ಅಬುಧಾಬಿ: ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಾಢಗೊಳಿಸುವ ಉದ್ದೇಶದಿಂದ ಭಾರತ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ಅಧಿಕೃತ ಯುಎಇ ಭೇಟಿ ಮಹತ್ವ ಪಡೆದುಕೊಂಡಿದೆ.


ಅಬುಧಾಬಿಯ ಸೆಂಟ್ ರೆಜಿಸ್ ಹೋಟೆಲ್ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತೀಯ ವಲಸೆ ಸಮುದಾಯದ ಪ್ರತಿನಿಧಿಗಳು, ವಿವಿಧ ಸಂಘಟನೆಗಳ ನಾಯಕರು ಪಾಲ್ಗೊಂಡು ಸಮಗ್ರ ವಿಚಾರ ವಿನಿಮಯ ನಡೆಸಿದರು.
ಪ್ರಾದೇಶಿಕ ಉದ್ವಿಗ್ನತೆಗಳ ನಡುವೆಯೂ ಯುಎಇನಲ್ಲಿ ವಾಸಿಸುವ ಭಾರತೀಯರ ಸುರಕ್ಷತೆ ಮತ್ತು ಕಲ್ಯಾಣವೇ ಕೇಂದ್ರಬಿಂದುವಾಗಿದ್ದು, ಈ ದಿಸೆಯಲ್ಲಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ವಿವರಿಸಿದರು.


ಅಬುಧಾಬಿಯ ಭಾರತೀಯ ರಾಯಭಾರ ಕಚೇರಿ ಹಾಗೂ ದುಬೈ ವಾಣಿಜ್ಯ ದೂತಾವಾಸದ ಸಮನ್ವಯದಲ್ಲಿ ಸಮುದಾಯ ಸಂಘಟನೆಗಳು ನಿರಂತರವಾಗಿ ನೀಡುತ್ತಿರುವ ಸೇವೆಯನ್ನು ಜೈಶಂಕರ್ ಪ್ರಶಂಸಿಸಿದರು.
ಸಂಕಷ್ಟದ ಸಮಯದಲ್ಲಿ ವಲಸೆ ಭಾರತೀಯರಿಗೆ ನೆರವಾಗುವಲ್ಲಿ ಸಮುದಾಯ ನಾಯಕರ ಪಾತ್ರವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಇನ್ನೊಂದೆಡೆ, ಸಮುದಾಯ ಪ್ರತಿನಿಧಿಗಳು ಯುಎಇ ನಾಯಕತ್ವ, ಸರಕಾರ ಹಾಗೂ ಭದ್ರತಾ ವ್ಯವಸ್ಥೆಯು ಎಲ್ಲಾ ನಿವಾಸಿಗಳ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಲು ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಭಾರತ–ಯುಎಇಗಳ ಬಲವಾದ ಸಂಬಂಧಗಳು ಈ ಸವಾಲಿನ ಅವಧಿಯಲ್ಲಿ ಪರಿಣಾಮಕಾರಿ ಸಹಕಾರಕ್ಕೆ ನೆರವಾದವು ಎಂಬ ಅಭಿಪ್ರಾಯ ವ್ಯಕ್ತವಾಯಿತು.


ವಲಸೆ ಭಾರತೀಯರ ಕಲ್ಯಾಣ, ಪ್ರಾದೇಶಿಕ ಸುರಕ್ಷತೆ ಕುರಿತ ಉನ್ನತ ಮಟ್ಟದ ಈ ಸಂವಾದದಲ್ಲಿ ಅನಿವಾಸಿ ಕನ್ನಡಿಗರ ಪರವಾಗಿ ‘ಕನ್ನಡಿಗರ ಕೂಟ–ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ ಅವರು ಭಾಗವಹಿಸಿದರು. ಜಾಗತಿಕ ಮಟ್ಟದ ಈ ವೇದಿಕೆಯಲ್ಲಿ ಕನ್ನಡಿಗರ ಪ್ರತಿನಿಧಿತ್ವ ಸ್ಪಷ್ಟವಾಗಿ ವ್ಯಕ್ತವಾಯಿತು. ಕರ್ನಾಟಕ ಸಂಘ ಅಬುಧಾಬಿಯ ಪರವಾಗಿ ಖಜಾಂಚಿ ಸುಧೀರ್ ಶೆಟ್ಟಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ನಡೆದ ಪ್ರಮುಖ ಚರ್ಚಾ ವಿಷಯಗಳು:
ಸಭೆಯಲ್ಲಿ ವಲಸೆ ಭಾರತೀಯರು ಎದುರಿಸುತ್ತಿರುವ ಪ್ರಮುಖ ಸವಾಲುಗಳು ಬೆಳಕಿಗೆ ಬಂದವು:
- JEE, NEET ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಶೈಕ್ಷಣಿಕ ಅಡಚಣೆಗಳು
- ವಿಮಾನ ಸಂಚಾರ ಮತ್ತು ಪ್ರಯಾಣ ಸಂಬಂಧಿತ ತೊಂದರೆಗಳು
- ವಲಸೆ ಕಾರ್ಮಿಕರ ಉದ್ಯೋಗ ಹಾಗೂ ಆರ್ಥಿಕ ಅನಿಶ್ಚಿತತೆ
- ತಾತ್ಕಾಲಿಕವಾಗಿ ಭಾರತಕ್ಕೆ ಹಿಂತಿರುಗಿದವರ ಪುನರ್ ವ್ಯವಸ್ಥೆ
- ಜೀವನೋಪಾಯ ವೆಚ್ಚದ ಏರಿಕೆ ಮತ್ತು ಅಗತ್ಯ ವಸ್ತುಗಳ ಬೆಲೆಬಾಧೆ
- ಪ್ರಾದೇಶಿಕ ಭದ್ರತೆ ಮತ್ತು ರಾಜಕೀಯ ಬೆಳವಣಿಗೆಗಳು
ಸದ್ಯದ ಪರಿಸ್ಥಿತಿ ಶೀಘ್ರದಲ್ಲೇ ಸ್ಥಿರವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಜೈಶಂಕರ್, ಸಾಮಾನ್ಯ ಜೀವನ ಕ್ರಮೇಣ ಪುನಃಸ್ಥಾಪನೆಯಾಗಲಿದೆ ಎಂದು ತಿಳಿಸಿದರು. ಇದೇ ವೇಳೆ, ಸಂಕಷ್ಟದ ಸಂದರ್ಭದಲ್ಲೂ ಸಮುದಾಯ ಕಲ್ಯಾಣಕ್ಕಾಗಿ ಯುಎಇ ಸರಕಾರ ಕೈಗೊಂಡ ಕ್ರಮಗಳನ್ನು ಅವರು ಮೆಚ್ಚಿದರು.
ಸಭೆಯಲ್ಲಿ ಯುಎಇಗೆ ಭಾರತದ ರಾಯಭಾರಿ ದೀಪಕ್ ಮಿತ್ತಲ್, ದುಬೈ ಪ್ರಧಾನ ಕೌನ್ಸಲ್ ಸತೀಶ್ ಕುಮಾರ್ ಸಿವನ್, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂದೀಪ್ ಬಯ್ಯಪ್ಪು ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಮತ್ತು ಸಮುದಾಯ ನಾಯಕರು ಉಪಸ್ಥಿತರಿದ್ದರು.

