ನ್ಯೂಯಾರ್ಕ್: ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಎಲ್ಲೆಡೆ ಬಿಡುಗಡೆಗೊಂಡಿದ್ದು, ಅಮೇರಿಕದ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ಸುಮಾರು 50 ಜನ ಕನ್ನಡಿಗರು ಬೆಂಕಿ ಬಸಣ್ಣನವರ ನೇತೃತ್ವದಲ್ಲಿ ಸಿನಿಮಾವನ್ನು ರಿಲೀಸ್ ಆದ ದಿನವೇ ಮೊಟ್ಟ ಮೊದಲ ಶೋ ನೋಡಿ ಸಂಭ್ರಮಿಸಿದರು.
ಕನ್ನಡ ಮಣ್ಣಿನ ‘ಕಾಂತಾರ: ಚಾಪ್ಟರ್ 1’ ಚಲನಚಿತ್ರವು ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಆಲ್ಬನಿಯಲ್ಲಿ ಬಿಡುಗಡೆಯಾಗಿದೆ. ಇಲ್ಲಿರುವ ಅನ್ಯ ಭಾಷೆಯ ಭಾರತೀಯರ ಮುಂದೆ ಕನ್ನಡ ಸಿನಿಮಾ ಈ ಮಟ್ಟದಲ್ಲಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ಕನ್ನಡಿಗರು ಹೆಮ್ಮೆ ಪಟ್ಟುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಂಕಿ ಬಸಣ್ಣ, ‘ಹೀರೊ ರಿಷಬ್ ಶೆಟ್ಟಿ, ನಾಯಕಿ ರುಕ್ಮಿಣಿ ಮತ್ತು ಇತರ ಕಲಾವಿದರ ಅಭಿನಯ ಅದ್ಭುತವಾಗಿದೆ. ಕೊನೆಯ 40 ನಿಮಿಷ ಮೈ ರೋಮಾಂಚನಗೊಳಿಸುತ್ತದೆ. ಆದರೆ ಈ ಸಿನಿಮಾದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಬಡಿದಾಟ, ಹೊಡೆದಾಟಗಳ ಆರ್ಭಟ ತುಂಬಿದೆ. ಇನ್ನು ಮೂರು ಅಥವಾ ನಾಲ್ಕು ಇಂಪಾದ ಹಾಡುಗಳು ಇದ್ದರೆ ಚೆನ್ನಾಗಿರುತ್ತಿತ್ತು. ಈ ಸಿನಿಮಾ ಪುಷ್ಪ ಮತ್ತು ಬಾಹುಬಲಿ ಸಿನಿಮಾಗಳಿಂದ ಪ್ರಭಾವವಾದಂತೆ ಕಂಡಿತು. ಈ ಹಿಂದೆ ಬಂದ ಕಾಂತಾರ ಸಿನಿಮಾ ಗೆದ್ದಿದ್ದು ತನ್ನ ಮೂಲ ವಿಭಿನ್ನ ಕಥೆಯಿಂದಾಗಿ. ಆದರೆ ಈ ಸಿನಿಮಾದ ಕಥೆ ಅಷ್ಟೊಂದು ಪರಿಣಾಮಕಾರಿಯಾಗಿಲ್ಲ’ ಎಂದು ಹೇಳಿದರು.