ದೋಹಾ(ಖತರ್): ಕರ್ನಾಟಕ ಸಂಘ ಖತರ್ (KSQ), ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಖತರ್ನ ಭಾರತೀಯ ದೂತಾವಾಸದ ಆಶ್ರಯದಲ್ಲಿ ಮೇ 1ರಂದು ದೋಹಾದ ಪರ್ಲಿಂಗ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ‘ಕಾರ್ಮಿಕ ದಿನಾಚರಣೆ 2026’ಯನ್ನು ಯಶಸ್ವಿಯಾಗಿ ಆಯೋಜಿಸಿತು. ‘ಕಾಯಕವೇ ಕೈಲಾಸ’ ಎಂಬ ವಿಷಯದೊಂದಿಗೆ ನಡೆದ ಈ ಕಾರ್ಯಕ್ರಮ ಕಾರ್ಮಿಕರು, ಗಣ್ಯರು ಹಾಗೂ ಸಮುದಾಯವನ್ನು ಒಗ್ಗೂಡಿಸಿತು.


ಇದು ಕರ್ನಾಟಕ ಸಂಘದ ನೂತನ ಆಡಳಿತ ಸಮಿತಿಯ ಪ್ರಪ್ರಥಮ ಕಾರ್ಯಕ್ರಮವಾಗಿದ್ದು, ಎಲ್ಲರಿಂದ ಪ್ರಶಂಸೆಗೆ ಪಾತ್ರವಾಯಿತು. ಕರ್ನಾಟಕ ಸಂಘದ ಆಡಳಿತ ಸಮಿತಿಯ ಅಧ್ಯಕ್ಷರಾದ ಸುಬ್ರಮಣ್ಯ ಹೆಬ್ಬಾಗಿಲು ಸ್ವಾಗತ ಭಾಷಣದಲ್ಲಿ ‘ಕರ್ನಾಟಕ ಸಂಘವು ಕಾರ್ಮಿಕರಿಗೆ ಸ್ವಗೃಹದಂತಿರುವ ಸಂಘ’ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಭಾರತೀಯ ದೂತಾವಾಸ ಕಾರ್ಯಾಲಯದ ರಾಯಭಾರಿ ಚಟುವಟಿಕೆಗಳ ಮುಖ್ಯಸ್ಥ ಡಾ. ವೈಭವ್ ತಾಂಡಲೆ, ಖತರ್ನ ಕಾರ್ಮಿಕ ಸಚಿವಾಲಯದ ಖಾಲಿದ್ ಅಬ್ದುಲ್ ರಹ್ಮಾನ್ ಫಖ್ರೂ, ಮಣಿಕಂಟನ್ ಎ ಪಿ (ICC ಅಧ್ಯಕ್ಷರು), ಪಿ.ಎನ್.ಬಾಬುರಾಜನ್ (ICC ಸಲಹಾ ಸಮಿತಿ ಅಧ್ಯಕ್ಷರು) ಹಾಗೂ ಫೈಸಲ್ ಅಲ್ ಹುಡಾವಿ ಕಾರ್ಯಕ್ರಮವನ್ನು ಪ್ರಶಂಸಿಸಿ, ಕಾರ್ಮಿಕರ ಕೊಡುಗೆ, ಕಲ್ಯಾಣ ಹಾಗೂ ಸುರಕ್ಷತೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.


ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲು, ಸಮುದಾಯದ ಹಿರಿಯ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಆಗಮಿಸಿದ್ದರು. ಪ್ರಮುಖವಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಹಿತೈಷಿ ವೇದಿಕೆ ಹಾಗು ಭಾರತೀಯ ಕ್ರೀಡಾ ಕೇಂದ್ರದ ಮುಖಂಡರು ಉಪಸ್ಥಿತರಿದ್ದರು.
