ದುಬೈ: ಯುಎಇಯ ಪ್ರತಿಷ್ಠಿತ ಕನ್ನಡ ಸಂಘಟನೆಗಳಲ್ಲಿ ಒಂದಾಗಿರುವ ಕನ್ನಡಿಗರ ಕೂಟ, ದುಬೈ ವತಿಯಿಂದ ಹೊಸದಾಗಿ ನೇಮಕಗೊಂಡಿರುವ ಭಾರತದ ದುಬೈ ಕಾನ್ಸುಲ್ ಜನರಲ್ ಡಾ. ವಿಷ್ಣುವರ್ಧನ ರೆಡ್ಡಿ ಅವರನ್ನು ಭೇಟಿಯಾಗಿ, ದುಬೈ ಹಾಗೂ ಯುಎಇಯಲ್ಲಿರುವ ಅನಿವಾಸಿ ಕನ್ನಡಿಗರ ಪರವಾಗಿ ಆತ್ಮೀಯ ಸ್ವಾಗತ ಕೋರಲಾಯಿತು.

ಕನ್ನಡಿಗರ ಕೂಟದ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ. ಅವರ ನೇತೃತ್ವದ ಪ್ರತಿನಿಧಿ ಮಂಡಳಿ ಡಾ. ವಿಷ್ಣುವರ್ಧನ ರೆಡ್ಡಿ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಕಳೆದ 24 ವರ್ಷಗಳಿಂದ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ ಕನ್ನಡಿಗರ ಕೂಟ ನೀಡಿರುವ ಮಹತ್ವದ ಕೊಡುಗೆಗಳ ಕುರಿತು ಡಾ. ರೆಡ್ಡಿ ಅವರಿಗೆ ವಿವರಿಸಲಾಯಿತು.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಮುದಾಯಮುಖಿ ಕಾರ್ಯಕ್ರಮಗಳು ಹಾಗೂ ಕಲ್ಯಾಣ ಸೇವೆಗಳನ್ನು ವಿಸ್ತರಿಸುವ ಸಂಸ್ಥೆಯ ಬದ್ಧತೆಯನ್ನು ಅರುಣ್ ಕುಮಾರ್ ಎಂ.ಕೆ. ಅವರು ವ್ಯಕ್ತಪಡಿಸಿದರು.
ಕನ್ನಡಿಗರ ಕೂಟದ ಕಾರ್ಯಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಡಾ. ವಿಷ್ಣುವರ್ಧನ ರೆಡ್ಡಿ, ಕಾನ್ಸುಲೇಟ್ ಮಾರ್ಗಸೂಚಿಗಳ ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ರೀತಿಯ ಸೇವೆ ಹಾಗೂ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿ ಸದಸ್ಯೆ ಉಮಾ ವಿದ್ಯಾಧರ ಹಾಗೂ ಕೋರ್ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ – ಉಪಾಧ್ಯಕ್ಷ, ಚೇತನ್ ಸುಬ್ರಹ್ಮಣ್ಯ – ಪ್ರಧಾನ ಕಾರ್ಯದರ್ಶಿ, ದೀಪಕ್ ಸೋಮಶೇಖರ – ಸಂಯುಕ್ತ ಪ್ರಧಾನ ಕಾರ್ಯದರ್ಶಿ, ವಿನೀತ್ ರಾಜ್ – ಖಜಾಂಚಿ, ವಿನಾಯಕ ಹೆಗಡೆ – ಸಾಂಸ್ಕೃತಿಕ ಕಾರ್ಯದರ್ಶಿ ಹಾಗೂ ಲಕ್ಷ್ಮೀಶ ಭಾರದ್ವಾಜ್ – ಸಮಿತಿ ಸದಸ್ಯರು ಉಪಸ್ಥಿತರಿದ್ದರು.

