ಒಮಾನ್ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ 'ಬೆಲ್ಲದ ಗಟ್ಟಿ'...

ಮಸ್ಕತ್ ನಲ್ಲಿ ತುಳು ಚಿತ್ರರಸಿಕರ ಮನಗೆದ್ದ ‘ಬೆಲ್ಲದ ಗಟ್ಟಿ’ ತುಳು ಸಿನೆಮಾ!

ಒಮಾನ್: ಕೌಟುಂಬಿಕ, ಸಾಮಾಜಿಕ, ಕುತೂಹಲ ಮೂಡಿಸುವ ಥ್ರಿಲ್ಲರ್ ಅಂಶಗಳನ್ನೊಳಗೊಂಡ ತುಳು ಚಲನಚಿತ್ರ ‘ಬೆಲ್ಲದ ಗಟ್ಟಿ’ ಒಮಾನ್ ರಾಷ್ಟ್ರದ ಮಸ್ಕತ್ ನಲ್ಲಿ ಶುಕ್ರವಾರ ಪ್ರದರ್ಶನಗೊಂಡ ಪ್ರೀಮಿಯರ್ ಶೋನಲ್ಲಿ ತುಳುಚಿತ್ರ ಪ್ರೇಮಿಗಳಿಂದ ಚಿತ್ರಮಂದಿರ ಭರ್ತಿಯಾಗಿ ಅದ್ಭುತ ಪ್ರದರ್ಶನ ಕಂಡಿತು.

ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದಲ್ಲಿ ನಡೆಯುವಂತ ಕಥೆಯುಳ್ಳ ಈ ಚಿತ್ರದಲ್ಲಿ, ಹಲವಾರು ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ತುಳುನಾಡಿನ ಸುಂದರ ಬದುಕು, ಕರಾವಳಿ ದೈವಗಳು, ಕೌಟುಂಬಿಕ ಜೀವನ, ಕರಾವಳಿಯ ಸುಂದರ ಪ್ರಕೃತಿ, ಎಲ್ಲವನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಚಿತ್ರಕಥೆಗೆ ತಕ್ಕಂತೆ ಹಿನ್ನೆಲೆ ಸಂಗೀತ ಮತ್ತು ಸುಮಧುರ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಚಿತ್ರದ ಪ್ರಮುಖ ಘಟನೆಗಳ ಸನ್ನಿವೇಶಗಳಲ್ಲಿ ಬರುವ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕರಾವಳಿಯ ಸುಂದರ ದೃಶ್ಯಗಳು ಚಿತ್ರದ ಛಾಯಾಗ್ರಹಣವೂ ಇನ್ನೊಂದು ಪ್ಲಸ್ ಪಾಯಿಂಟ್. ಊರಿನಿಂದ ದೂರ ಇರುವ ಜನರು, ಆ ದೃಶ್ಯಗಳನ್ನು ನೋಡುವಾಗ ತಮ್ಮ ಹುಟ್ಟೂರನ್ನು ನೆನಪಿಸುವಂತೆ ಮಾಡುವಲ್ಲಿ ಛಾಯಾಗ್ರಾಹಕರು ಯಶಸ್ವಿಯಾಗಿದ್ದಾರೆ.

ಚಿತ್ರದ ಚಿತ್ರಕಥೆ ಬಹಳ ಗಟ್ಟಿಯಾಗಿದ್ದು, ಪ್ರೇಕ್ಷಕರನ್ನು ಹಿಡಿದಿಡುವಂತಿದೆ. ಇಪ್ಪತ್ತು ವರ್ಷಗಳ ಹಿಂದಿನ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಸಿನಿಮಾ, ಒಂದು ಸಾಂಪ್ರದಾಯಿಕ ಕುಟುಂಬದಲ್ಲಿ ನಡೆಯುವ ಅನಿರೀಕ್ಷಿತ ಘಟನಾವಳಿಗಳನ್ನು ಅನಾವರಣಗೊಳಿಸುತ್ತದೆ. ಕರಾವಳಿ ಸಿಹಿ ತಿನಿಸು ‘ಬೆಲ್ಲದಗಟ್ಟಿ’ ಈ ಕಥೆಯ ತಿರುವು. ಗರ್ಭಿಣಿ ಜಾನಕಿ ಹಸಿವಾದಾಗ ಆಸೆಯಿಂದ ತಿಂದ ಆ ಒಂದು ಬೆಲ್ಲದಗಟ್ಟಿ ಇಡೀ ಮನೆಯ ಶಾಂತಿಯನ್ನು ಕದಡುತ್ತದೆ. ಮಾವನ ತಪ್ಪು ಕಲ್ಪನೆ ಹಾಗೂ ಸೊಸೆ ಜಲಜಾಳ ನಡುವಿನ ಮಾತಿನ ಚಕಮಕಿ ದೊಡ್ಡ ಸಂಘರ್ಷಕ್ಕೆ ನಾಂದಿ ಹಾಡುತ್ತದೆ. ಮುಂಚಿನಿಂದಲೂ ಸೊಸೆ ಜಲಜಾಳ ಬಗ್ಗೆ ಮಾವನಿಗೆ ಅಸಹನೆ ಇರುತ್ತದೆ.

