ಅಬುಧಾಬಿ: ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಮೊದಲಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ದೇವಾಲಯದಲ್ಲಿ ಗುರುವಂದನಾ ಮತ್ತು ಸಂಸ್ಕೃತಿ ಸಿಂಚನ ಕಾರ್ಯಕ್ರಮ ಇತ್ತೀಚಿಗೆ ಜರಗಿತು.

ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಠಾಧಿಪತಿಗಳು ಹಾಗೂ ಗಣ್ಯಾತಿ ಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸುಮಂಗಲೆಯರಿಂದ ಪೂರ್ಣ ಕುಂಭ, ವೇದಘೋಷ, ಪಂಚವಾಧ್ಯಗಳೊಂದಿಗೆ ಬಿ.ಎ.ಪಿ.ಎಸ್. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರ ಮಾಡಿಕೊಳ್ಳಲಾಯಿತು.

ಸನಾತನ ಸಂಸ್ಕೃತಿ, ಕಲಾ ಆಧ್ಯಾತ್ಮಿಕ, ಗುರು ಪರಂಪರೆಯ ಕಾರ್ಯಕ್ರಮವನ್ನು ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರು ಪರಮ ಪೂಜ್ಯ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿಯವರು ಉದ್ಘಾಟನೆ ಮಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಿಗೆ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು. ಡಾ.ತುಂಬೆ ಮೊಯ್ದಿನ್ ಅವರಿಗೆ “ಎಕ್ಸಲೆನ್ಸ್ ಇನ್ ಎಜುಕೇಶನ್ ಅಂಡ್ ಹೆಲ್ತ್ ಕೇರ್ ಅವಾರ್ಡ್” ಪ್ರದಾನ ಮಾಡಿ ಸನ್ಮಾನಿಸಿ, ಗೌರವಿಸಲಾಯಿತು.

ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ತುಂಬೆಯಿಂದ ಅರಬ್ ಸಂಯುಕ್ತ ಸಂಸ್ಥಾನದ ಅಜ್ಮಾನ್ ಗೆ 1990ರ ದಶಕದಲ್ಲಿ ಬಂದು ತಮ್ಮ ಸ್ವಂತ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಮತ್ತು ಆಸ್ಪತ್ರೆ ಹಾಗೂ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ ಪ್ರಸ್ತುತ ತುಂಬೆ ಗ್ರೂಪ್ ನ ಆಶ್ರಯದಲ್ಲಿ ತುಂಬೆ ಮೆಡಿಕಲ್ ಯೂನಿವರ್ಸಿಟಿ, ಆಸ್ಪತ್ರೆ, ಪಾರ್ಮಾಸಿ, ವೈದ್ಯಕೀಯ ತರಬೇತಿ ಸಂಸ್ಥೆಗಳು, ಕಾಫಿ ಶಾಫ್, ರೆಸ್ಟೋರೆಂಟ್, ಬಾಡಿ ಅಂಡ್ ಸೊಲ್ ಸ್ಪಾ, ಇತ್ಯಾದಿ ಹತ್ತು ಹಲವಾರು ವಿಶ್ವ ದರ್ಜೆಯ ಸವಲತ್ತುಗಳನ್ನು ತುಂಬೆ ಗ್ರೂಪಿನ ಅಧ್ಯಕ್ಷರಾಗಿರುವ ಡಾ. ತುಂಬೆ ಮೊಯ್ದಿನ್ ಅವರು ಭಾರತದಿಂದ ಹೊರ ಭಾಗದ ದೇಶದಲ್ಲಿ ಸ್ಥಾಪನೆ ಮಾಡಿರುವ ಏಕೈಕ ಭಾರತೀಯರಾಗಿದ್ದಾರೆ.