ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮವು ಆಗಸ್ಟ್ 13ರಂದು ದುಬೈಯ ಫಾರ್ಚೂನ್ ಆಟ್ರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.



ಉದ್ಘಾಟನೆ ನೆರವೇರಿಸಿ ಮಾತನಾಡಿದ ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ, ಕರ್ನಾಟದ ಕರಾವಳಿಯ ಅಭಿವೃದ್ಧಿಗೆ ತೊಡಕಾಗಿರುವ ಕೋಮುವಾದದಿಂದ ಹೂಡಿಕೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಿದ್ದಾರೆ ಎಂದರು.
ಕರಾವಳಿಯ ಅಭಿವೃದ್ಧಿಗೆ ಕೊಡುಗೆ ನೀಡಬಲ್ಲ ಉದ್ಯಮಗಳು ಇಂದು ಬೇರೆ ಕಡೆಗಳಿಗೆ ಹರಿದುಹೋಗುತ್ತಿದೆ. ಇದರಿಂದ ನಮ್ಮ ಕರಾವಳಿಯು ಹಿಂದುಳಿಯುತ್ತಿದ್ದು, ನಮ್ಮ ಮಕ್ಕಳಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿಲ್ಲ. ಭವಿಷ್ಯದಲ್ಲಿ ಕರಾವಳಿಯ ಅಭಿವೃದ್ಧಿಗೆ ಕೋಮುವಾದವೆಂಬುದು ಮಾರಕವಾಗಿ ಪರಿಣಮಿಸಲಿದೆ.
ನಾವೆಲ್ಲರೂ ಜಾತಿ, ಧರ್ಮದ ಎಂದು ಕಚ್ಚಾಡದೇ, ಒಗ್ಗಟ್ಟಾಗಿ ಉದ್ಯಮಕ್ಕೆ ನಮ್ಮ ಜಿಲ್ಲೆಗಳಲ್ಲಿ ಅವಕಾಶ ಕಲ್ಪಿಸಿಕೊಡುವಂತಾಗಬೇಕು. ಇದರಿಂದ ಕೈಗಾರಿಕೋದ್ಯಮ ಬೆಳೆದಂತೆ ನಮ್ಮ ಜಿಲ್ಲೆಯ ಸರ್ವೋತೋನ್ಮುಖ ಅಭಿವೃದ್ಧಿ ಸಾಧ್ಯ ಎಂದು ಡಾ.ರೊನಾಲ್ಡ್ ಕೊಲಾಸೊ ಹೇಳಿದರು.
ಕಾರ್ಯಕ್ರಮಕ್ಕೆ ಗಣ್ಯ ಅತಿಥಿಗಳಾಗಿ ಖ್ಯಾತ ಕೈಗಾರಿಕೋದ್ಯಮಿ ಡಾ. ಬಿ. ಆರ್. ಶೆಟ್ಟಿ, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಉದ್ಯಮಿ ರೊನಾಲ್ಡ್ ಪಿಂಟೊ ಹಾಗೂ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಅವರು ಉಪಸ್ಥಿತರಿದ್ದರು.



ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಪರಿಚಯಾತ್ಮಕ ಭಾಷಣ ಮಾಡುತ್ತಾ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉದ್ದೇಶಗಳು, ವಿವಿಧ ಚಟುವಟಿಕೆಗಳು ಹಾಗೂ ಪರಿಸರ ಸಂರಕ್ಷಣೆ ಮತ್ತು ಸಮಾಜಮುಖಿ ಕಾರ್ಯಗಳ ಕುರಿತು ವಿವರಿಸಿದರು.



ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯ ಅತಿಥಿಗಳು, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಪರಸ್ಪರ ಪೂರಕವಾಗಿರಬೇಕು ಎಂಬ ಸಂದೇಶವನ್ನು ನೀಡಿದರು. ಕರಾವಳಿ ಕರ್ನಾಟಕ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೈಗಾರಿಕೀಕರಣ, ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಕೈಗಾರಿಕಾ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾದ ಅಭಿವೃದ್ಧಿ ಮಾದರಿಯನ್ನು ಅಳವಡಿಸಿಕೊಳ್ಳಬೇಕು. ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರಗಳ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಸ್ಥಳೀಯವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಬಡತನ ನಿರ್ಮೂಲನೆಗೆ ಸಹಕರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದ ಅವರು, ಗಾಳಿ, ನೀರು ಮತ್ತು ಭೂಮಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು. ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಪ್ರಕೃತಿ ಸಂಪನ್ಮೂಲಗಳನ್ನು ಕಾಪಾಡುವುದು ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಪರಿಸರ ಸ್ನೇಹಿ ದಾರಿಯನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಕರೆ ನೀಡಿದರು.



