ದುಬೈ: ರಾಮನವಮಿ ಪ್ರಯುಕ್ತ ಶಂಕರ ಸೇವಾ ಸಮಿತಿಯವರು ದುಬೈಯ ಭಕ್ತಾಧಿಗಳನ್ನೆಲ್ಲ ಸೇರಿಸಿಕೊಂಡು ರವಿವಾರ ಇಲ್ಲಿನ ಅಲ್ ಐನ್ ರೋಡಿನ ಆಶಿಯಾನ ಫಾರ್ಮ್ ಹೌಸ್’ನಲ್ಲಿ ರಾಮನವಮಿಯನ್ನು ಸಂಭ್ರಮ, ಸಡಗರ ಹಾಗೂ ಶ್ರದ್ಧ ಭಕ್ತಿಯಿಂದ ಆಚರಿಸಿದರು.

ಈ ಕಾರ್ಯಕ್ರಮದಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಹಾಗು ವಯೋವೃದ್ಧರು ಭಾಗವಹಿಸಿದ್ದರು. ಮಕ್ಕಳಿಗೆ ರಾಮಾಯಣ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು, ಜೊತೆಗೆ ಮಕ್ಕಳಿಗೆ ರಾಮನಾಮವನ್ನು 1008 ಬಾರಿ ಬರೆಯುವ ಅವಕಾಶವನ್ನು ಒದಗಿಸಲಾಗಿತ್ತು. ಇದೇ ವೇಳೆ ರಾಮಾಯಣಕ್ಕೆ ಸಂಬಂಧಿಸಿದಂತೆ ಮಕ್ಕಳು ರಾಮ, ಲಕ್ಶ್ಮಣ, ಸೀತೆಯ ವೇಷದಲ್ಲಿ ಬಂದು ದೇವರಿಗೆ ಅಭಿಷೇಕ ಮಾಡಿದರು. ರಾಮನ ಕುರಿತ ಹಾಡುಗಳ ಮೇಲೆ ದೀಪಾ ರಾಜೀವ್ ಅವರ ತಂಡದ ಮಕ್ಕಳು ನೃತ್ಯವನ್ನು ಮಾಡಿದರು.




ಬೆಳಗ್ಗೆ 9.30ರಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಅಭಿಷೇಕ, ಶ್ರೀರಾಮ ಅಷ್ಟೋತ್ತರ, ಶ್ರೀರಾಮ ತಾರಕ ಅಷ್ಟೋತ್ತರ, ಬಾಲ ರಾಮಾಯಣ, ಶ್ರೀ ರಾಮರಕ್ಷಾ ಸ್ತೋತ್ರ, ಅಷ್ಟಾವಧಾನ ಪೂಜಾ ಕೈಂಕರ್ಯಗಳು ನಡೆಯಿತು. ಇದರ ಜೊತೆ ಸುಮಾರು 30 ಮಂದಿ ಭಜನೆಯನ್ನು ನಡೆಸಿಕೊಟ್ಟರು. ಬಳಿಕ ಪುರೋಹಿತರಾದ ಲಕ್ಷ್ಮೀಶ ಅವರ ನೇತೃತ್ವದಲ್ಲಿ ಮಹಾಮಂಗಳಾರತಿ ಹಾಗು ಎಲ್ಲ ಪೂಜಾ ವಿಧಿ ವಿಧಾನಗಳು ಜರಗಿದವು. ಅನಂತರ ತೀರ್ಥ ಪ್ರಸಾದ ಹಾಗು ರಾಮನವಮಿಯ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ವರದಿ: ಆರತಿ ಅಡಿಗ