ಖತರ್: ಕರ್ನಾಟಕ ಸಂಘ ಖತರ್ (KSQ) ತನ್ನ ಸಾಮಾಜಿಕ ಜವಾಬ್ದಾರಿಗೆ ಬದ್ಧವಾಗಿ, ಅಮೇರಿಕನ್ ಆಸ್ಪತ್ರೆಯ ಸಹಯೋಗದೊಂದಿಗೆ ಬೃಹತ್ ರಕ್ತದಾನ ಅಭಿಯಾನ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಿತು.





ಈ ಕಾರ್ಯಕ್ರಮವು ಕರ್ನಾಟಕ ಸಂಘ ಖತರ್ನ ರಜತ ಮಹೋತ್ಸವ ಆಚರಣೆಯ ಮಹತ್ವದ ಭಾಗವಾಗಿತ್ತು. ಈ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಮತ್ತು ಸಮರ್ಪಿತ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿ ICC ಉಪಾಧ್ಯಕ್ಷ ಶಾಂತನು ದೇಶ್ಪಾಂಡೆ ಮತ್ತು ಮುಖ್ಯ ಅತಿಥಿ ICC ಸಲಹಾ ಸಮಿತಿ ಅಧ್ಯಕ್ಷ ಬಾಬು ರಾಜನ್ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.
ಸಭಾ ಕಾರ್ಯಕ್ರಮವು ನಿರೂಪಕ KSQ ಪ್ರಧಾನ ಕಾರ್ಯದರ್ಶಿ ಕುಮಾರ್ ಸ್ವಾಮಿ ಅವರ ಪ್ರಾಸ್ತಾವಿಕ ನುಡಿಗಳೊಂದಿಗೆ ಪ್ರಾರಂಭವಾಯಿತು. KSQ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲ್ ಅವರು “ತಾಯಿಯ ಕಣ್ಣೀರು ತನ್ನ ಮಗುವಿನ ಜೀವವನ್ನು ಉಳಿಸಲು ಸಾಧ್ಯವಿಲ್ಲ, ಆದರೆ ನಿಮ್ಮ ರಕ್ತವು ಉಳಿಸಬಹುದು” ಎಂಬ ಸತ್ಯವನ್ನು ನೆನೆಪಿಸುವ ಸೂಕ್ತ ಸಂಸ್ಕೃತ ಶ್ಲೋಕದೊಂದಿಗೆ ಸಭೆಯನ್ನು ಸ್ವಾಗತಿಸಿದರು.





HMC ಅಲ್ ವಕ್ರಾ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ರೋಹಿಣಿ ದೊರೆ ಅವರು ರಕ್ತದಾನದ ಮಹತ್ವದ ಕುರಿತು ಮಾತನಾಡಿ, ರಕ್ತದಾನವು ಹೇಗೆ ಹಲವಾರು ಜೀವಗಳನ್ನು ಉಳಿಸುತ್ತದೆ ಎಂಬುದನ್ನು ವಿವರಿಸಿದರು. KSQ ಅಧ್ಯಕ್ಷರು ಅವರಿಗೆ “ಕೃತಜ್ಞತಾ ಸ್ಮರಣಿಕೆ”ಯನ್ನು ನೀಡಿ ಗೌರವಿಸಿದರು.
ಅಮೇರಿಕನ್ ಆಸ್ಪತ್ರೆಯ ಅಧ್ಯಕ್ಷರಾದ ಮೊಹಮ್ಮದ್ ಇಕ್ಬಾಲ್ ಅವರನ್ನು KSQ ಮತ್ತು ಸಮುದಾಯಕ್ಕೆ ನಿರಂತರವಾಗಿ ನೀಡುತ್ತಿರುವ ಬೆಂಬಲಕ್ಕಾಗಿ ಸನ್ಮಾನಿಸಲಾಯಿತು. ಅಮೇರಿಕನ್ ಆಸ್ಪತ್ರೆಯ ಜನರಲ್ ಮ್ಯಾನೇಜರ್ ಇಕ್ಬಾಲ್ ಅಬ್ದುಲ್ಲಾ ಮತ್ತು ಕರ್ನಾಟಕ ಟೋಸ್ಟ್ಮಾಸ್ಟರ್ಸ್ನ ಉದಯ್ ಶೆಟ್ಟಿ ಅವರು ರಕ್ತದಾನದ ಜೀವ ಉಳಿಸುವ ಪರಿಣಾಮದ ಕುರಿತು ಮಾತನಾಡಿ, KSQನ ಪಾಲುದಾರಿಕೆ ಮತ್ತು ಸಮರ್ಪಣೆಗಾಗಿ ಶ್ಲಾಘಿಸಿದರು.
ಇಕ್ಬಾಲ್ ಅವರು, ಗುಣಮಟ್ಟದ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಅಮೇರಿಕನ್ ಆಸ್ಪತ್ರೆಯ ಬದ್ಧತೆಯನ್ನು ಒತ್ತಿ ಹೇಳಿದರು. ಮುಖ್ಯ ಅತಿಥಿ ಶಾಂತನು ದೇಶ್ಪಾಂಡೆ ಅವರು KSQ ನೀಡುತ್ತಿರುವ ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಗಳನ್ನು ಶ್ಲಾಘಿಸಿದರು ಮತ್ತು ಈ ಉದಾತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದರು. ಜಂಟಿ ಕಾರ್ಯದರ್ಶಿ ಎಲ್.ಜಿ. ಪಾಟೀಲ್ ಅವರು ಧನ್ಯವಾದಗಳನ್ನು ಅರ್ಪಿಸಿದರು.





