.

ಪ್ರಶ್ನೆ: ‘ಬೆಲ್ಜಿಯಂ ಕಲಾ ವೇದಿಕೆ’ಯು ಈ ವರಗೆ ಏನೆಲ್ಲ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಿದೆ?

ಡಾ.ನವೀನ್ ಶೆಟ್ಟಿ: ‘ಬೆಲ್ಜಿಯಂ ಕಲಾ ವೇದಿಕೆ’ಯು ಅನೇಕ ಸಾಂಸ್ಕೃತಿಕ, ಸಾಮಾಜಿಕ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಅವುಗಳಲ್ಲಿ ಪ್ರಮುಖವಾದವು:
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ (6/4/2025) ಬೆಲ್ಜಿಯಂನಲ್ಲಿ ಮೊಟ್ಟಮೊದಲ ಬಾರಿಗೆ ಯಕ್ಷಗಾನ ಆಯೋಜಿಸಿದ್ದೆವು. ಯಕ್ಷದ್ರುವ ಪಟ್ಲ ಫೌಂಡೇಶನ್ ಯುರೋಪ್ ಜೊತೆ ಕೈಜೋಡಿಸಿದ್ದೆವು. ಈ ಕಾರ್ಯಕ್ರಮವು ಹದಿನೈದು ಪ್ರತಿಭಾನ್ವಿತ ಕಲಾವಿದರು ವೇದಿಕೆಯಲ್ಲಿ ಪ್ರದರ್ಶನ ನೀಡಿದ ಯುರೋಪಿನ ಮೊದಲ ಪ್ರದರ್ಶನವಾಗಿ ಇತಿಹಾಸ ನಿರ್ಮಿಸಿತು. ಅವರು ‘ಕೃಷ್ಣಲೀಲೆ’ಯನ್ನು ಅಭಿನಯಿಸಿದರು. ಈ ಕಾರ್ಯಕ್ರಮದಲ್ಲಿ ಏಕತ್ವಂ ಶಾಲೆ ಬೆಂಗಳೂರು ಇದರ ಕಲಾತ್ಮಕ ನಿರ್ದೇಶಕಿ ವಿದುಷಿ ಶಿಲ್ಪಾ ಅಭಿರಾಮ್ ಭರತನಾಟ್ಯ ಪ್ರದರ್ಶಿಸಿದ್ದರು.

ಸಿರಿಗನ್ನಡ ಸಾಧಕರು; 2025ರ ಜೂನ್ 13ರಿಂದ ಯೂರೋಪಿನಲ್ಲಿ ಕನ್ನಡ ಸಾಹಿತ್ಯ ಪರಿಚಯ ಹಾಗೂ ಪ್ರಚಾರ ಮಾಡುವ ಹೊಸ ಪ್ರಯತ್ನವನ್ನು ಬೆಲ್ಜಿಯಂ ಕಲಾ ವೇದಿಕೆ ಪ್ರಾರಂಭಿಸಿದೆ. ಪ್ರತಿ ತಿಂಗಳಿನ ಎರಡನೇ ಮತ್ತು ನಾಲ್ಕನೆಯ ಶುಕ್ರವಾರ ಸಂಜೆ ಅಂತರ್ಜಾಲದ ಮುಖಾಂತರ ಸಾಹಿತ್ಯ ಬಳಗವನ್ನು ಒಂದಾಗಿಸಿ “ಸಿರಿಗನ್ನಡ ಸಾಧಕರು” ಎಂಬ ಸರಣಿ ಉಪನ್ಯಾಸ ಮಾಲಿಕೆಯ ಮೂಲಕ ಕನ್ನಡ ದಿಗ್ಗಜರ ಸಾಹಿತ್ಯ, ವ್ಯಕ್ತಿಚಿತ್ರಣ, ಜೀವನ, ಸಾಧನೆಗಳನ್ನು ತಿಳಿಸಿಕೊಡುವ ಅಧ್ಯಯನ ಕೂಟವನ್ನು ಏರ್ಪಡಿಸಲಾಗಿದೆ.

