ದೋಹಾ: ಕರ್ನಾಟಕದ ಮಂಗಳೂರು ಮೂಲದ ಯುವಕ ಎಸ್ಸಾಮ್ ಮನ್ಸೂರ್, ಖತರ್ ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮೆರೆದಿದ್ದಾರೆ.
ಖತರ್ನ ದೋಹಾದ ಯುನಿವರ್ಸಿಟಿ ಆಫ್ ದೋಹಾ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ (ಯುಡಿಎಸ್ಟಿ)ಯಲ್ಲಿ ಮೊದಲ ವರ್ಷದ ಪದವಿ ವ್ಯಾಸಾಂಗವನ್ನು ನಡೆಸುತ್ತಿರುವ ಎಸ್ಸಾಮ್ ಮನ್ಸೂರ್, ಬ್ಯಾರಿ ಸಮುದಾಯದಿಂದ ಖತರ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಮೊದಲ ಯುವಕ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.
ಪ್ರಸ್ತುತ ಖತರ್ನ ದೋಹಾದಲ್ಲಿ ನೆಲೆಸಿರುವ ಮನ್ಸೂರ್ ಹಸನಬ್ಬ ಹೆಂತಾರ್ ಹಾಗು ರಝಿಯಾ ಸುಲೈಮಾನ್ ಸಾಲ್ಮರ ಅವರ ಹಿರಿಯ ಪುತ್ರನಾಗಿದ್ದು, ಬಾಲ್ಯದಿಂದಲೇ ಕ್ರಿಕೆಟಿನ ಅಭ್ಯಾಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಎಸ್ಸಾಮ್ ಮನ್ಸೂರ್, ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ ಖತರ್ ಅಂಡರ್ 19 ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
ಖತರ್ ಮತ್ತು ಕರಾವಳಿ ಕರ್ನಾಟಕದ ಜನರು ಎಸ್ಸಾಮ್ ಸಾಧನೆಯನ್ನು ಶ್ಲಾಘಿಸಿದ್ದು, ಮುಂದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಶುಭ ಹಾರೈಸಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಅಂಡರ್ 19 ಎಸಿಸಿ ಪ್ರೀಮಿಯರ್ ಕಪ್ನಲ್ಲಿ ಭಾಗವಹಿಸಲು ಎಸ್ಸಾಮ್ ನವೆಂಬರ್ 17ರಂದು ತೆರಳಲಿದ್ದು, ಈ ಟೂರ್ನಿಯಲ್ಲಿ ಆಡಲಿದ್ದಾರೆ.
ಪ್ರೀಮಿಯರ್ ಕಪ್ ಮತ್ತು ಮುಂದಿನ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮುವ ಭರವಸೆ ಇದೆ ಎಂದು ಎಸ್ಸಾಮ್ ತಂದೆ ಇಂಜಿನಿಯರ್ ಆಗಿರುವ ಮನ್ಸೂರ್ ಹಸನಬ್ಬ ಹಾಗೂ ತಾಯಿ ರಝಿಯಾ ಸುಲೈಮಾನ್ ಮಗನ ಕ್ರಿಕೆಟ್ ಭವಿಷ್ಯದ ಬಗ್ಗೆ ಹೇಳಿಕೊಂಡಿದ್ದಾರೆ.
ಕ್ರಿಕೆಟ್ ಎಸ್ಸಾಮ್ ಮನ್ಸೂರ್ ನ ನೆಚ್ಚಿನ ಕ್ರೀಡೆಯಾಗಿದ್ದು, ಸತತ ಅಭ್ಯಾಸ, ಕಠಿಣ ಪರಿಶ್ರಮವಹಿಸಿದ್ದರಿಂದ ಎಸ್ಸಾಮ್ ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಎಸ್ಸಾಮ್ ಖತರ್ ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವುದು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಬ್ಯಾರಿ ಸಮುದಾಯಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಕುಟುಂಬಸ್ಥರು ಸಂತಸವನ್ನು ಹಂಚಿಕೊಂಡಿದ್ದಾರೆ.


