ದುಬೈ: ದುಬೈನಲ್ಲಿ ಇರುವ ಕಾಸರಗೋಡಿನ ಗಡಿನಾಡ ಕನ್ನಡಿಗರ ಹುಮ್ಮಸ್ಸು, ಉತ್ಸಾಹ ಮತ್ತು ಕನ್ನಡ ಪ್ರೇಮವನ್ನು ನೋಡಿ ಸಂತೋಷವಾಯಿತು. ಕಳೆದ ಮೂರು ವರ್ಷದಿಂದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡುತ್ತಾ ಇದ್ದಿರಿ ಎಂಬುದನ್ನು ಅರಿತು ಹೆಮ್ಮೆ ಅನಿಸಿತು ಎಂದು ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದ್ದಾರೆ.

ದುಬೈಯ ಕರಾಮ ಫಾರ್ಚೂನ್ ಅಟ್ರೀಯುಂನ ಸಭಾಂಗಣದಲ್ಲಿ ಶನಿವಾರ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ ವಾರ್ಷಿಕ ಮಹಾಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಮಾತನಾಡಿದ ಅವರು, ಗಡಿ ಪ್ರಾಧಿಕಾರದ ವತಿಯಿಂದ ಪ್ರತ್ಯೇಕವಾಗಿ ಗಡಿ ಭಾಗದಲ್ಲಿ ಇರುವ ಕೆಲವು ಕನ್ನಡ ಶಾಲೆಗೆ ಸೌಲಭ್ಯಗಳನ್ನು ನೀಡಲಾಗಿದೆ ಹಾಗೂ ಇನ್ನೂ ಮುಂದೆಯೂ ನಮ್ಮ ಪ್ರಾಧಿಕಾರದ ವತಿಯಿಂದ ನೀಡಲಾಗುವುದು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ದುಬೈ ಘಟಕದ ನೂತನ ಎಲ್ಲಾ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಮಹಾಸಭೆಯ ಅಧ್ಯಕ್ಷತೆಯನ್ನು ನ್ಯಾ.ಇಬ್ರಾಹಿಂ ಖಲೀಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಸರಕಾರದ ಸದಸ್ಯರಾದ ಡಾ.ಸಂಜೀವ್ ಕುಮಾರ್ ಅತಿವಾಲೆ, ಶಿವರೆಡ್ಡಿ ಖ್ಯಾಡೆದ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಝಡ್.ಎ.ಕಯ್ಯಾರ್, ಗಡಿನಾಡು ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಗಲ್ಫ್ ರಾಷ್ಟ್ರದ ಸಲಹಾ ಸಮಿತಿ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಉದ್ಯಮಿಗಳಾದ ಶಿವಶಂಕರ ನೆಕ್ರಾಜೆ, ಸಂದೀಪ್ ಅಂಚನ್ ಉಪಸ್ಥಿತರಿದ್ದರು.

ಬಳಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಆಯ್ಕೆಯಾದ ಪದಾಧಿಕಾರಿಗಳ ಹೆಸರನ್ನು ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದರವರು ಘೋಷಣೆ ಮಾಡಿದರು. ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರನ್ನು ಮತ್ತು ನಿರ್ದೇಶಕರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಇದೇ ವೇಳೆ 2025ನೇ ಸಾಲಿನ ದುಬೈ ಗಡಿನಾಡ ಉತ್ಸವವನ್ನು ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು.

ನೂತನ ಗೌರವಾಧ್ಯಕ್ಷರಾಗಿ ನ್ಯಾ.ಇಬ್ರಾಹಿಂ ಖಲೀಲ್, ಗಲ್ಫ್ ರಾಷ್ಟ್ರಗಳ ಸಲಹಾ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಶಾ ಮಂತೂರು, ಸಲಹಾ ಸಮಿತಿಯ ಮುಖ್ಯ ಸಂಚಾಲಕರಾಗಿ ಶಿವಶಂಕರ ನೆಕ್ರಾಜೆ, ಸಲಹಾ ಸಮಿತಿಯ ಸದಸ್ಯರಾಗಿ ಜೋಸೆಫ್ ಮಥಾಯಿಸ್, ಸಂದೀಪ್ ಅಂಚನ್, ಸುಗಂದರಾಜ್ ಬೇಕಲ್, ಆತ್ಮನಂದ ರೈ, ರಶೀದ್ ಬಾಯಾರ್, ಸಿದ್ದಿಕ್ ಕಯ್ಯಾರ್, ಅಧ್ಯಕ್ಷರಾಗಿ ಅಮರ್ ದೀಪ್ ಕಲ್ಲೂರಾಯ, ಉಪಾಧ್ಯಕ್ಷರಾಗಿ ಮಂಜುನಾಥ ಕಾಸರಗೋಡು, ಯೂಸುಫ್ ಶೇಣಿ, ಅಲಿ ಸಾಗ್, ಅಮನ್ ತಲೆಕಳ, ಜೇಶ್ ಬಾಯರ್, ಪ್ರಧಾನ ಕಾರ್ಯದರ್ಶಿಯಾಗಿ ಬಾಬ ಬಾಜೂರಿ, ಜತೆ ಕಾರ್ಯದರ್ಶಿಯಾಗಿ ವಿಜಯಕುಮಾರ್ ಶೆಟ್ಟಿ ಗಾಣದಮೂಲೆ, ಅನೀಶ್ ಶೆಟ್ಟಿ ಮಡಂದೂರು, ಆಶೀಖ್ ಮಿಯಾ, ಕೋಶಾಧಿಕಾರಿಯಾಗಿ ಅಶ್ರಫ್ ಪಿ.ಪಿ ಬಾಯರ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾದ ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಅಶ್ರಫ್ ಪಿ.ಪಿ ಬಾಯಾರ್ ಧನ್ಯವಾದವಿತ್ತರು.

