ಯುಎಇರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ 'ಮಯೂರ-ವಿಶ್ವಮಾನ್ಯ ಕನ್ನಡಿಗ...

ರೊನಾಲ್ಡ್ ಮಾರ್ಟಿಸ್​ಗೆ ಶಾರ್ಜಾ ಕರ್ನಾಟಕ ಸಂಘದಿಂದ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ದುಬೈ: ದುಬೈನಲ್ಲಿ ಇರುವ ಕನ್ನಡ ಪರ ಸಂಘಟನೆಗಳಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಮಾಡುವುದರಲ್ಲಿ ಎತ್ತಿದ ಕೈ ಶಾರ್ಜಾ ಕರ್ನಾಟಕ ಸಂಘ. ಕಳೆದ ಹಲವಾರು ವರ್ಷಗಳಿಂದ ವಿವಿಧ ಶೈಲಿಯ ಮನರಂಜನಾ ಕಾರ್ಯಕ್ರಮ ಕಾರ್ಯಕ್ರಮ ನೀಡುತ್ತಾ ಬಂದಿದ್ದೀರಿ. ಈ ವರ್ಷದ ಚಿಣ್ಣರ ಚಿಲಿಪಿಲಿ ಮತ್ತು ಬಾನ ದಾರಿಯಲ್ಲಿ ಎಂಬ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ ಎಂದು ಕೆ.ಎನ್.ಆರ್.ಐ.ಯ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಶಾರ್ಜಾದ ವುಮೆನ್ಸ್ ಯುನಿಯನ್ ಅಸೋಸಿಯೇಷನ ಸಭಾಂಗಣದಲ್ಲಿ ರವಿವಾರ ಸಂಜೆ ನಾಲ್ಕರಿಂದ ರಾತ್ರಿ ಹತ್ತರ ವರೆಗೆ ನಡೆದ ಶಾರ್ಜಾ ಕರ್ನಾಟಕ ಸಂಘದ 23 ನೇ ವರ್ಷದ ವಾರ್ಷಿಕೋತ್ಸವ, 70ನೇ ಕನ್ನಡ ರಾಜ್ಯೋತ್ಸವ ಮತ್ತು ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅಥಿತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಶಾರ್ಜಾ ಕರ್ನಾಟಕ ಸಂಘ ಕೊಡಮಾಡುವ ಪ್ರತಿಷ್ಠಿತ ‘ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಸ್ವೀಕರಿಸಿದ ಪ್ರತಿಯೊಬ್ಬರೂ ಉನ್ನತ ಮಟ್ಟದಲ್ಲಿ ಏರಿದ್ದಾರೆ. ಇದಕ್ಕೆ ನಾನು ಕೂಡ ಸಾಕ್ಷಿ ಎಂದು ಹೇಳುತ್ತ ಪ್ರಶಸ್ತಿ ಪುರಸ್ಕೃತರಾದವರಿಗೆ ಮತ್ತು ಶಾರ್ಜಾ ಕರ್ನಾಟಕ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಅಸೋಸಿಯೇಷನ್ ಶಾರ್ಜಾದ ಅಧ್ಯಕ್ಷರಾದ ನಿಸಾರ್ ತಲಂಗಾರ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು, ಕನ್ನಡ ಬಾವುಟವನ್ನು ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿ ಜೋಸೆಫ್ ಮಥಾಯಿಸ್ ಮತ್ತು ಸಂಘದ ಪದಾಧಿಕಾರಿಗಳು ದೀಪವನ್ನು ಬೆಳಗಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ‌ ಅಂಗವಾಗಿ ವಿಶೇಷ ಆಕರ್ಷಣಿಯ ಕಾರ್ಯಕ್ರಮವಾದ ಅನಿವಾಸಿ ಕನ್ನಡಿಗರ ಮಕ್ಕಳಿಂದ ಚಿಣ್ಣರ ಚಿಲಿಪಿಲಿ, ಛದ್ಮವೇಷ ಸ್ಪರ್ಧೆ ಮತ್ತು ಬಾನ ದಾರಿಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ವಿಶೇಷ ಮೆರುಗನ್ನು ನೀಡಿತ್ತು. ಈ ಕಾರ್ಯಕ್ರಮದ ನಿರೂಪಣೆಯನ್ನು ತಾಯ್ನಾಡಿನಿಂದ ಆಗಮಿಸಿದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕಿ ವಂದನಾ ರೈ ಕಾರ್ಕಳರವರು ಅಚ್ಚುಕಟ್ಟಾಗಿ ಮಾಡಿದರು. .ನಂತರ ಅನಿವಾಸಿ ನೃತ್ಯ ತಂಡದವರಿಂದ ನೃತ್ಯ ಕಾರ್ಯಕ್ರಮ ನಡೆಯಿತು.