ಸಾಮಾಜಿಕ ಸೌಹಾರ್ದದ ಕುರಿತು ಮಾತನಾಡುತ್ತಾ ಅವರು, “ನಮ್ಮ ಜಾತಿ ಮತ್ತು ಧರ್ಮವನ್ನು ಪ್ರೀತಿಸುವುದು ನಮ್ಮ ಜವಾಬ್ದಾರಿ; ಆದರೆ ಇತರ ಜಾತಿ ಮತ್ತು ಧರ್ಮಗಳನ್ನು ಪ್ರೀತಿಸಿ ಗೌರವಿಸುವುದು ನಮ್ಮ ಪರಮ ಜವಾಬ್ದಾರಿ” ಎಂಬ ಮಹತ್ವದ ಸಂದೇಶವನ್ನು ನೀಡಿದರು. ಪರಸ್ಪರ ಗೌರವ, ಸಹಬಾಳ್ವೆ ಮತ್ತು ಮಾನವೀಯತೆಯ ಮೌಲ್ಯಗಳೇ ಶಾಂತಿಯುತ ಹಾಗೂ ಪ್ರಗತಿಶೀಲ ಸಮಾಜದ ಬುನಾದಿಯಾಗಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಬಿ. ಆರ್. ಶೆಟ್ಟಿ, ಧರ್ಮಪಾಲ ದೇವಾಡಿಗ ಹಾಗೂ ಫ್ರಾಂಕ್ ಫೆರ್ನಾಂಡಿಸ್ ಅವರು ಶುಭ ಹಾರೈಕೆಗಳ ಭಾಷಣ ಮಾಡಿದರು. ಸಮಿತಿಯ ಸಮಾಜಮುಖಿ ಹಾಗೂ ಪರಿಸರ ಸಂರಕ್ಷಣಾ ಕಾರ್ಯಗಳನ್ನು ಶ್ಲಾಘಿಸಿದ ಅವರು, ಮುಂದಿನ ದಿನಗಳಲ್ಲಿಯೂ ಸಮಿತಿಯ ಸೇವಾ ಚಟುವಟಿಕೆಗಳು ಇನ್ನಷ್ಟು ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.



ಭಾಷಣದ ನಂತರ, ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅವರು ಗಣ್ಯರಾದ ಡಾ. ರೊನಾಲ್ಡ್ ಕೊಯ್ಕೊ ಹಾಗೂ ಡಾ. ಬಿ. ಆರ್. ಶೆಟ್ಟಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಪರಿಸರ ಸಂರಕ್ಷಣೆ, ಸಾಮಾಜಿಕ ಸೇವೆ, ಕೈಗಾರಿಕಾ ಪ್ರಗತಿ ಹಾಗೂ ಸಮುದಾಯದ ಅಭಿವೃದ್ಧಿಗೆ ಅವರು ನೀಡುತ್ತಿರುವ ಕೊಡುಗೆಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಸಮಿತಿ ಸದಸ್ಯರು ಸನ್ಮಾನಿತರಿಗೆ ಅಭಿನಂದನೆ ಸಲ್ಲಿಸಿದರು.
UAE ಸಮಿತಿಯ ಸಂಚಾಲಕ ಸರ್ವೋತ್ತಮ ಶೆಟ್ಟಿ ಅವರು ಸ್ವಾಗತ ಭಾಷಣ ಮಾಡಿದರು.






ಕಾರ್ಯಕ್ರಮವು ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಸಾಮಾಜಿಕ ಏಕತೆಯ ಮಹತ್ವವನ್ನು ಸಾರಿದ ಅರ್ಥಪೂರ್ಣ ಸಮಾಗಮವಾಗಿ ಗಮನ ಸೆಳೆಯಿತು.
ಸಾಮಾಜಿಕ ಸಮ್ಮಿಲನ ಕಾರ್ಯಕ್ರಮವು ಯು. ಎ. ಇ. ಯಲ್ಲಿ ನೆಲೆಸಿರುವ ಅನಿವಾಸಿ ಗಣ್ಯ ಕನ್ನಡಿಗರು, ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರು ಹಾಗೂ ಹಿತೈಷಿಗಳಿಗೆ ಪರಸ್ಪರ ಭೇಟಿಯಾಗಿ ವಿಚಾರ ವಿನಿಮಯ ಮಾಡಿಕೊಳ್ಳಲು ಹಾಗೂ ಸ್ನೇಹ, ಸೌಹಾರ್ದ ಮತ್ತು ಸಾಮಾಜಿಕ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲು ಉತ್ತಮ ವೇದಿಕೆಯಾಯಿತು.

