ದುಬೈ: “ಅಂತಾರಾಷ್ಟ್ರೀಯ ಗಂಧದ ಗುಡಿ ಪ್ರಶಸ್ತಿ – 2025” ಪ್ರಧಾನ ಕಾರ್ಯಕ್ರಮ ಫೆಬ್ರವರಿ 16ರಂದು ದುಬೈನಲ್ಲಿ ಅದ್ದೂರಿಯಾಗಿ ಜರಗಲಿದ್ದು, ಇದರ ಸುದ್ದಿಗೋಷ್ಠಿ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ದುಬೈಯ ಜದ್ದಾಫ್’ನ ಹೋಟೆಲ್ Double Tree by Hiltonನಲ್ಲಿ ಜರುಗಿತು.
ದುಬೈ ಪೊಲೀಸ್ ಮೇಜರ್ ಒಮರ್ ಅಲ್ ಮರ್ಝುಖಿ, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕ ಪ್ರವೀಣ್ ಕುಮಾರ್ ಶೆಟ್ಟಿ,ಬ್ಲೂ ರಾಯಲ್ ಗ್ರೂಪ್ ಆಫ್ ನ ಆಡಳಿತ ನಿರ್ದೇಶಕರಾದ ರೊನಾಲ್ಡ್ ಮಾರ್ಟಿಸ್, ಅಕ್ಮೆ ಬಿಲ್ಡಿಂಗ್ ಮೆಟಿರಿಯಲ್ಸ್ ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಟ್ರಯೇಸ್ಟ ಪ್ರೋಪರ್ಟೀಸ್ ನ ವೈಭವ್, ಯುಎಇಯ ರಕ್ತದಾನ ಶಿಬಿರದ ಸಂಘಟಕ ಬಾಲಕೃಷ್ಣ ಸಾಲಿಯಾನ್, ಚಲನಚಿತ್ರ ನಿರ್ಮಾಪಕರಾದ ಫ್ರಾಂಕ್ ಫರ್ನಾಂಡೀಸ್ ಅವರು ಕಾರ್ಯಕ್ರಮದ ಉದ್ಘಾಟನಾ ದೀಪವನ್ನು ಉದ್ಘಾಟಿಸಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು.

ಜಿ.ಕೆ.ಡಿ ಗ್ರೂಪ್ ನ ಆಡಳಿತ ನಿರ್ದೇಶಕ ದೀಪಕ್ ಗೌಡ ಮತ್ತು ಪೀಟರ್ ಜಾಯ್ಸಾನ್ ಅವರು ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮಕ್ಕೆ ಬಂದ ಗಣ್ಯತಿ ಗಣ್ಯರನ್ನು ಹಾಗೂ ಯುಎಇಯ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳನ್ನು ಸ್ವಾಗತಿಸಿದರು.
ನಂತರ ಯುಎಇಯ ಎಲ್ಲಾ ತುಳು, ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ, ಈ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮ ಯಶಸ್ವಿಯಾಗಿ ಜರಗಲಿ ಹಾಗೂ ತಮ್ಮ ತಮ್ಮ ಸಂಘ ಸಂಸ್ಥೆಗಳ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಜಿ.ಕೆ.ಡಿ ಗ್ರೂಪ್ ಆಡಳಿತ ನಿರ್ದೇಶಕರಾದ ದೀಪಕ್ ಗೌಡ, ಕನ್ನಡದ ಹೆಮ್ಮೆಯ ಅಂತಾರಾಷ್ಟ್ರೀಯ ಸಾಧಕರ ಅಪ್ರತಿಮ ಸಾಧನೆಯನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುವ ಒಂದು ಅಂತಾರಾಷ್ಟ್ರೀಯ ಮಟ್ಟದ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ದುಬೈನಲ್ಲಿ ಮಾಡಬೇಕು ಹಾಗೂ ಯುಎಇಯಲ್ಲಿ ಇರುವ ಎಲ್ಲಾ ಕನ್ಮಡ ಸಂಘಟನೆಯ ಕನ್ನಡಿಗರನ್ನು ಒಟ್ಟುಗೂಡಿಸುವ ಕಾರ್ಯಕ್ರಮ ಮಾಡಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಈ ಕಾರ್ಯಕ್ರಮಕ್ಕೆ ಯುಎಇಯಲ್ಲಿ ಇರುವ ಎಲ್ಲಾ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಫೆಬ್ರವರಿ 16 ರಂದು ದುಬೈಯ ಶೇಖ್ ಝಾಯೆದ್ ರಸ್ತೆಯ ಮಿಲೇನಿಯಮ್ ಹೋಟೆಲ್ ನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವು ಕನ್ನಡ ಚಂದನವನದ ಕಲೆಯನ್ನು ಸಂಭ್ರಮಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಸರಕಾರದ ಸಚಿವ ಶಿವರಾಜ್ ತಂಗಡಗಿ, ಡಿ.ಕೆ.ಸುರೇಶ್, ಯದುವೀರ್ ಒಡೆಯರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಅಶ್ವಿನಿ ಪುನಿತ್ ರಾಜ್ ಕುಮಾರ್, ರಾಕ್ ಲೈನ್ ವೆಂಕಟೇಶ್ ಹಾಗೂ ಇನ್ನಿತರ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಚಂದನವನದ ಸಿನಿ ತಾರೆಯರಿಂದ ಮತ್ತು ಯುಎಇಯ ಕಲಾವಿದರಿಂದ ನೃತ್ಯ ವೈವಿಧ್ಯ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ತಂಡದವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಚಂದನವನದ ಖ್ಯಾತ ನಟ ವಿಜಯ ರಾಘವೇಂದ್ರ ಮತ್ತು ಕನ್ನಡದ ಖ್ಯಾತ ನಿರೂಪಕಿ ಅನುಶ್ರೀಯವರು ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.


ಚಿತ್ರರಂಗ, ಕ್ರೀಡಾ ಕ್ಷೇತ್ರ, ಪತ್ರಿಕೋದ್ಯಮ, ವೈದ್ಯಕೀಯ ಸೇವೆ, ಶಿಕ್ಷಣ, ಕಾನೂನು ಹೀಗೆ ಹಲವು ಕ್ಷೇತ್ರದ ಸಾಧಕರಿಗೆ ವಿಶೇಷ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು. ಮಧ್ಯಾಹ್ನ 2.30 ರಿಂದ ರಾತ್ರಿ 8.30 ವರೆಗೆ ನಡೆಯುವ ಕಾರ್ಯಕ್ರಮವು ಉಚಿತ ಪ್ರವೇಶವಾಗಿದ್ದು ಹಾಗೂ ರಾತ್ರಿ ಬೋಜನದ ವ್ಯವಸ್ಥೆ ಮಾಡಲಾಗದ್ದು ಯುಎಇಯ ಎಲ್ಲಾ ಕನ್ನಡಿಗರು ಭಾಗವಹಿಸಬೇಕೆಂದು ಸಂಘಟಕರಾದ ಪೀಟರ್ ಜಾಯ್ಸಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದುಬೈಯ ಕನ್ನಡ ಕಾರ್ಯಕ್ರಮಗಳ ಪ್ರಸಿದ್ಧ ನಿರೂಪಕಿ ಶ್ರೀಮತಿ ಆರತಿ ಅಡಿಗ ಕಾರ್ಯಕ್ರಮದ ನಿರೂಪಿಸಿದರು.
ವರದಿ : ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)