ಈ ಒಂದು ವರ್ಷದಲ್ಲಿ, ಕನ್ನಡದ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾಷಣಕಾರರಾಗಿ ಬಂದು ಈ ವೇದಿಕೆಯ ಮೂಲಕ ನಮ್ಮ ಜ್ಞಾನವನ್ನು ಉತ್ಕೃಷ್ಟಗೊಳಿಸಿದ್ದಾರೆ. ಎಸ್.ಎಲ್.ಬೈರಪ್ಪ, ಡಿ.ವಿ.ಗುಂಡಪ್ಪ, ಮಂಕುತಿಮ್ಮನ ಕಗ್ಗ, ದ.ರಾ.ಬೇಂದ್ರೆ, ಜೆ.ಪಿ.ರಾಜರತ್ನಂ, ದಾಸ ಸಾಹಿತ್ಯ, ಪಾಶ್ಚಾತ್ಯ ಮತ್ತು ಕನ್ನಡ ಸಾಹಿತ್ಯ ನಾಟಕಗಳ ಬಗ್ಗೆ ಕಲಿಯುವ ಸೆಷನ್‌ಗಳನ್ನು ನಡೆಸಿದ್ದೇವೆ.

ಇಲ್ಲಿಯವರೆಗೆ ಹಲವು ಪ್ರಮುಖ ವ್ಯಕ್ತಿಗಳು ಭಾಷಣಕಾರರಾಗಿ ಬಂದಿದ್ದಾರೆ. ಅವರಲ್ಲಿ ಡಾ.ಎ.ಭಾನು (ಬೆಂಗಳೂರು) ಕವಿ, ಬರಹಗಾರ, ಸಾಹಿತ್ಯ ಪ್ರೇಮಿ, ಡಾ.ಚೈತಾಲಿ ಕೆ.ಎಸ್. (ಕೊರಟಗೆರೆ) ಕನ್ನಡ ಸಹ ಪ್ರಾಧ್ಯಾಪಕರು, ಚೇತನ್ ಡಿ (ಮೈಸೂರು) ಸಾಹಿತ್ಯ ಪ್ರೇಮಿ, ಸಂತೋಷ್ ಭಾರದ್ವಾಜ್ (ಬೆಂಗಳೂರು) ಸಾಹಿತ್ಯ ಪ್ರೇಮಿ, ವಿದುಷಿ ಅಶ್ವಿನಿ ಸತೀಶ್ (ಸ್ವಿಟ್ಸರ್ಲೆಂಡ್) ಕರ್ನಾಟಕ ಶಾಸ್ತ್ರೀಯ ಗಾಯಕಿ, ಎನ್.ರಾಮನಾಥ್ (ಬೆಂಗಳೂರು) ಬರಹಗಾರ, ಅಂಕಣಕಾರ, ಹಾಸ್ಯಲೇಖಕ, ಪ್ರೊ. ಎಸ್.ಸಿ.ಗೌರಿಶಂಕರ್ (ಶಿವಮೊಗ್ಗ-ನಿವೃತ್ತ ಶಿಕ್ಷಕ, ನಾಟಕ ನಿರ್ದೇಶಕ) ಪ್ರಮುಖರು.

2025ರ ಜೂನ್ 28ರಂದು ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜಯಂತಿ ಆಚರಣೆ ಮಾಡಿದೆವು. ಇಂಥ ಕಾರ್ಯಕ್ರಮ ಯುರೋಪ್‌ನಲ್ಲಿ ಮೊದಲ ಬಾರಿಗೆ ನಡೆದಂಥದ್ದು. ಈ ಕಾರ್ಯಕ್ರಮದಲ್ಲಿ ಎಲ್ಲವೂ ಎಸ್‌ಪಿಬಿ ಅವರ ಸಂಗೀತವನ್ನು ಆಚರಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು. ಎಸ್‌ಪಿಬಿ ಅವರ ಜಯಂತಿಯನ್ನು ಆಚರಿಸಲು ಇತರ ಭಾರತೀಯ ಸಮುದಾಯಗಳು ಜೊತೆಯಾಗಿದ್ದವು. ಎಸ್‌ಪಿಬಿಗೆ ಸಂಬಂಧಿಸಿದ ರಸಪ್ರಶ್ನೆ, ನೃತ್ಯ, ಸಂಗೀತ ಕಚೇರಿ ಎಲ್ಲವನ್ನೂ ಆಚರಿಸಲಾಯಿತು. ಈ ಮೂಲಕ ಯುವ ಪೀಳಿಗೆಗೆ ಎಸ್‌ಪಿಬಿ ಅವರ ಪರಿಚಯ ಮಾಡಲಾಯಿತು.