ದೈವದ ಹೆಸರಿನಲ್ಲಿ ಮಾವ ಮಾಡಿದ ಒಂದು ಸಣ್ಣ ತಪ್ಪು, ಇಡೀ ಮನೆಯ ವಾತಾವರಣವನ್ನೇ ಬದಲಿಸಿಬಿಡುತ್ತದೆ. ಈ ಘಟನೆಯ ನಂತರ ಜಾನಕಿಯ ವರ್ತನೆಯಲ್ಲಿ ವಿಪರೀತ ಬದಲಾವಣೆಗಳಾಗುತ್ತವೆ. ಅವಳ ವಿಚಿತ್ರ ನಡವಳಿಕೆಯಿಂದ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತದೆ. ನಂತರ ನಡೆಯುವ ಘಟನೆಗಳು ಕಥೆಗೆ ಹೊಸ ಆಯಾಮ ನೀಡುತ್ತವೆ. ಕೊನೆಗೆ, ತನ್ನ ತಪ್ಪಿನ ಅರಿವಾಗುವ ಮಾವನಿಗೆ ‘ಮಗಳು ಮತ್ತು ಸೊಸೆ ಇಬ್ಬರೂ ಒಂದೇ’ ಎಂಬ ಸತ್ಯ ದರ್ಶನವಾಗುತ್ತದೆ. ‘ಪರರ ಮನೆಯಿಂದ ಬಂದ ಸೊಸೆಯನ್ನು ಮಗಳಂತೆ ಕಾಣಬೇಕು, ಅವಳ ತವರು ಮನೆಯನ್ನು ಹೀಯಾಳಿಸುವುದು ತಪ್ಪು’ ಎಂಬ ಉದಾತ್ತ ಸಂದೇಶದೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.

