ಕೆ.ಆರ್. ಶ್ರೀನಾಥ್, ಅಟ್ಲಾಂಟ
ಅಟ್ಲಾಂಟ: ಶನಿವಾರ ಅಟ್ಲಾಂಟದ ನೃಪತುಂಗ ಕನ್ನಡ ಕೂಟದ ಸದಸ್ಯರು ಸಂತೋಷದಿಂದ ಸಂಕ್ರಾಂತಿ ಹಬ್ಬವನ್ನು “ಸುಗ್ಗಿ ಸಂಭ್ರಮ”ವೆಂದು ಆಚರಿಸಿಕೊಂಡರು.

ಸಮಾರಂಭಕ್ಕೆ ಆಗಮಿಸಿದ ಕನ್ನಡಿಗರನ್ನು ಆರಂಭದಲ್ಲಿ ಎಳ್ಳು, ಬೆಲ್ಲ ನೀಡಿ ಸ್ವಾಗತಿಸಲಾಯಿತು. ಕೇರಂ, ರಂಗೋಲಿ ಬಿಡಿಸುವ, ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಂತ್ಯಾಕ್ಷರಿ ಹಾಗೂ ಕೋಲಾಟ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಆನಂದಿಸಿದರು. ಸ್ಥಳೀಯ ಕನ್ನಡಿಗ ಪ್ರಕಾಶ್ ರಾಮಚಂದ್ರಗೌಡ ತಮ್ಮ ಸುಮಧುರ ಕಂಠದಿಂದ ಹಲವಾರು ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು.

ಸಂಜೆಯ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯಾಗಿ ಕುಂದಾಪುರ ಮೂಲದ ವಿಶ್ವೇಶ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಜಾನಪದ, ಶಾಸ್ತ್ರೀಯ, ಸಿನಿಮಾ ಹಾಗೂ ಸುಗಮ ಸಂಗೀತದ ಹೊಸ ಮಿಶ್ರಣವನ್ನು ಸಭಿಕರಿಗೆ ನೀಡಿ ರಂಜಿಸಿದರು. ವಿಶ್ವೇಶ ಭಟ್ ರೊಂದಿಗೆ ಸ್ಥಳೀಯ ಪ್ರತಿಭೆಗಳಾದ ಜ್ಯೋತ್ಸ್ನಾ ರಾವ್ ಹಾಗೂ ಪ್ರಿಯ ಶ್ರೀನಿವಾಸ್ ಸಹ ಅದ್ಭುತವಾಗಿ ಹಾಡಿದರು. ಭಾಗವಹಿಸಿದ ಕಲಾವಿದರೆಲ್ಲರಿಗೂ ಕೋಕಾ ಕೋಲಾ ಕಂಪನಿಯ ಗ್ಲೋಬಲ್ ಮಾರ್ಕೆಟಿಂಗ್ ಟೆಕ್ನಾಲಜಿಯ ಉಪಾಧ್ಯಕ್ಷರಾದ ಶೇಖರ್ ಗೌಡ ಅವರು ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಮನರಂಜನೆಯ ಕಾರ್ಯಕ್ರಮಗಳನ್ನು ನೃಪತುಂಗ ಕನ್ನಡ ಕೂಟದ ಉಪಾಧ್ಯಕ್ಷರಾದ ಭರತ್ ತೇಜಸ್ವಿ ಯಶಸ್ವಿಯಾಗಿ ನಡೆಸಿದರು. ಕನ್ನಡ ಕೂಟದ ಎಲ್ಲಾ ಪದಾಧಿಕಾರಿಗಳು ಶ್ರಮವಹಿಸಿ ಸುಗ್ಗಿಯ ಹಬ್ಬವನ್ನು ಅಟ್ಲಾಂಟ ಕನ್ನಡಿಗರಿಗೆ ಸಂಭ್ರಮದಿಂದ ಆಚರಿಸುವಂತೆ ಅಯೋಜಿಸಿದ್ದರು.