2025ರ ಸೆಪ್ಟೆಂಬರ್ 13ರಂದು ಗಣೇಶೋತ್ಸವವನ್ನು ಆಚರಿಸಲಾಯಿತು. ಸಂಕಲ್ಪದ ಮೂಲಕ ಗಣೇಶನನ್ನು ಆವಾಹನೆ ಮಾಡುವ ಸಮಾರಂಭ (ಸ್ಥಾಪನೆ, ಪೂಜೆ, ವಿಸರ್ಜನೆ). ಉತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ಬಾಳೆ ಎಲೆಯಲ್ಲಿ ಆಹಾರವನ್ನು ಬಡಿಸಲಾಯಿತು. ಭಾರತೀಯ ಹಿನ್ನೆಲೆ ಗಾಯಕ ದೀಪಕ್ ದೊಡ್ಡೇರ ಅವರ ಸಂಗೀತ ಕಚೇರಿಯನ್ನು ಆಯೋಜಿಸಲಾಗಿತ್ತು.

2025ರ ನವೆಂಬರ್ 8ರಂದು ಬೆಲ್ಜಿಯಂನಲ್ಲಿ ಮೊದಲ ಬಾರಿಗೆ ಸ್ಟ್ಯಾಂಡ್ ಅಪ್ ಕನ್ನಡ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪವನ್ ವೇಣುಗೋಪಾಲ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಬೆಲ್ಜಿಯಂನಲ್ಲಿ ವಾಸಿಸುವ ಯುವ ಜೋಡಿಗಳನ್ನು ಆಕರ್ಷಿಸಿತು. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾಕ್ಕಾಗಿ ಅನೇಕರು ಕಲಾ ವೇದಿಕೆಗೆ ಧನ್ಯವಾದ ಅರ್ಪಿಸಿದರು ಮತ್ತು ಕಾರ್ಯಕ್ರಮದ ಉದ್ದಕ್ಕೂ ಅವರು ಹೃದಯದಿಂದ ನಕ್ಕರು.

2026ರ ಮಾರ್ಚ್ 21ರಂದು ಬೆಲ್ಜಿಯಂನಲ್ಲಿ ಯುಗಾದಿಯ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಯಕ್ಷಗಾನವನ್ನು ಆಯೋಜಿಸಲಾಯಿತು. ಯಕ್ಷದ್ರುವ ಪಟ್ಲ ಫೌಂಡೇಶನ್ ಯುರೋಪ್ ವತಿಯಿಂದ “ಲಂಕಾದಹನ” ಯಕ್ಷಗಾನ ಪ್ರದರ್ಶನಗೊಂಡಿತು.

2026ರ ಏಪ್ರಿಲ್ 25ರಂದು ಯುರೋಪಿಯನ್ ಪ್ರಾರ್ಥನಾ ಮಂದಿರದೊಳಗೆ ಮೊದಲ ಬಾರಿಗೆ ಭಾರತೀಯ ಕಲಾ ಪ್ರಕಾರ ಭರತನಾಟ್ಯವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಸ್ಥಳೀಯ ಪ್ರತಿಭೆಗಳು ತಮ್ಮ ಗುರುಗಳೊಂದಿಗೆ ಭಾಗವಹಿಸಿದ್ದವು. ಕಲಾ ವೇದಿಕೆಯನ್ನು ಇಂತಹ ಉತ್ತಮ (pro bono) ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ನಮ್ಮನ್ನು ಸಾಂಸ್ಕೃತಿಕ ರಾಯಭಾರಿ (ಬ್ರಸೆಲ್ಸ್‌ ನ ಭಾರತೀಯ ರಾಯಭಾರ ಕಚೇರಿ) ಅಭಿನಂದಿಸಿದೆ.

