ಖತರ್ಖತರ್‌ ಕರ್ನಾಟಕ ಸಂಘದಿಂದ 'ತಾಯಂದಿರ ದಿನ 2026' ಆಚರಣೆ

ಖತರ್‌ ಕರ್ನಾಟಕ ಸಂಘದಿಂದ ‘ತಾಯಂದಿರ ದಿನ 2026’ ಆಚರಣೆ

ದೋಹಾ(ಖತರ್‌): ಕರ್ನಾಟಕ ಸಂಘ ಖತರ್‌ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಖತರ್‌ನ ಭಾರತೀಯ ದೂತಾವಾಸದ ಆಶ್ರಯದಲ್ಲಿ ಇತ್ತೀಚೆಗೆ ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಟ್ರೈನಿಂಗ್ ಅಕಾಡೆಮಿಯಲ್ಲಿ ತಾಯಂದಿರ ದಿನಾಚರಣೆ 2026 ಅನ್ನು ಅತ್ಯಂತ ಸಂಭ್ರಮ ಹಾಗೂ ಆತ್ಮೀಯತೆಯಿಂದ ಆಚರಿಸಲಾಯಿತು.

‘ಮಾತೃ ದೇವೋ ಭವ’ ಎಂಬ ಘೋಷವಾಕ್ಯದಡಿ ನಡೆದ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ಖತರ್‌ ಸದಸ್ಯರು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಯ್ತನದ ಮಹತ್ವವನ್ನು ಗೌರವಿಸುವುದರ ಜೊತೆಗೆ, ಖತರ್‌ನ ಕನ್ನಡ ಸಮುದಾಯದ ಸಾಂಸ್ಕೃತಿಕ ಮೌಲ್ಯಗಳು ಮತ್ತು ಏಕತೆಯನ್ನು ಮತ್ತಷ್ಟು ಬಲಪಡಿಸಿದರು.

ಸಕಾರಾತ್ಮಕತೆ, ಜ್ಞಾನ ಮತ್ತು ಶುಭಾರಂಭದ ಸಂಕೇತವಾದ ಸಾಂಪ್ರದಾಯಿಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದನಂತರ, ಕುಮಾರಿ ಸಮನ್ವಿ ಅವರ ಸುಮಧುರ ಕಂಠದಿಂದ ಮೂಡಿಬಂದ ‘ಅಮ್ಮ ನಿನ್ನ ಎದೆಯಾಳದಿಂದ’ ಗೀತೆಯು ಕಾರ್ಯಕ್ರಮಕ್ಕೆ ಮಂಗಳಮಯ ನಾಂದಿ ಹಾಡಿತು.

ನಂತರ ಸಂಘದ ಉಪಾಧ್ಯಕ್ಷರಾದ ಅನಿಲ ಭಾಸಗಿ ಅವರು ಆತ್ಮೀಯ ಸ್ವಾಗತ ಭಾಷಣದ ಮೂಲಕ ಸಭಿಕರನ್ನು ಬರಮಾಡಿಕೊಂಡು ಕಾರ್ಯಕ್ರಮಕ್ಕೆ ಸೌಹಾರ್ದಪೂರ್ಣ ಆರಂಭ ನೀಡಿದರು. ನಂತರ ಕರ್ನಾಟಕ ಸಂಘ ಖತರ್‌ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, ಸಂಘದ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಮುದಾಯದ ಉತ್ಸಾಹಭರಿತ ಭಾಗವಹಿಸುವಿಕೆಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳು ತಮ್ಮ ಪ್ರೇರಣಾದಾಯಕ ಹಾಗೂ ಅರ್ಥಪೂರ್ಣ ಸಂದೇಶಗಳನ್ನು ಹಂಚಿಕೊಂಡರು. ಮುಖ್ಯ ಅತಿಥಿಯಾಗಿದ್ದ ಡಾ.ಫೈಕಾ ಅಶ್ಕನಾನಿ(ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರು, ಪೌರಾಡಳಿತ ಸಚಿವಾಲಯ) ಅವರು, ತಾಯಂದಿರ ವಿಶ್ವವ್ಯಾಪಿ ಮಹತ್ವ ಹಾಗೂ ಸಮಾಜ ನಿರ್ಮಾಣದಲ್ಲಿ ಅವರ ಪಾತ್ರದ ಕುರಿತು ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಭಾರತೀಯ ರಾಯಭಾರ ಕಚೇರಿಯ ಸಹಾಯಕ ಕಾರ್ಯದರ್ಶಿ ಬಿಂದು ಎನ್. ನಾಯರ್ ಅವರು ಭಾರತೀಯ ವಲಸೆ ಸಮುದಾಯದಲ್ಲಿ ತಾಯ್ತನದ ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿದರು.