ಪ್ರತಿಷ್ಠಿತ ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಉದ್ಯಮಿ, ಸಮಾಜ ಸೇವಕರಾದ ರೊನಾಲ್ಡ್ ಮಾರ್ಟಿಸ್ ದಂಪತಿಗಳಿಗೆ 2025ನೇ ಸಾಲಿನ ಸಂಘದ ಪ್ರತಿಷ್ಠಿತ “ಮಯೂರ-ವಿಶ್ವಮಾನ್ಯ ಕನ್ನಡಿಗ ಅಂತಾರಾಷ್ಟ್ರೀಯ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂಚೆ ಪ್ರಶಸ್ತಿ ಪುರಸ್ಕೃತರನ್ನು ಗಣ್ಯಾತಿ ಗಣ್ಯರೊಂದಿಗೆ ಪೂರ್ಣ ಕುಂಭ ಕಲಶ ಮತ್ತು ಬ್ಯಾಂಡ್ ವಾದ್ಯಗಳ ಮೂಲಕ ವೇದಿಕೆಗೆ ಕರೆ ತರಲಾಯಿತು. ಪ್ರಶಸ್ತಿ ಸ್ವೀಕರಿಸಿದ ರೊನಾಲ್ಡ್ ಮಾರ್ಟಿಸ್ ರವರು ಮಾತನಾಡುತ್ತಾ, ನನ್ನ ಈ ಚಿಕ್ಕ ಸಾಮಾಜಿಕ ಸೇವೆಗೆ ಸಂದ ದೊಡ್ಡ ಗೌರವವಾಗಿದೆ. ನಾನು ಈ ಪ್ರಶಸ್ತಿಯನ್ನು ಪ್ರೀತಿ ಪೂರ್ವಕವಾಗಿ ಸ್ವೀಕರಿಸಿದ್ದೇನೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ಹೇಳುತ್ತ ಕನ್ನಡ ಸಂಘ ಶಾರ್ಜಾದ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ರಂಗ ಭೂಮಿ ಸೇವೆಯನ್ನು ಗುರುತಿಸಿ ವಾಸು ಶೆಟ್ಟಿ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಅಬ್ದುಲ್ ಲತೀಫ್ ಮೂಲ್ಕಿ ದಂಪತಿಯವರನ್ನು ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಘಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಸಂಘದ ಪದಾಧಿಕಾರಿ ಮಹಮ್ಮದ್ ಸಯ್ಯಾದ್ ಅಜ್ಮಲ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಿಶೇಷ ಅತಿಥಿಯಾಗಿ ಆಗಮಿಸಿದ ವಂದನಾ ರೈ ಕಾರ್ಕಳರವರಿಗೆ “ಮಯೂರ ವಿದ್ಯಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿ ಜೇಮ್ಸ್ ಮಂಡೋನ್ಸ, ಎಮರಾತಿಯ ಖ್ಯಾತ ನಟ ಅಬ್ದುಲ್ಲಾ ಅಲ್ ಜಫಾಲಿ, ಎಮಿರೇತಿಯ ಖ್ಯಾತ ಡಿಸೈನರ್ ನಾದಿನೆ ಎಲಿತೀ, ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ, ವಿಶ್ವನಾಥ ಶೆಟ್ಟಿ, ಎಂ.ಈ.ಮೂಳೂರು, ಸುಗಂದರಾಜ್ ಬೇಕಲ್, ನೊಯಲ್ ಅಲ್ಮೇಡಾ, ವಿಘ್ನೇಶ್ ಕುಂದಾಪುರ, ಮಹಮ್ಮದ್ ಅಬ್ರಾರ್ ಉಲ್ಲರವರು ಉಪಸ್ಥಿತರಿದ್ದರು.

