ದೋಹಾ: ಖತರ್ನಲ್ಲಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಭಾರತದ ರಾಯಭಾರಿ ವಿಪುಲ್ ಅವರಿಗೆ ಅನಿವಾಸಿ ಭಾರತೀಯ ಸಮುದಾಯವು ಅತ್ಯಂತ ಭಾವಪೂರ್ಣವಾಗಿ ಬೀಳ್ಕೊಡುಗೆ ನೀಡಿತು.
ದೋಹಾದ ಐಸಿಸಿ ಅಶೋಕ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರ, ಭಾರತೀಯ ಸಮುದಾಯ ಕಲ್ಯಾಣ ವೇದಿಕೆ, ಭಾರತೀಯ ಕ್ರೀಡಾ ಕೇಂದ್ರ ಹಾಗೂ ಭಾರತೀಯ ಉದ್ಯಮ ಮತ್ತು ವೃತ್ತಿಪರರ ಮಂಡಳಿ ಜಂಟಿಯಾಗಿ ಆಯೋಜಿಸಿದ್ದವು.

ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮತ್ತು ಪ್ರಮುಖರು, ವಿಪುಲ್ ಅವರನ್ನು ‘ಪೀಪಲ್ಸ್ ಅಂಬಾಸಿಡರ್’ ಎಂದು ಗೌರವಿಸಿದರು. ಸಾಮಾನ್ಯ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ಹಾಗೂ ಸದಾ ತೆರೆದ ಬಾಗಿಲ ನೀತಿ ಹೊಂದಿದ್ದ ರಾಯಭಾರಿಯ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಪುಲ್ ಅವರು, “ಖತರ್ನಲ್ಲಿರುವ 8.3 ಲಕ್ಷಕ್ಕೂ ಹೆಚ್ಚು ಭಾರತೀಯ ಸಮುದಾಯವು ವಿಶ್ವದಲ್ಲೇ ಅತ್ಯಂತ ಶಿಸ್ತಿನ ಸಮುದಾಯವಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಖತರ್ ಭೇಟಿ ಹಾಗೂ ಖತರ್ ಅಮೀರ್ ಅವರ ಭಾರತ ಭೇಟಿಗಳು ಉಭಯ ದೇಶಗಳ ಬಾಂಧವ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿವೆ,” ಎಂದು ಸ್ಮರಿಸಿದರು. ಅಲ್ಲದೆ, ಕರ್ನಾಟಕ ಸಂಘ ಖತರ್ ಸೇರಿದಂತೆ ಅನುಬಂಧಿತ ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳು ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲೂ ಸಜೀವವಾಗಿರಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್, ಐಸಿಬಿಎಫ್ ಅಧ್ಯಕ್ಷ ಶಾನವಾಸ್ ಬಾವಾ, ಐಎಸ್ಸಿ ಅಧ್ಯಕ್ಷ ಇ.ಪಿ. ಅಬ್ದುಲ್ ರಹಮಾನ್, ಐಬಿಪಿಸಿ ಅಧ್ಯಕ್ಷ ತಾಹಾ ಮಹಮ್ಮದ್ ಹಾಗೂ ಕರ್ನಾಟಕ ಸಂಘ ಖತರ್ ಪ್ರತಿನಿಧಿಗಳು ಸೇರಿದಂತೆ ನೂರಾರು ಭಾರತೀಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಭಾಗವಾಗಿ, ಕರ್ನಾಟಕ ಸಂಘ ಖತರ್ನ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಹಾಗೂ ಸಲಹೆಗಾರರು ವಿಪುಲ್ ಅವರನ್ನು ಭೇಟಿಯಾಗಿ, ಖತರ್ನಲ್ಲಿರುವ ಅನಿವಾಸಿ ಕನ್ನಡಿಗರಿಗೆ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಅವರು ನೀಡಿದ ನಿರಂತರ ಬೆಂಬಲ, ಹಾರೈಕೆ ಮತ್ತು ಮಾರ್ಗದರ್ಶನಕ್ಕಾಗಿ ಶ್ರದ್ಧಾಪೂರ್ವಕ ಧನ್ಯವಾದಗಳನ್ನು ಅರ್ಪಿಸಿ, ಅವರ ಮುಂದಿನ ಶುಭ ಪಯಣಕ್ಕೆ ಶುಭ ಹಾರೈಸಿದರು.

