ದುಬೈ: ಯುಎಇಯಲ್ಲಿರುವ ಕನ್ನಡಿಗರ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಸಂಘಟನೆಯಾದ ಕರ್ನಾಟಕ ಸಂಘ ದುಬೈ (Karnataka Sangha Dubai – KSD), 2026ರ ನವೆಂಬರ್ 1ರಂದು 71ನೇ ಕರ್ನಾಟಕ ರಾಜ್ಯೋತ್ಸವವನ್ನು ದುಬೈಯಲ್ಲಿ ಅದ್ದೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

1985ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಘ ದುಬೈ, ಕಳೆದ 41 ವರ್ಷಗಳಿಂದ ದುಬೈ ಹಾಗೂ ಉತ್ತರ ಎಮಿರೇಟ್ಸ್ನ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಸೇವೆಯನ್ನು ತನ್ನ ಧ್ಯೇಯವನ್ನಾಗಿಸಿಕೊಂಡಿರುವ ಸಂಘವು, ಸಂಕಷ್ಟದ ಸಂದರ್ಭಗಳಲ್ಲಿ ಕನ್ನಡಿಗರ ನೆರವಿಗೆ ಧಾವಿಸುವ ಮೂಲಕ ಪ್ರವಾಸಿ ಸಮುದಾಯದ ವಿಶ್ವಾಸಾರ್ಹ ಸಂಘಟನೆಯಾಗಿ ಗುರುತಿಸಿಕೊಂಡಿದೆ.
ಸಂಘದ ನಿರಂತರ ಸಮಾಜಮುಖಿ ಸೇವೆ ಹಾಗೂ ಕನ್ನಡದ ಅಭಿವೃದ್ಧಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು 2005ರಲ್ಲಿ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಗೌರವವು ಸಂಘದ ಸೇವಾ ಮನೋಭಾವ ಮತ್ತು ಸಾಧನೆಗೆ ದೊರೆತ ಮಹತ್ತರ ಮಾನ್ಯತೆಯಾಗಿದೆ.
ಈ ಬಾರಿ ನಡೆಯಲಿರುವ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಕನ್ನಡಿಗರು, ಗಣ್ಯ ಅತಿಥಿಗಳು, ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. ಸಾಂಸ್ಕೃತಿಕ ವೈಭವ, ಕನ್ನಡದ ಸಾಂಪ್ರದಾಯಿಕ ಕಲೆ, ಸಂಗೀತ, ನೃತ್ಯ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳ ಮೂಲಕ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಲು ಸಂಘ ಸಿದ್ಧತೆ ನಡೆಸಿದೆ.
ಯುಎಇಯಲ್ಲಿರುವ ಎಲ್ಲಾ ಕನ್ನಡಿಗರು ತಮ್ಮ ಕುಟುಂಬ ಸಮೇತರಾಗಿ ರಾಜ್ಯೋತ್ಸವದಲ್ಲಿ ಭಾಗವಹಿಸಿ, ಕನ್ನಡದ ನಾಡು-ನುಡಿ, ಸಂಸ್ಕೃತಿ ಮತ್ತು ಏಕತೆಯ ಹಬ್ಬವನ್ನು ಸಂಭ್ರಮಿಸುವಂತೆ ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಪದಾಧಿಕಾರಿಗಳು ಪ್ರಕಟಣೆಯಮೂಲಕ ಮನವಿ ಮಾಡಿದ್ದಾರೆ.