ಗೌರವ ಅತಿಥಿಗಳಾದ ಡಾ.ರೋಹಿಣಿ ಪುಟ್ಟೇಗೌಡ ಮತ್ತು ಹಮೀದಾ ಖಾದರ್ ಅವರು ಆರೋಗ್ಯ, ಕಲ್ಯಾಣ ಮತ್ತು ಶಿಕ್ಷಣ ಕುರಿತ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಇದೇ ಸಂದರ್ಭದಲ್ಲಿ ಐಸಿಸಿ ಪ್ರತಿನಿಧಿಗಳು, ಖತರ್‌ನ ಭಾರತೀಯ ಸಂಘಟನೆಗಳು ಹಾಗೂ ಕರ್ನಾಟಕ ಮೂಲದ ವಿವಿಧ ಭ್ರಾತೃ ಸಂಘಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಐಸಿಸಿ ಉಪಾಧ್ಯಕ್ಷ ಶಂತನು ದೇಶಪಾಂಡೆ, ಕರ್ನಾಟಕ ಸಂಘದ ಸಲಹಾ ಸಮಿತಿಯ ಸದಸ್ಯರಾದ ಹಾಗೂ ಐಸಿಬಿಎಫ್ ಪ್ರಧಾನ ಕಾರ್ಯದರ್ಶಿ ದೀಪಕ್ ಶೆಟ್ಟಿ, ಸಂಘದ ಸಲಹಾ ಸಮಿತಿಯ ಸದಸ್ಯರಾದ ಅರುಣ್ ಕುಮಾರ್, ವೀರೇಶ್ ಮನ್ನಂಗಿ, ಡಾ.ಸಂಜಯ್ ಕುದರಿ ಹಾಗೂ ಐಸಿಸಿ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಆಗಮನಿಸಿದವರಿಗಾಗಿ ವಿವಿಧ ಮನರಂಜನಾ ಆಟಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮವು ಸಂಭ್ರಮ, ಪರಸ್ಪರ ಆತ್ಮೀಯತೆ ಮತ್ತು ಸಮುದಾಯ ಬಾಂಧವ್ಯದಿಂದ ಕಂಗೊಳಿಸಿತು.

ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕ ಸಂಘ ಖತರ್‌ ಸಾಂಸ್ಕೃತಿಕ ಕಾರ್ಯದರ್ಶಿ ಭಾವನಾ ಅವರು ವಂದನಾರ್ಪಣೆ ಸಲ್ಲಿಸಿದರು. ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಸಮಾರೋಪಗೊಂಡಿತು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸ್ಥಳಾವಕಾಶ ಕಲ್ಪಿಸಿದ ವೈಬ್ರೆಂಟ್ ಇಂಡಸ್ಟ್ರಿಯಲ್ ಸೇಫ್ಟಿ ಟ್ರೈನಿಂಗ್ ಅಕಾಡೆಮಿಗೆ ಕರ್ನಾಟಕ ಸಂಘ ಖತರ್‌ನಿಂದ ಕೃತಜ್ಞತೆ ಸಲ್ಲಿಸಲಾಯಿತು. ಜೊತೆಗೆ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ ನ್ಯೂ ರಿಷಾ ಲೇಡೀಸ್ಸಲೂನ್, ಎಫ್‌ಎನ್‌ಪಿ.ಕ್ಯೂಎ, ಓನ್ಲಿ ಕಾಫಿ ಹಾಗೂ ಪ್ರಿಂಟ್ಶಾಪ್ ಸರ್ವೀಸಸ್ ಸಂಸ್ಥೆಗಳಿಗೆ ಧನ್ಯವಾದಗಳನ್ನು ತಿಳಿಸಿತು.

Hot this week

ಮೇ 15ರಂದು ಬಹರೈನ್ ಕನ್ನಡ ಸಂಘದ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ

ಕನ್ನಡ ಸಂಘ ಬಹರೈನ್ ಆಶ್ರಯದಲ್ಲಿ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್...

KCWA holds General Body Meeting in Kuwait, announces major cultural event in December

Kuwait City: Kuwait Canara Welfare Association (KCWA) held its...

ನ್ಯೂಯಾರ್ಕ್; ಆಲ್ಬನಿ ಕನ್ನಡಿಗರಿಂದ ಮಸಾಲ ದೋಸೆ ಬ್ರಂಚ್: ಹಿಂದೂ ದೇವಾಲಯಕ್ಕೆ ಧನ ಸಹಾಯ

ನ್ಯೂಯಾರ್ಕ್ ರಾಜ್ಯದ ರಾಜಧಾನಿ ಅಲ್ಬನಿಯಲ್ಲಿರುವ ಕನ್ನಡಿಗರು, ಇತ್ತೀಚೆಗೆ ಇಲ್ಲಿರುವ ಹಿಂದೂ ದೇವಸ್ಥಾನದಲ್ಲಿ...

ದ್ವೀಪ ರಾಷ್ಟ್ರ ಬಹರೈನ್‌ನಲ್ಲಿ ಸಾರ್ಥಕೆತೆಯನ್ನು ಕಂಡ ಮಂಗಳೂರಿನ ಹೃದಯವಂತ ಅಮರನಾಥ್ ರೈ!

ಬಹರೈನ್‌: ಪ್ರಾಮಾಣಿಕತೆ ಮತ್ತು ದುಡಿಮೆ—ಈ ಎರಡು ಮೌಲ್ಯಗಳು ಒಬ್ಬನ ಬದುಕನ್ನು ಎಷ್ಟು...

ಜರ್ಮನಿ: ರೈನ್ ಮೈನ್ ಕನ್ನಡ ಸಂಘದಿಂದ ಸಂಭ್ರಮದ ಕನ್ನಡ ಕಲಿ ದಿನಾಚರಣೆ; ಗಮನ ಸೆಳೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ

ಜರ್ಮನಿ: ದಶಕದ ಸಂಭ್ರಮದಲ್ಲಿರುವ ಫ್ರಾಂಕ್ಫರ್ಟ್ ನ ರೈನ್ ಮೈನ್ ಕನ್ನಡ ಸಂಘ...

Related Articles

Popular Categories