ರಜತ ವರ್ಷದ ಅಂಗವಾಗಿ ಸಂಘದ ಸದಸ್ಯರುಗಳಾದ ಸುಮಾರು 46 ವೈದ್ಯರು ಮತ್ತು 26 ನರ್ಸ್ ಗಳನ್ನು ರಜತ ಮಹೋತ್ಸವದ ಶಾಲು ಮತ್ತು ಸ್ಮರಣಿಕೆಗಳೊಂದಿಗೆ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ICC ಸಮಿತಿ ಸದಸ್ಯರುಗಳಾದ ಸಂದೀಪ್ ರೆಡ್ಡಿ ಮತ್ತು ರಾಕೇಶ್ ವಾಘ್, ICBF ಸಲಹಾ ಸಮಿತಿ ಸದಸ್ಯ ಸದೀಶ್ ವಿಲಾವಿಲ್, KSQ ಸಲಹಾ ಸಮಿತಿ ಸದಸ್ಯರುಗಳಾದ ವಿ.ಎಸ್. ಮನ್ನಂಗಿ, ಹೆಚ್.ಕೆ. ಮಧು, ಡಾ. ಸಂಜಯ್ ಕುದರಿ, KMCA ಅಧ್ಯಕ್ಷ ಸಾಖಿಬ್ ರಾಜಾ ಖಾನ್, ತುಳುಕೂಟ ಉಪಾಧ್ಯಕ್ಷ ವಿಜಯ್ ರೈ, ಬಂಟ್ಸ್ ಖತರ್ ಅಧ್ಯಕ್ಷ ನವೀನ್ ಶೆಟ್ಟಿ ಇರುವೈಲ್, ಬಿಲ್ಲವಾಸ್ ಖತರ್ ಅಧ್ಯಕ್ಷೆ ಅಪರ್ಣ ಶರತ್ ಸೇರಿದಂತೆ ಹಲವಾರು ಪ್ರಮುಖ ಸಮುದಾಯದ ಸದಸ್ಯರು ಮತ್ತು ನಾಯಕರು ಭಾಗವಹಿಸಿದ್ದರು. MCC, SKMWA, MCA ಪ್ರತಿನಿಧಿಗಳು ಮತ್ತು ಸಮುದಾಯದ ಮುಖಂಡರಾದ ರಾಮಚಂದ್ರ ಶೆಟ್ಟಿ, ಅನಿಲ್ ಬೊಲೂರ್, ನವನೀತ್ ಶೆಟ್ಟಿ, ಅಲೋಶಿಯಸ್ ಡಿ’ಸೋಜಾ, ಅಸ್ಮತ್ ಅಲಿ, ರಿಯಾನಾ ಪಿಂಟೊ, ಡೆಲ್ಲಾ ರೇಗೊ, ಹಿರಿಯ KSQ ಸದಸ್ಯರು ಮತ್ತು ಹಿಂದಿನ ಸಮಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.







KSQ, ಅಮೇರಿಕನ್ ಆಸ್ಪತ್ರೆ ಮತ್ತು ಕರ್ನಾಟಕ ಟೋಸ್ಟ್ಮಾಸ್ಟರ್ಗಳ ಸಹಯೋಗದೊಂದಿಗೆ ನಡೆದ ಈ ರಕ್ತದಾನ ಶಿಬಿರದಲ್ಲಿ 150 ಸಮುದಾಯ ಸದಸ್ಯರು ರಕ್ತದಾನ ಮಾಡಿರುವುದು ದಾಖಲೆಯ ಸಂಖ್ಯೆಯ ನೋಂದಣಿಗೆ ಕಾರಣವಾಯಿತು. ಎಲ್ಲಾ ದಾನಿಗಳಿಗೂ ಮೆಚ್ಚುಗೆಯ ಪ್ರಮಾಣ ಪತ್ರಗಳನ್ನು ವಿತರಿಸಿ ಅಭಿನಂದಿಸಲಾಯಿತು. ಸಮಿತಿ ಸದಸ್ಯರು, ಶ್ರೀಧರ್ ನಾಯಕ್, ವೇಣು ರೆಡ್ಡಿ, ATS ತಂಡ ಮತ್ತು ಹಮದ್ ಮೆಡಿಕಲ್ ಕಾರ್ಪೋರೇಶನ್ನ ಬೆಂಬಲದೊಂದಿಗೆ ಕಾರ್ಯಕ್ರಮವು ಸಾಂಗವಾಗಿ ನಡೆಯಿತು.