ಒಮಾನ್ (ಮಸ್ಕತ್): ಒಮಾನ್ ಬಿಲ್ಲವಾಸ್ ಕೂಟದ 2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭವನ್ನು ಇತ್ತೀಚಿಗೆ ಮಸ್ಕತ್ ನಗರದ ಅಝೈಬ ಪ್ರದೇಶದಲ್ಲಿರುವ ಅಝೈಬ ಗಾರ್ಡನ್’ನ ಮುಲ್ಟಿಪರ್ಪೋಸ್ ಹಾಲ್ ನಲ್ಲಿ ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿಯವರ ಅನುಗ್ರಹದೊಂದಿಗೆ ಆಯೋಜಿಸಲಾಯಿತು.
2025-26ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಒಮಾನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರಾಗಿರುವ ಉಮೇಶ್ ಬಂಟ್ವಾಳ್ ಅವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹರೀಶ್ ಸುವರ್ಣ ಹಾಗೂ ಪ್ರಫುಲ್ಲ ಶಂಕರ ಪೂಜಾರಿಯವರು ಪುನರಾಯ್ಕೆಯಾದರು.
ಕೂಟದ ಸಂಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಎಸ್. ಕೆ ಪೂಜಾರಿ ಮತ್ತು ಡಾ. ಸಿ.ಕೆ.ಅಂಚನ್ ಹಾಗೂ ನಿರ್ಗಮನ ಅಧ್ಯಕ್ಷ ಸುಜಿತ್ ಅಂಚನ್, ಮಾಜಿ ಅಧ್ಯಕ್ಷರಾದ ಅಶೋಕ್ ಸುವರ್ಣರವರು ನೂತನ ಸದಸ್ಯರಿಗೆ ಹಾಗೂ ಸಮಸ್ತ ಒಮಾನ್ ಬಿಲ್ಲವರಿಗೆ ಭರವಸೆಯ ಮಾತುಗಳಿಂದ ಮಾರ್ಗದರ್ಶನವನ್ನು ನೀಡಿ, ಹೊಸ ಸಮಿತಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮವು ಉತ್ಸಾಹಿ ನೂತನ ಸದಸ್ಯರಿಗೆ ಪ್ರೇರಣೆದಾಯಕವಾಗಿ ಜರಗಿತು. ಕಾರ್ಯದರ್ಶಿ ಶಿವಾನಂದ ಕೋಟ್ಯಾನ್ ಸ್ವಾಗತಿಸಿ, ಪ್ರಸ್ತುತ ಚುನಾವಣಾ ಸಮಿತಿ ಸದಸ್ಯರಾದ ಸುರೇಂದ್ರ ಅಮಿನ್, ಹಾಗೂ ಸುರೇಂದ್ರ ಅಂಚನ್ ರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಹೊಸ ಸಮಿತಿಯ ಎಲ್ಲಾ ಸದಸ್ಯರು ತಮ್ಮನ್ನು ಪರಿಚಯಿಸಿಕೊಂಡು, ಮುಂದಿನ ಎರಡು ವರ್ಷಗಳ ಕಾಲ ತಮ್ಮ ದೃಷ್ಟಿಕೋನ ಮತ್ತು ಕಾರ್ಯಸೂಚಿಯನ್ನು ಹಂಚಿಕೊಂಡರು. ಸಮುದಾಯದ ಬೆಳವಣಿಗೆ ಮತ್ತು ಕಲ್ಯಾಣಕ್ಕಾಗಿ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು.
ಮಹಿಳಾ ಮುಖಿಯಾಗಿ ದೀಪಿಕಾ ಪ್ರಸಾದ್ ಮಾತನಾಡಿ, ಮಹಿಳೆಯರು ಸಂಪೂರ್ಣವಾಗಿ ಕೂಟದ ಮೂಲಕ ತಮ್ಮ ಪ್ರತಿಭೆ ಹಾಗೂ ಮನೋಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಬೇಕೆಂಬ ಹಂಬಲ ವ್ಯಕ್ತಪಡಿಸಿದರು.
ಕಡಲಾಚೆ ಸಮುದಾಯಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೀಡುತ್ತಾ ಬಂದಿರುವ ಒಮಾನ್ ಬಿಲ್ಲವಾಸ್ ಮುಂದಿನ ದಿನಗಳಲ್ಲಿ ಮಗದಷ್ಟು ಸೇವೆಯನ್ನು ನೀಡುವಲ್ಲಿ ತನ್ನ ಸೇವೆಯನ್ನು ಒದಗಿಸುತ್ತದೆ ಎಂದು ಕಾರ್ಯಕ್ರಮ ಮುಖೇನ ಅನಿಸಿಕೆಗಳನ್ನು ಎಲ್ಲಾ ಸದಸ್ಯರು ಮನಗಂಡರು.
ತಮ್ಮ ಭಾಷಣದಲ್ಲಿ ಅಧ್ಯಕ್ಷರಾದ ಉಮೇಶ್ ಬಂಟ್ವಾಳ್ ಸ್ಥಾಪಕ ಸದಸ್ಯರನ್ನು ಸ್ಮರಿಸಿದರು. ದಿ.ಪೀತಾಂಬರ ಅಲ್ಕೆ ಮತ್ತು ಅರುಣ್ ಸನಿಲ್ ಹಾಗೂ ಒಮಾನ್ ಬಿಲ್ಲವಾಸ್ ನ ಆರಂಭದಿಂದಲೂ ಸೇವೆ ಮಾಡಿರುವ ಎಲ್ಲಾ ಮಾಜಿ ಸಮಿತಿಯ ಸದಸ್ಯರಿಗೆ ತಮ್ಮ ಅಮೂಲ್ಯವಾದ ಸಮುದಾಯ ಸೇವೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಕಳೆದ ಎರಡು ವರ್ಷಗಳಲ್ಲಿ ನಡೆದಿರುವ ನಿರ್ಗಮನ ಸಮಿತಿಯ ಅದ್ಭುತ ಕೊಡುಗೆಗಾಗಿ ಸಮಿತಿಯನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಎಲ್ಲಾ ಸದಸ್ಯರ ನಿರಂತರ ಬೆಂಬಲವನ್ನು ಶ್ಲಾಘಿಸಿದರು ಮತ್ತು ಮುಂಬರುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿದರು.
ಕೋಶಾಧಿಕಾರಿ ಸುಕುಮಾರ್ ಅಂಚನ್ ತಂಡದ ಕೆಲಸದ ಮಹತ್ವವನ್ನು ಎತ್ತಿ ತೋರಿಸಿದರು ಮತ್ತು ಒಮಾನ್ ಬಿಲ್ಲವಾಸ್ನ ಸುಧಾರಣೆಗಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಶ್ರೀನಿವಾಸ್ ಬರ್ಕ ನಿರೂಪಿಸಿದರು. ಉಪಾಧ್ಯಕ್ಷ ಹರೀಶ್ ಸುವರ್ಣ ಧನ್ಯವಾದಗಳನ್ನು ಸಮರ್ಪಿಸುವ ಮೂಲಕ ಕಾರ್ಯಕ್ರಮವನ್ನು ಮಕ್ತಾಯಗೊಳಿಸಲಾಯಿತು. ಕಾರ್ಯಕ್ರಮವು ಬಿಲ್ಲವ ಸಮುದಾಯದ ಸಾಮಾಜಿಕ ಹಾಗೂ ಏಕತೆ ಮೌಲ್ಯಗಳನ್ನು ಮತ್ತೊಮ್ಮೆ ಉಜ್ವಲಗೊಳಿಸಿತು.