ಥ್ರಿಲ್ಲರ್ ಜತೆಗೆ, ಚಿತ್ರದಲ್ಲಿ ಲಘು ಹಾಸ್ಯವೂ ಇದೆ. ಹದಿ ಹರೆಯದ ಯುವಕ ಯುವತಿಯರ ಸನ್ನಿವೇಶ ಮತ್ತು ನಿರ್ದೇಶಕ ರಾಜಾ ಕಟಪಾಡಿಯವರು, ಮಾತು ಬರದ ಮೂಗನಂತೆ ನಟಿಸಿರುವ ದೃಶ್ಯಗಳು ಹಾಸ್ಯದ ಹೊನಲನ್ನು ಹರಿಸುತ್ತವೆ. ಹಾಡುಗಳು ಸಹ ಸುಮಧರವಾಗಿ ಮೂಡಿ ಬಂದಿದೆ. ಚಿತ್ರದ ನಟ ನಟಿಯರು, ಪೋಷಕ ಕಲಾವಿದರು ಎಲ್ಲರೂ ಸ್ಥಳೀಯ ಕಲಾವಿದರು ಎನ್ನುವುದು ಮತ್ತೊಂದು ವಿಶೇಷ. ಪ್ರತಿಯೊಬ್ಬರೂ ಚಿತ್ರದಲ್ಲಿ ಮನಮುಟ್ಟುವಂತೆ ನಟಿಸಿದ್ದಾರೆ, ತೆರೆ ಮೇಲೆ ಪ್ರತಿ ಪಾತ್ರವು ತುಂಬಾ ಸರಳವಾಗಿ ನೈಜವಾಗಿ ಮೂಡಿ ಬರಲು ನಿರ್ದೇಶಕರು ಚಿತ್ರದ ಪ್ರಮುಖ ಪಾತ್ರದಾರಿಗಳಿಂದ ಕಥೆಗೆ ಬೇಕಾದ ನಟನೆಯನ್ನು ತೆಗೆಸಿದ್ದಾರೆ. ಪ್ರಮುಖ ಪಾತ್ರಧಾರಿಗಳ ಪ್ರಭುದ್ದತೆಯನ್ನು ಪ್ರತಿ ದೃಶ್ಯಗಳಲ್ಲಿ ಕಾಣಬಹುದು. ನಿರ್ಮಾಪಕ ರಾಮಕೃಷ್ಣ ಸುಜೀರ್ ಬಾರ್ದಿಲ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದು ಮಾತ್ರವಲ್ಲದೆ, ಭಟ್ಟರ ಪಾತ್ರದಲ್ಲಿ ಅನುಭವ ನಟರಂತೆ ಅದ್ಭುತವಾಗಿ ನಟಿಸಿದ್ದಾರೆ.
ವಿದ್ಯಾವಂತ ಯುವಕರು ಊರಿನಲ್ಲಿ ದುಡಿಯಲು ಸಾಧ್ಯವಿಲ್ಲ ಎಂದು ಹುಟ್ಟಿದ ಊರನ್ನ ಬಿಟ್ಟು ಮುಂಬಯಿಗೆ ಹೋಗಿ, ಅಲ್ಲಿ ಹೋಟೆಲ್ ಬಾರ್ ಗಳಲ್ಲಿ ದುಡಿದು ಉತ್ತಮವಾಗಿ ಹಣ ಸಂಪಾದಿಸುತ್ತಾರೆ. ಅವರ ಜೀವನವನ್ನು ನೋಡಿ ಬೇರೆಯವರು ಸಹ ಊರನ್ನು ಬಿಟ್ಟು ಮುಂಬಯಿಗೆ ಹೋಗಿ ಹಣ ಸಂಪಾದಿಸಲು ಪ್ರೇರೆಪಿಸುತ್ತದೆ, ಆದರೆ ಸ್ವಂತ ಊರಿನಲ್ಲಿ ರಾಜನಂತೆ ಬದುಕುವ ನೆಮ್ಮದಿ ಪರ ಊರಿನಲ್ಲಿ ಇಲ್ಲ ಎನ್ನುವ ಸ್ಮೂಕ್ಷ ಸಂದೇಶವನ್ನು ನಿರ್ದೇಶಕರು ನೀಡಿದ್ದಾರೆ. ಒಟ್ಟಾರೆ ಚಿತ್ರವು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರ ರಸಿಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬರಹ: ಪಿ.ಎಸ್.ರಂಗನಾಥ, ಮಸ್ಕತ್, ಒಮಾನ್

Hot this week

ಖತರ್‌ ಕರ್ನಾಟಕ ಸಂಘದಿಂದ ‘ತಾಯಂದಿರ ದಿನ 2026’ ಆಚರಣೆ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC)...

ಮೇ 15ರಂದು ಬಹರೈನ್ ಕನ್ನಡ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್...

KCWA holds General Body Meeting in Kuwait, announces major cultural event in December

Kuwait City: Kuwait Canara Welfare Association (KCWA) held its...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ...

ದ್ವೀಪ ರಾಷ್ಟ್ರ ಬಹರೈನ್‌ನಲ್ಲಿ ಸಾರ್ಥಕೆತೆಯನ್ನು ಕಂಡ ಮಂಗಳೂರಿನ ಹೃದಯವಂತ ಅಮರನಾಥ್ ರೈ!

ಬಹರೈನ್‌: ಪ್ರಾಮಾಣಿಕತೆ ಮತ್ತು ದುಡಿಮೆ—ಈ ಎರಡು ಮೌಲ್ಯಗಳು ಒಬ್ಬನ ಬದುಕನ್ನು ಎಷ್ಟು...

Related Articles

Popular Categories