ದುಬೈ: ಖಾಸಗಿ ಕಾರ್ಯಕ್ರಮಗಳ ನಿಮಿತ್ತ ಯುಎಇ ಪ್ರವಾಸದಲ್ಲಿರುವ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಸರಕಾರದ ಗೌರವಾನ್ವಿತ ಸದಸ್ಯರಾದ ಡಾ.ಸಂಜೀವ್ ಕುಮಾರ್ ಅತಿವಾಲೆ, ಶಿವರೆಡ್ಡಿ ಖ್ಯಾಡೆದ್ ಅವರಿಗೆ ಕರ್ನಾಟಕ ಕಲ್ಚರಲ್ ಸೆಂಟರ್, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮವು ಇತ್ತೀಚೆಗೆ ಕೆಎಂಸಿಸಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕೇಂದ್ರ ಸಮಿತಿಯ ಕೋಶಾಧಿಕಾರಿ ಝಡ್ ಎ ಕಯ್ಯಾರ್, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕ ಕೋಶಾಧಿಕಾರಿ ಅಶ್ರಫ್ ಪಿ.ಪಿ ಬಾಯರ್ ಅವರು ಮುಖ್ಯಅಥಿತಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯುಎಇ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ದಿಬ್ಬ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಐಸಿ ಆಕಾಡೆಮಿ ನಡೆಸಿಕೊಂಡು ಬರುತ್ತಿರುವ ಶೈಕ್ಷಣಿಕ ಕ್ರಾಂತಿ, ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಮುತುವರ್ಜಿ ಹಾಗು ಅಕಾಡೆಮಿ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಕೆಐಸಿಜಿಸಿಸಿ ಅಧ್ಯಕ್ಷ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಗಲ್ಫ್ ರಾಷ್ಟ್ರಗಳ ಸಲಹಾ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಶಾ ಮಂತೂರು ಎಲ್ಲರನ್ನು ಸ್ವಾಗತಿಸಿ, ಕೆಐಸಿ ಸಂಸ್ಥೆಯು ಹಲವಾರು ವರ್ಷಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿದ್ದು, ಕನ್ನಡ ನೆಲ-ಜಲದ ಮೇಲೆ ಅತೀವ ಗೌರವವನ್ನು ಹೊಂದಿದ್ದು, ಸಂಸ್ಥೆಯಲ್ಲಿ ಇದೀಗ ಹಲವಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಗೈದು ಇಂದು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದ್ದು, ಗಡಿನಾಡ ಪ್ರದೇಶ ಕನ್ನಡ ನೆಲದ ಅಭಿವೃದ್ದಿಗಾಗಿ ತಾವು ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮ, ತಮ್ಮ ಕೆಲಸ ಕಾರ್ಯಗಳ ಕುರಿತು ಅಭಿಮಾನವಿದ್ದು , ಮುಂದೆಯೂ ತಮ್ಮ ನೇತೃತ್ವದಲ್ಲಿ ಹಲವಾರು ಕ್ರಿಯಾ ಯೋಜನೆಗಳು ಮುಂದುವರಿಯಲಿ ಎಂದು ಶುಭಹಾರೈಸಿದರು.

ನಂತರ ಕರ್ನಾಟಕ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕರ್ನಾಟಕ ಸರಕಾರದ ಗೌರವಾನ್ವಿತ ಸದಸ್ಯರಾದ ಡಾ.ಸಂಜೀವ್ ಕುಮಾರ್ ಅತಿವಾಲೆ, ಶಿವರೆಡ್ಡಿ ಖ್ಯಾಡೆದ್ ಅವರಿಗೆ ಕೆಐಸಿ ವತಿಯಿಂದ ಸನ್ಮಾನ ಕಾರ್ಯಕ್ರಮವು ನಡೆಯಿತು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸೋಮಣ್ಣ ಬೇವಿನಮರ, ಗಲ್ಫ್ ರಾಷ್ಟ್ರಗಳಲ್ಲಿ ಬಂದು ಸನ್ಮಾನ ಸ್ವೀಕರಿಸುವುದೆಂದರೆ ಅದೊಂದು ಬಹು ದೊಡ್ಡ ಅಭಿಮಾನವೇ ಸರಿ. ತಮ್ಮ ತಮ್ಮ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ತಮ್ಮೆಲ್ಲವನ್ನು ಬಿಟ್ಟು ಬಂದು ಇಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಸಂತೋಷದಿಂದ ಅರಗಿಸಿಕೊಂಡು, ಇಂದು ನಮ್ಮಂತಹವರನ್ನು ಗುರುತಿಸಿಕೊಂಡು ಸನ್ಮಾನಿಸಿರುವುದು ಅತೀವ ಸಂತೋಷವನ್ನು ಉಂಟುಮಾಡಿದೆ. ತಮ್ಮ ಸಂಸ್ಥೆಯ ಕುರಿತು ತಿಳಿದು ತಮ್ಮನ್ನು ಗಡಿ ನಾಡ ಪ್ರಾಧಿಕಾರದ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು. ಅಲ್ಲದೆ ಪ್ರಸಕ್ತ ಕರ್ನಾಟಕ ಸರಕಾರವು ರಾಜ್ಯದ ಜನತೆಗೆ ಬಹುದೊಡ್ಡ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ಶಿಕ್ಷಣಕ್ಕೆ ಬಹಳಷ್ಟು ಒತ್ತು ನೀಡಿದೆ. ಯುವ ಜನತೆ ಉತ್ತಮ ಶಿಕ್ಷಣದೊಂದಿಗೆ ಉದ್ಯೋಗ- ಉದ್ಯಮಗಳನ್ನು ಮುನ್ನಡೆಸಿ ರಾಜ್ಯದ ಸಂಪತ್ತನ್ನು ಅಭಿವೃದ್ಧಿ ಗೊಳಿಸಲು ಪಣತೊಟ್ಟಿದೆ.

ತಮ್ಮ ಪ್ರಾಧಿಕಾರದ ವತಿಯಿಂದ ಲಭಿಸುವ ಸವಲತ್ತುಗಳ ಕುರಿತು ವಿವರಿಸಿದ ಅವರು, ಶೈಕ್ಷಣಿಕವಾಗಿ ಗಡಿ ಪ್ರದೇಶದ ವಿದ್ಯಾರ್ಥಿಗಳು ಮುಂದೆ ಬರಬೇಕಾಗಿದ್ದು, ಉತ್ತಮ ಶಿಕ್ಷಣವನ್ನು ನೀಡಬೇಕಾದ ಜವಾಬ್ದಾರಿ ತಮ್ಮೆಲ್ಲರ ಮೇಲಿದ್ದು, ಸೂಕ್ತ ಸವಲತ್ತುಗಳನ್ನು ಬಳಸಿಕೊಂಡು ಉತ್ತಮ ಸುಶಿಕ್ಷಿತ ಸಮಾಜವನ್ನು ನಿರ್ಮಿಸಲು ಕೈಜೋಡಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕೆಐಸಿ ಯುಎಇ ಸಮಿತಿ ಪಧಾಧಿಕಾರಿಗಳು, ಹಿತೈಷಿಗಳು, ನೇತಾರರು ಉಪಸ್ಥಿತರಿದ್ದರು.