2026ರ ಜೂನ್ 6ರಂದು ಬೆಲ್ಜಿಯಂನಲ್ಲಿ ವೀಣಾ-ಮೃದಂಗ ಕಛೇರಿ ಆಯೋಜಿಸಿದ್ದೆವು. ವಿದುಷಿ ವೈ.ಜಿ.ಶ್ರೀಲತಾ ನಿಕ್ಷಿತ್ ಮತ್ತು ವಿದ್ವಾನ್ ಪುತ್ತೂರು ನಿಕ್ಷಿತ್ ಈ ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಬೆಲ್ಜಿಯನ್ನರು ಮತ್ತು ಅಂತಾರಾಷ್ಟ್ರೀಯ ಪ್ರೇಕ್ಷಕರು ಈ ಸಂಗೀತ ಕಚೇರಿಯನ್ನು ಆನಂದಿಸಿದರು. ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಶಾಸ್ತ್ರೀಯ ಸಂಗೀತ ಕಲಾರೂಪದ ಪರಿಚಯ ಮಾಡಿಕೊಡಲಾಯಿತು.

ಪ್ರಶ್ನೆ: ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ಭಾಷೆಗೆ ನಿಮ್ಮ ವೇದಿಕೆಯ ಕೊಡುಗೆ ಏನು?

ಡಾ.ನವೀನ್ ಶೆಟ್ಟಿ: ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ಭಾಷೆಗೆ ನಮ್ಮ ವೇದಿಕೆಯ ಮೂಲಕ ಹತ್ತಲವು ಕೊಡುಗೆಗಳನ್ನು ನೀಡಿದ್ದೇವೆ. ಮುಂದೆಯೂ ನೀಡುತ್ತೇವೆ. ಬೆಲ್ಜಿಯಂ ಕಲಾ ವೇದಿಕೆಯ ನೃತ್ಯ ತಂಡವು ಬೆಲ್ಜಿಯಂ (Indian Food Festival 2025, Diwali Festival 2025, Ha Concerts 2026) ಮತ್ತು ನೆದರ್ಲೆಂಡಿನಲ್ಲಿ (Kannada Rajyothsava 2025, Ugadi K3NL 2026) ನಡೆದ ಅನೇಕ ವೇದಿಕೆ ಪ್ರದರ್ಶನಗಳಲ್ಲಿ “ಕಂಸಾಳೆ” ನೃತ್ಯವನ್ನು ಪ್ರದರ್ಶಿಸಿದೆ. ಈ ಮೂಲಕ, ನಮ್ಮ ಕರ್ನಾಟಕ ನೃತ್ಯ ಕಲಾ ಪ್ರಕಾರ ಕಂಸಲೆಯನ್ನು ತೋರಿಸಲು ನಾವು ಅನೇಕ ಭಾರತೀಯರಿಗೆ ಮತ್ತು ಯುರೋಪಿಯನ್ನರಿಗೆ ಪರಿಚಯಿಸಿದ್ದೇವೆ. ಚಲನಚಿತ್ರ ನಿರ್ದೇಶಕ ಟಿ. ಎಸ್. ನಾಗಭರಣ ಅವರು ನಮ್ಮ ಈ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಪ್ರಶ್ನೆ: ನಿಮ್ಮ ವೇದಿಕೆಯ ಮುಂದಿನ ಯೋಜನೆ, ಗುರಿ ಏನಾದರೂ ಇದೆಯಾ?

ಡಾ.ನವೀನ್ ಶೆಟ್ಟಿ: ಬಹಳಷ್ಟು ಇವೆ ಮತ್ತು ನಾವು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಬೆಲ್ಜಿಯಂ ಮತ್ತು ಯುರೋಪಿನಾದ್ಯಂತ ಹರಡಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಲು ಯೋಜನೆಗಳನ್ನು ಹಾಕುತ್ತಿದ್ದೇವೆ.

ಪ್ರಶ್ನೆ: ಕಲಾವಿದರಿಗೆ ಹೊರ ದೇಶದಲ್ಲಿ ಎದುರಾಗುವಂಥ ಸಮಸ್ಯೆ, ಸವಾಲುಗಳು ಏನೇನು?

