ದುಬೈ: ದುಬೈಯ ‘ನ್ಯೂ ಅಕಾಡೆಮಿ ಸ್ಕೂಲ್’ನಲ್ಲಿ ರವಿವಾರ ಸಂಜೆ ವಿಂಶತಿ ಉತ್ಸವದ ಸ್ಮರಣ ಸಂಚಿಕೆ ‘ವಿಪ್ರ ಸ್ಪಂದನ’ ಲೋಕಾರ್ಪಣೆಗೊಂಡಿತು.

ಇದರಲ್ಲಿ ಯುಎಇ ಬ್ರಾಹ್ಮಣ ಸಮಾಜದ 20 ವರ್ಷಗಳ ಸಾಧನೆಯ ಹೆಜ್ಜೆ ಗುರುತುಗಳು, ವಿಂಶತಿ ವರ್ಷದ ಆಚರಣೆಗೆ ಹಮ್ಮಿಕೊಂಡ ದಾಖಲೆಯ 20 ಕಾರ್ಯಕ್ರಮಗಳ ಚಿತ್ರ ವರದಿಗಳೊಂದಿಗೆ, ಇಂಗ್ಲಿಷ್, ಕನ್ನಡ ಲೇಖನಗಳು, ಸಮಾಜದ ಗಣ್ಯ ಮತ್ತು ಹೆಸರಾಂತ ಲೇಖಕರಾದ ಡಾ.ನಾ.ಮೊಗಸಾಲೆ, ಡಾ.ಎಂ. ಪ್ರಭಾಕರ ಜೋಶಿ, ಡಾ.ಶ್ರೀಕಾಂತ್ ಬಾಯರಿ, ಭುವನೇಶ್ವರಿ ಹೆಗಡೆ, ಅನಿತಾ ನರೇಶ್ ಮಂಚಿ ಮೊದಲಾದವರ ಲೇಖನಗಳೊಂದಿಗೆ ಸ್ಥಳೀಯ ಬರಹಗಾರರ ಲೇಖನಗಳು, ಸಮಾಜದ ಪ್ರೋತ್ಸಹಕರ ಚಿತ್ರಪುಟಗಳು, ಮುಂತಾದ ಆಕರ್ಷಕ ವಿಷಯಗಳು ಮನೋಜ್ಞವಾಗಿ ವಿನ್ಯಾಸಗೊಂಡಿವೆ.
ವಿಪ್ರ ಸ್ಪಂದನ ಸ್ಮರಣ ಸಂಚಿಕೆಗೆ ಸುಧಾಕರ ರಾವ್ ಪೇಜಾವರ ಅವರು ಗೌರವ ಸಂಪಾದಕರಾಗಿದ್ದು, ಹಿರಿಯ ಲೇಖಕ ಗೋಪಿನಾಥ್ ರಾವ್ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ಸಹ ಸಂಪಾದಕರಾಗಿ ಸಮಾಜದ ಹಿರಿಯ ಮುತ್ಸದ್ದಿ ಮತ್ತು ಬರಹಗಾರ ಶ್ರೀನಿವಾಸ್ ಆಚಾರ್ ಮತ್ತು ಯುಎಇ ಕನ್ನಡದ ಪ್ರತಿಭಾವಂತ ನಿರೂಪಕಿ ಆರತಿ ಅಡಿಗ ಅವರು ಸೇವೆ ಸಲ್ಲಿಸಿದ್ದಾರೆ. ವಿನ್ಯಾಸ, ಮುದ್ರಣ, ಸಂಕಲನ, ಛಾಯಾಚಿತ್ರ ಮುಂತಾದ ತಾಂತ್ರಿಕ ವಿಭಾಗಗಳಲ್ಲಿ ಶಿವರಾಮ್ ಭಟ್, ಪ್ರಕಾಶ್ ಉಪಾಧ್ಯ, ಸುಧೀಂದ್ರ ಐತಾಳ್ ಮತ್ತು ರಾಮಮೂರ್ತಿಯವರು ಅಹರ್ನಿಶಿ ದುಡಿದಿದ್ದಾರೆ.
ವಿಪ್ರ ಸ್ಪಂದನ ಹೊತ್ತಗೆಯನ್ನು ಹಿರಿಯ ಉದ್ಯಮಿಗಳು ಮತ್ತು ಸಮಾಜದ ಹಿತೈಷಿಗಳಾದ ಪುತ್ತಿಗೆ ವಾಸುದೇವ ಭಟ್ ಮತ್ತು ಗೋಪಿನಾಥ್ ಏಳಿಚಿತ್ತಾಯರು ಸಂಪಾದಕ ಮಂಡಳಿಯೊಡಗೂಡಿ ಲೋಕಾರ್ಪಣೆಗೈದರು. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಸಮಾಜ ಬಾಂಧವರು ಮತ್ತು ಸಹ ಸಮಾಜದ ಮುಖಂಡರುಗಳಿಗೆ ಪ್ರಥಮ ಪ್ರತಿಗಳನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಸದಸ್ಯರು “ಸಂಸ್ಕೃತಿ ಸಂಧ್ಯಾ” ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಪುಟಾಣಿಗಳಿಗೆ ಶ್ಲೋಕ ಸ್ಪರ್ಧೆ ಮತ್ತು ಇತರ ವಯೋಮಾನದ ಮಕ್ಕಳಿಗೆ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಸಮಾಜದ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.