ಬಹರೈನ್: ಕಳೆದ ಒಂದು ದಶಕದಿಂದ ಬಹರೈನ್ ದ್ವೀಪರಾಷ್ಟ್ರದಲ್ಲಿ ನೆಲೆಸಿರುವ ಖ್ಯಾತ ಯಕ್ಷಗಾನ ಕಲಾವಿದ ನಾಟ್ಯಗುರು ದೀಪಕ್ ರಾವ್ ಪೇಜಾವರ ಅವರು ದ್ವೀಪ ರಾಷ್ಟ್ರವನ್ನು ಶಾಶ್ವತವಾಗಿ ತೊರೆಯುತ್ತಿರುವ ನಿಟ್ಟಿನಲ್ಲಿ ಕನ್ನಡ ಭವನ ಸಭಾಂಗಣದಲ್ಲಿ ಕನ್ನಡ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಹಾಗೂ ಯಕ್ಷೋಪಾಸನ ಕೇಂದ್ರದ ಶಿಷ್ಯವೃಂದದಿಂದ ಗುರುವಂದನಾ ಕಾರ್ಯಕ್ರಮವಾದ “ಯಕ್ಷ ದೀಪಕಾಭಿನಂದನಂ” ಜರುಗಿತು.



ಕಳೆದ ಒಂದು ದಶಕದಿಂದ ದ್ವೀಪದಲ್ಲಿ ಉಪನ್ಯಾಸಕರಾಗಿ ಉದ್ಯೋಗದಲ್ಲಿದ್ದ ದೀಪಕ್ ರಾವ್ ಪೇಜಾವರ ಅವರು ಸಂಘದ ಯಕ್ಷೋಪಾಸನ ಕೇಂದ್ರದದಲ್ಲಿ ನಾಟ್ಯ ಗುರುಗಳಾಗಿ ನೂರಾರು ಜನರಿಗೆ ಯಕ್ಷಗಾನವನ್ನು ಕಲಿಸುವುದರ ಮೂಲಕ ಅಪಾರ ಶಿಷ್ಯರ, ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಅಲ್ಲದೆ ಇವರ ನಿರ್ದೇಶನದಲ್ಲಿ ಹಲವಾರು ಯಕ್ಷಗಾನ ಕಥಾ ಪ್ರಸಂಗಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು.
ಬೀಳ್ಕೊಡುಗೆ ಸಮಾರಂಭ ಹಾಗು ಗುರುವಂದನಾ ಕಾರ್ಯಕ್ರಮಕ್ಕೆ ಮುನ್ನ “ಶುಂಭಾಂತಕಿ” ಎಂಬ ಯಕ್ಷಗಾನ ರಂಗದಲ್ಲಿ ಪ್ರದರ್ಶನಗೊಂಡು ನೆರೆದ ನೂರಾರು ಯಕ್ಷಪ್ರೇಮಿಗಳ ಮನಸೂರೆಗೊಂಡಿತು. ತದನಂತರ ಯಕ್ಷಗುರು ದೀಪಕ್ ರಾವ್ ಪೇಜಾವರ ದಂಪತಿಗಳಿಗೆ ರಂಗದಲ್ಲಿ ಶಾಲು, ಹಾರ, ಫಲಪುಷ್ಪ, ಸ್ಮರಣಿಕೆಗಳೊಂದಿಗೆ ಹೃದಯಸ್ಪರ್ಶಿ ಸಮ್ಮಾನ ನೀಡಲಾಯಿತು.




ಸಮ್ಮಾನ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಘದ ಪ್ರಭಾರ ಅಧ್ಯಕ್ಷ ನಿತಿನ್ ಶೆಟ್ಟಿ, ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಗಣ್ಯರಾದ ಸುಭಾಶ್ಚಂದ್ರ, ನವೀನ್ ಶೆಟ್ಟಿ(ರಿಫಾ), ನಿಕಟಪೂರ್ವ ಅಧ್ಯಕ್ಷ ಅಮರನಾಥ್ ರೈ, ಮಾಜಿ ಅಧ್ಯಕ್ಷರಾದ ರಾಜ್ ಕುಮಾರ್, ರಾಜೇಶ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ರಾಮಚಂದ್ರನ್, ಕಿರಣ್ ಉಪಾಧ್ಯಾಯ ಮುಂತಾದವರು ಉಪಸ್ಥಿತರಿದ್ದರು.
ಯಕ್ಷೋಪಾಸನ ಕೇಂದ್ರದ ಸಮ್ಮಾನದ ನಂತರ ದ್ವೀಪದ ಹಾಗು ಸೌದಿ ಅರೇಬಿಯಾದ ಕರ್ನಾಟಕ ಮೂಲದ ಇತರ ಸಂಘ, ಸಂಸ್ಥೆಗಳು ತಮ್ಮ ಪ್ರೀತಿ, ವಿಶ್ವಾಸ, ಅಭಿಮಾನದ ದ್ಯೋತಕವಾಗಿ ದೀಪಕ್ ರಾವ್ ಪೇಜಾವರರ ಕಲಾಸೇವೆಯನ್ನು ಗುರುತಿಸಿ ಸಮ್ಮಾನಿಸಿದರು.








ತಮಗೆ ಸಿಕ್ಕಂತಹ ಸಮ್ಮಾನ, ಗೌರವಗಳಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತಾ ಭಾವುಕರಾಗಿ ಮಾತನಾಡಿದ ದೀಪಕ್ ರಾವ್ ಪೇಜಾವರ್, ದ್ವೀಪದ ತಮ್ಮ ದಶಕದ ಯಕ್ಷ ಪಯಣವನ್ನು ನೆನೆಯುತ್ತಾ ತಮ್ಮ ಈ ಪಯಣದಲ್ಲಿ ಕನ್ನಡ ಸಂಘದ ಜೊತೆಗೆ ಇತರ ಸಂಘಟನೆಗಳು, ಸಂಸ್ಥೆಗಳು ಹಾಗು ವ್ಯಕ್ತಿಗಳು ನೀಡಿರುವ ಸಹಕಾರ, ಪ್ರೋತ್ಸಾಹವನ್ನು ನೆನೆದು ಅವರೆಲ್ಲರಿಗೂ ಶಾಲು ಹಾಗು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದ ಕೊನೆಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಬಹರೈನ್-ಸೌದಿ ಘಟಕದ ಪ್ರಯೋಜಕತ್ವದಲ್ಲಿ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವರದಿ: ಕಮಲಾಕ್ಷ ಅಮೀನ್