ಡಾ.ನವೀನ್ ಶೆಟ್ಟಿ: ಕನ್ನಡ ಪ್ರೇಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಡಿಮೆ ಆಸಕ್ತಿ ತೋರಿಸುವುದನ್ನು ನಾವು ಗಮನಿಸಿದ್ದೇವೆ. ಇದರಿಂದಾಗಿ ದೊಡ್ಡ ಕಾರ್ಯಕ್ರಮಗಳನ್ನು ಆರ್ಥಿಕವಾಗಿ ನಿರ್ವಹಿಸುವುದು ಕೆಲವೊಮ್ಮೆ ಸವಾಲಾಗುತ್ತದೆ.
ಭಾಷೆ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳು: ವಿಭಿನ್ನ ದೇಶದ ಪ್ರೇಕ್ಷಕರ ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ.
ತಾಂತ್ರಿಕ ಮತ್ತು ಲಾಜಿಸ್ಟಿಕ್ಸ್ ಸವಾಲುಗಳು: ಧ್ವನಿ ವ್ಯವಸ್ಥೆ, ವಾದ್ಯೋಪಕರಣಗಳು, ಅಭ್ಯಾಸದ ಸಮಯ ಮತ್ತು ಕಾರ್ಯಕ್ರಮದ ವ್ಯವಸ್ಥೆಗಳನ್ನು ಹೊಸ ಪರಿಸರದಲ್ಲಿ ಹೊಂದಿಸಿಕೊಳ್ಳಬೇಕಾಗುತ್ತದೆ. ಇಂಥ ಹತ್ತಲವು ಸವಾಲುಗಳು ಎದುರಾಗುತ್ತಲೇ ಇರುತ್ತೆ.

ಪ್ರಶ್ನೆ: ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವು ನಮ್ಮ ಕಲಾ ಪ್ರಕಾರಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತಿದೆ?

ಡಾ.ನವೀನ್ ಶೆಟ್ಟಿ: ನಮ್ಮ ಭಾರತೀಯರಲ್ಲಿ ಅತಿಯಾದ ಬಾಲಿವುಡ್ ಪ್ರಭಾವದಿಂದಾಗಿ ಕೆಲವು ಸಾಂಪ್ರದಾಯಿಕ ಕಲಾ ಪ್ರಕಾರಗಳು ಅವನತಿಯತ್ತ ಸಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಜಾನಪದ ಕಲೆಗಳು, ಶಾಸ್ತ್ರೀಯ ಸಂಗೀತ, ಯಕ್ಷಗಾನ, ರಂಗಭೂಮಿ ಮತ್ತು ಸ್ಥಳೀಯ ಸಂಸ್ಕೃತಿಯ ಕೆಲವು ಅಂಶಗಳಲ್ಲಿ ಯುವಕರ ಆಸಕ್ತಿ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕೆಲವೊಮ್ಮೆ, ನಮ್ಮದೇ ಆದ ಕಲಾತ್ಮಕ ಪರಂಪರೆಯ ಮೌಲ್ಯವನ್ನು ನಿರ್ಲಕ್ಷಿಸಲಾಗುತ್ತದೆ. ನಾವು ಗಮನಿಸಿದಂತೆ ಪಾಶ್ಚಿಮಾತ್ಯರು ನಮ್ಮ ಕಲಾಪ್ರಕಾರಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

ಪ್ರಶ್ನೆ: ನಿಮ್ಮ ವೇದಿಕೆಯ ಮೂಲಕ ಯಾವ ಯಾವ ಕಲಾ ಪ್ರಕಾರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ?

ಡಾ.ನವೀನ್ ಶೆಟ್ಟಿ: ಬೆಲ್ಜಿಯಂ ಕಲಾ ವೇದಿಕೆಯ ಮೂಲಕ ಕನ್ನಡ ಮತ್ತು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಕಲಾ ಪ್ರಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಮುಖ್ಯವಾಗಿ, ನೃತ್ಯ – ಶಾಸ್ತ್ರೀಯ, ಜಾನಪದ ಮತ್ತು ಆಧುನಿಕ ನೃತ್ಯ ಪ್ರಕಾರಗಳ ಮೂಲಕ ಮಕ್ಕಳ ಹಾಗೂ ಯುವ ಪ್ರತಿಭೆಗಳನ್ನು ಉತ್ತೇಜಿಸಲಾಗುತ್ತಿದೆ.

ಸಂಗೀತ ಭಾವಗೀತೆ, ಭಕ್ತಿಗೀತೆ, ಜನಪದ ಹಾಗೂ ಚಲನಚಿತ್ರ ಸಂಗೀತ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಮತ್ತು ಭಾಷೆ, ಕಥೆ, ಕವನ, ವಚನ ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಅದರ ಜೊತೆಗೆ, ಯಕ್ಷಗಾನ, ಕಂಸಲೆ ಎಂಬ ಕರ್ನಾಟಕದ ವಿಶಿಷ್ಟ ಸಾಂಪ್ರದಾಯಿಕ ಕಲಾ ಪ್ರಕಾರದ ಪರಿಚಯ ಮತ್ತು ಪ್ರಚಾರಕ್ಕೂ ನಾವು ವಿಶೇಷ ಗಮನ ನೀಡುತ್ತಿದ್ದೇವೆ.