ಮಕ್ಕಳಿಗಾಗಿ ಏರ್ಪಡಿಸಿದ್ದ ಚಿಣ್ಣರ ಚಿಲಿಪಿಲಿ ಮತ್ತು ಬಾನ ದಾರಿಯಲ್ಲಿ ಸ್ಪರ್ಧೆಯ ವಿಜೇತರಾದ ಚಿಣ್ಣರ ಚಿಲಿಪಿಲಿ ಛದ್ಮವೇಷ ಸ್ಪರ್ಧ ಪ್ರಥಮ ಸ್ಮಹಿ ಸುಪ್ರೀತ್, ದ್ವೀತಿಯ ಸ್ಮಯನ್ ಶೆಟ್ಟಿ, ತೃತೀಯ ರತೀಯಾ ಬಿ ಶೆಟ್ಟಿ, ಬನದಾರಿಯಲಿ ಸ್ಪರ್ಧೆಯಲ್ಲಿ ಪ್ರಥಮ ಅಗಣ್ಯ ನಾಗರಾಜ, ದ್ವೀತಿಯ ಶರಣ್ಯ ವೇದವ್ಯಾಸ, ತೃತೀಯ ಸಂಜನಾ ನಿತ್ಯಾನಂದ, ಉತ್ತಮ ಮಾರ್ಗದರ್ಶಕರಾಗಿ ಕೀರ್ತಿ ಪ್ರಭುರವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಡಾ.ಬೂ ಅಬ್ದುಲ್ಲಾ(ಚೇರ್ಮ್ಯಾನ್ ಆಫ್ ಬೂ ಅಬ್ದುಲ್ಲಾ ಗ್ರೂಫ್ ಆಫ್ ಕಂಪನಿ) ಮತ್ತು ಎಚ್.ಎಚ್.ಶೇಕ್ ರಾಶೀದ್ ಬಿನ್ ಅಬ್ದುಲ್ಲಾ ಬಿನ್ ಎಸಾ ಅಲ್ ಮೌಲಾ( ಪ್ರಿನ್ಸ್-ಮೆಂಬರ್ ಆಫ್ ರೂಲಿಂಗ್ ಫ್ಯಾಮಿಲಿ), ಉಮ್ ಅಲ್ ಕ್ವೈನ್ ಯುಎಇ ಉಪಸ್ಥಿತರಿದ್ದರು. ಕಾರ್ಯಕ್ರಮದ ತೀರ್ಪುಗಾರರಾಗಿ ಸುರೇಶ್ ಶೆಟ್ಟಿ, ಗೋಪಿಕಾ ಮಯ್ಯ, ವಂದನಾ ರೈ ಸಹಕರಿಸಿದರು.

ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಸಮಿತಿಯ ಪದಾಧಿಕಾರಿಗಳಾದ ಅಮರ್ ಉಮೇಶ್, ಜೀವನ್ ಕುಕ್ಯನ್, ರಘುರಾಮ ಶೆಟ್ಟಿಗಾರ್, ಮಹಮ್ಮದ್ ಸಯ್ಯದ್ ಅಜ್ಮಲ್, ದಿನೇಶ್ ಎಂ.ಸಾಲಿಯಾನ್, ರಿತೇಶ್ ಅಂಚನ್, ಪ್ರೇಮಾನಂದ ಮಾರ್ನಾಡ್ ಹಾಗೂ ಪ್ರಾಯೋಜಕರಿಗೆ ಅಧ್ಯಕ್ಷರಾದ ಸತೀಶ್ ಪೂಜಾರಿರವರು ಕೃತಜ್ಞತೆ ಸಲ್ಲಿಸಿದರು. ಆರತಿ ಅಡಿಗ ಮತ್ತು ದೀಕ್ಷ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಉಪಾಧ್ಯಕ್ಷರಾದ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ಪ್ರದಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ಧನ್ಯವಾದವಿತ್ತರು.

ವರದಿ: ವಿಜಯಕುಮಾರ್ ಶೆಟ್ಟಿ ಗಾಣದಮೂಲೆ ದುಬೈ

Hot this week

ಕುವೈತ್‌ನ ನೇರಂಬಳ್ಳಿ ಸುರೇಶ್ ರಾವ್​​ಗೆ ‘ಸಮಾಜ ಸೇವಾ ರತ್ನ ಪ್ರಶಸ್ತಿ–2026’

ಕುವೈತ್: ಸಂಘಟಕ, ಕಲಾವಿದ, ಲೇಖಕ, ಸಮಾಜಸೇವಕ, ಕೋವಿಡ್ ವಾರಿಯರ್ ಆಗಿ ಸೇವೆ...

ದುಬೈನಲ್ಲಿ ಫೆಬ್ರವರಿ 22ರಂದು ‘ಯುಎಇ ಬಂಟ್ಸ್’ನಿಂದ ವಾರ್ಷಿಕ ‘ಸ್ಪೋರ್ಟ್ಸ್ ಡೇ-2026’

ದುಬೈ: ಯುಎಇ ಬಂಟ್ಸ್ ನ ವಾರ್ಷಿಕ "ಸ್ಪೋರ್ಟ್ಸ್ ಡೇ-2026" ಫೆಬ್ರವರಿ 22ರಂದು...

Moolur Jumma Masjid representatives felicitated in Dubai; community backs renovation project

Dubai: Representatives of the historic Moolur Jumma Masjid were...

Related Articles

Popular Categories