ಕರ್ನಾಟಕ ಸಂಘ ಖತರ್ನ ಸಲಹಾ ಸಮಿತಿಯ ಸದಸ್ಯರು ಹಾಗು ಪೂರ್ವ ಅಧ್ಯಕ್ಷರುಗಳಾದ ಅರುಣ್ ಕುಮಾರ್, ವೀರೇಶ್ ಮನ್ನಂಗಿ, ಹೆಚ್.ಕೆ. ಮಧು ಹಾಗೂ ಸಂಜಯ್ ಕುದುರಿ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಕನ್ನಡಿಗರ ಪ್ರತಿನಿಧಿಯಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದೀಪ್ ರೆಡ್ಡಿ ಹಾಗೂ ಕರ್ನಾಟಕ ಮೂಲದ ಸಹೋದರ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿ, ಸಕ್ರೀಯವಾಗಿ ಪಾಲ್ಗೊಂಡು, ಕರ್ನಾಟಕ ಸಂಘ ಖತರ್ನ ಒಗ್ಗಟ್ಟನ್ನು ಎತ್ತಿ ಹಿಡಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಣಿಭಾರತಿಯವರ ಮುಂದಾಳತ್ವದಲ್ಲಿ ಹಲವು ಕಾರ್ಮಿಕರಿಗೆ ICBF ಜೀವವಿಮೆ ಸೌಲಭ್ಯವನ್ನು ವಿತರಿಸಲಾಯಿತು ಹಾಗು ಬೇಸಿಗೆಗಾಗಿ ಕೋಲ್ಡ್ ವಾಟರ್ ಉಳಿಸುವ ಕೂಲರ್ ಬಾಟಲ್ಗಳನ್ನು ಆಗಮಿಸಿದ್ದ ಎಲ್ಲಾ ಕಾರ್ಮಿಕರಿಗೆ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಮಿಕರನ್ನು ಆಕರ್ಷಿಸಿ ಮನೋರಂಜನೆ ನೀಡಿತು.
ಡಾ.ಕಾಂತರಾಜ್ ಅವರು ಆರೋಗ್ಯದ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿದರು. ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಅವರು ಎಲ್ಲರಿಗೂ ಧನ್ಯವಾದವನ್ನು ತಿಳಿಸಿ ವಂದನಾರ್ಪಣೆ ಸಲ್ಲಿಸಿದರು. ಕೇಕ್ ಕತ್ತರಿಸಿ ಸಿಹಿ ಹಂಚಿದ ನಂತರ ಭೋಜನ ವಿತರಿಸಿ ಕಾರ್ಯಕ್ರಮ ಸಮಾರೋಪಗೊಂಡಿತು.
ಕರ್ನಾಟಕ ಸಂಘ ಖತರ್ ವತಿಯಿಂದ ಕೃತಜ್ಞತೆ
ಖತರ್ ಕರ್ನಾಟಕ ಸಂಘವು ಭಾರತೀಯ ದೂತಾವಾಸ, ದೋಹಾ ಹಾಗೂ ಭಾರತೀಯ ಸಾಂಸ್ಕೃತಿಕ ಕೇಂದ್ರ, ಖತರ್ನ ನಿರಂತರ ಹಾಗೂ ಸ್ಥಿರ ಬೆಂಬಲಕ್ಕಾಗಿ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದೆ. ಈ ಕಾರ್ಯಕ್ರಮದ ಯಶಸ್ಸಿಗೆ ಮಹತ್ವದ ಕೊಡುಗೆ ನೀಡಿದ ಥಾಮಸ್ ಚೆರಿಯನ್ (ನಾಸರ್ ಬಿನ್ ಖಾಲಿದ್ ಅಂಡ್ ಸನ್ಸ್ ಟ್ರೇಡಿಂಗ್ ಕಂ.), ಮುಸ್ತಫಾ (ಗಲ್ಫ್ ಪ್ಲಾಂಟ್ ಟ್ರೇಡಿಂಗ್ & ಕಾಂಟ್ರಾಕ್ಟಿಂಗ್ ಡಬ್ಲ್ಯು.ಎಲ್.ಎಲ್.), ಹಾಗೂ ಮೊಹಮ್ಮದ್ ಸಲೀಮ್ (ಟೀಮ್ ಎಂಜಿನಿಯರಿಂಗ್ & ಕಾಂಟ್ರಾಕ್ಟಿಂಗ್ ಡಬ್ಲ್ಯು.ಎಲ್.ಎಲ್.) ಅವರಿಗೆ ಸಂಘ ಧನ್ಯವಾದಗಳನ್ನು ಅರ್ಪಿಸಿತು. ಜೊತೆಗೆ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ರೂಪಿಸಲು ಶ್ರಮಿಸಿದ ಎಲ್ಲಾ ಸ್ವಯಂಸೇವಕರು, ಸದಸ್ಯರು ಹಾಗೂ ಹಿತೈಷಿಗಳಿಗೆ ಕರ್ನಾಟಕ ಸಂಘ ಅಭಿನಂದನೆ ಸಲ್ಲಿಸಿತು.