ಪ್ರಶ್ನೆ: ವಿದೇಶದ ನೆಲದಲ್ಲಿ ನಮ್ಮ ಕಲೆಗಳಿಗೆ ಯಾವ ರೀತಿಯ ಬೆಂಬಲ ಸಿಗುತ್ತಿದೆ?

ಡಾ.ನವೀನ್ ಶೆಟ್ಟಿ: ಸಾಂಸ್ಕೃತಿಕ ವೇದಿಕೆಗಳು ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಗೀತ, ನೃತ್ಯ, ಯಕ್ಷಗಾನ, ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿವೆ. ಭಾರತದಿಂದ ಕಲಾವಿದರನ್ನು ಆಹ್ವಾನಿಸಿ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ, ಸ್ಥಳೀಯವಾಗಿ ಬೆಳೆಯುತ್ತಿರುವ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ. ಭಾರತದಿಂದ ಬರುವ ಕಲಾವಿದರನ್ನು ನಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತೇವೆ.

ಪ್ರಶ್ನೆ: ಕಾರ್ಯಕ್ರಮಗಳಿಗೆ ಮೂಲವಾಗಿರುವ ಹಣಕಾಸು ಹಾಗೂ ಪ್ರಾಯೋಜಕತ್ವದ ಸವಾಲುಗಳನ್ನು ಹೇಗೆ ಎದುರಿಸುತ್ತಿದ್ದೀರಿ?

ಡಾ.ನವೀನ್ ಶೆಟ್ಟಿ: ಎಲ್ಲ ಸಾಂಸ್ಕೃತಿಕ ಸಂಸ್ಥೆಯಂತೆ, ಬೆಲ್ಜಿಯಂ ಕಲಾ ವೇದಿಕೆಯು ಆರ್ಥಿಕ ಮತ್ತು ಪ್ರಾಯೋಜಕತ್ವದ ಸವಾಲುಗಳನ್ನು ಎದುರಿಸುತ್ತಿದೆ. ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವಾಗ, ಸ್ಥಳ, ತಾಂತ್ರಿಕ ವ್ಯವಸ್ಥೆಗಳು, ಕಲಾವಿದರ ಪ್ರಯಾಣ ಮತ್ತು ವಸತಿ ಸೇರಿದಂತೆ ಹಲವು ವೆಚ್ಚಗಳಿವೆ. ಈ ಸವಾಲುಗಳನ್ನು ಎದುರಿಸಲು, ನಾವು ಪ್ರಾಥಮಿಕವಾಗಿ ಈವೆಂಟ್ ಟಿಕೆಟ್ ಶುಲ್ಕವನ್ನು ಅವಲಂಬಿಸಿದ್ದೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ಪಡೆಯುವುದು ತುಂಬಾ ಸವಾಲಿನ ಕೆಲಸ, ಆದರೆ ಜನರ ಆಸಕ್ತಿಯನ್ನು ಗಳಿಸಲು ಮತ್ತು ಸಾಬೀತುಪಡಿಸಲು ನಾವು ಹೆಚ್ಚು ಶ್ರಮಿಸಬೇಕಾಗಿದೆ. ಹೆಚ್ಚಿನ ಸಮಯ ನಾವು ನಮ್ಮ ಜೇಬಿನಿಂದಲೇ ಖರ್ಚು ಮಾಡುತ್ತೇವೆ.

ಪ್ರಶ್ನೆ: ಇತ್ತೀಚೆಗೆ ನಡೆಸಿದ ಯಶಸ್ವಿ ಕಾರ್ಯಕ್ರಮ ಯಾವುದು? ಈ ಬಗ್ಗೆ ವಿವರ ನೀಡಬಹುದೇ?

ಡಾ.ನವೀನ್ ಶೆಟ್ಟಿ: ನಮ್ಮ ಕಾರ್ಯಕ್ರಮಗಳು ವಿಭಿನ್ನ ಅಂಶಗಳ ಮೇಲೆ ಕೇಂದ್ರೀಕೃತವಾಗಿವೆ. ನಮಗೆ ಪ್ರಮಾಣ ಮುಖ್ಯವಲ್ಲ, ಗುಣಮಟ್ಟದ ಬಗ್ಗೆ ಚಿಂತೆ. ಆದ್ದರಿಂದ, ಪ್ರತಿಯೊಂದು ಕಾರ್ಯಕ್ರಮದ ಕೊನೆಯಲ್ಲಿ ನಾವು ಜನರ ಹೃದಯವನ್ನು ತಲುಪಿದ್ದರಿಂದ ನಾವು ಯಶಸ್ವಿಯಾಗಿದ್ದೇವೆ ಎಂದು ಭಾವಿಸುತ್ತೇವೆ.

ಪ್ರಶ್ನೆ: ನಿಮ್ಮ ವೇದಿಕೆಯ ಮೂಲಕ ಕರ್ನಾಟಕ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಯಾವುದೇ ಬೇಡಿಕೆಗಳನ್ನು ಈಡೇರಿಸಲು ನೀವು ಬಯಸುತ್ತೀರಾ?

ಡಾ.ನವೀನ್ ಶೆಟ್ಟಿ: ನಾವು ಕರ್ನಾಟಕದಿಂದ ದೂರವಿದ್ದರೂ ಕನ್ನಡದ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಸಹಕಾರದಿಂದ, ನಾವು ಕನ್ನಡ ಸಂಸ್ಕೃತಿಯನ್ನು ಪ್ರಪಂಚದ ಮೂಲೆ ಮೂಲೆಗೂ ಹೆಚ್ಚು ಪರಿಣಾಮಕಾರಿಯಾಗಿ ತಲುಪಬಹುದು. ಕರ್ನಾಟಕ ಸರ್ಕಾರದ ಸಾಂಸ್ಕೃತಿಕ ಇಲಾಖೆಯು ನಮ್ಮಂಥ ಸಂಸ್ಥೆಗಳನ್ನು ಬೆಂಬಲಿಸಬೇಕು ಮತ್ತು ಹೆಚ್ಚಿನ ಕಲಾ ಚಟುವಟಿಕೆಗಳನ್ನು ತರಲು ನಮಗೆ ಮಾರ್ಗದರ್ಶನ ನೀಡಬೇಕು.

Hot this week

55th International Cultural Fest and Cultural Exchange Programme concludes in Dubai

Dubai, July 26: The 55th International Cultural Fest and...

ಖತರ್‌ನಲ್ಲಿ ಭಾರತೀಯ ರಾಯಭಾರಿ ವಿಪುಲ್ ಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ: ಖತರ್‌ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ರಾಯಭಾರಿ...

ಯಕ್ಷಗಾನ ಕಲಾವಿದ ವಾಸು ಬಾಯರುಗೆ ‘ವಿಶೇಷ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ’

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ (YAKU)ಯು ತವರೂರು ತಿರುಗಾಟದಲ್ಲಿ...

ಕನ್ನಡ ಸಂಘ ಬಹರೈನ್ ವತಿಯಿಂದ ಯಶಸ್ವಿಯಾಗಿ ಮೂಡಿಬಂದ ‘KSB ಐಕ್ಯತಾ ಪಾದಯಾತ್ರೆ ಹಾಗೂ ನಿಷ್ಠಾ ಪ್ರತಿಜ್ಞೆ ಸಹಿ’ ಕಾರ್ಯಕ್ರಮ

ಮನಾಮ(ಬಹರೈನ್): ಕನ್ನಡ ಸಂಘ ಬಹರೈನ್ ವತಿಯಿಂದ ವಾಟರ್ ಗಾರ್ಡನ್, ಗುಫೂಲ್ ನಲ್ಲಿ...

ಖತರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿಯ ಸಂಪೂರ್ಣ ಆಡಳಿತಾತ್ಮಕ ಬೆಂಬಲ: ಹರೀಶ್ ಪಾಂಡೆ

ದೋಹಾ: ಖತರ್‌ನಲ್ಲಿರುವ ಕನ್ನಡ ಮಾತನಾಡುವ ಅನಿವಾಸಿ ಭಾರತೀಯರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ...

Related Articles

Popular Categories