ದುಬೈ: ನವೆಂಬರ್ 8ರಂದು ದುಬೈನಲ್ಲಿ ನಡೆಯುವ ‘ಕನ್ನಡ ಕೂಟ ದುಬೈ’ನ ”ಕನ್ನಡ ರಾಜ್ಯೋತ್ಸವ” ಕಾರ್ಯಕ್ರಮಕ್ಕೆ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ U.T. ಖಾದರ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಯಿತು.
‘ಕನ್ನಡ ಕೂಟ ದುಬೈ’ಯ ಆಹ್ವಾನದ ಆಮಂತ್ರಣವನ್ನು ಮನಃಪೂರ್ವಕವಾಗಿ ಸ್ವೀಕರಿಸಿ, ಕಾರ್ಯಕ್ರಮದಲ್ಲಿ ತಮ್ಮ ಉಪಸ್ಥಿತಿಯನ್ನು ಖಾದರ್ ಅವರು ದೃಢಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ವಿವರ, ಉದ್ದೇಶಗಳು, ಸಾಂಸ್ಥಿಕ ಸಾಧನೆಗಳು ಮತ್ತು ಹಿಂದಿನ ಕಾರ್ಯಕ್ರಮದ ವಿವರಗಳನ್ನು ಒಳಗೊಂಡ “ಪರಿಚಯ ಪುಸ್ತಕ”ವನ್ನು ಅವರಿಗೆ ನೀಡಲಾಯಿತು.
ಈ ವೇಳೆ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಎಂ.ಕೆ., ಪೋಷಕ, ಸಲಹಾ ಸಮಿತಿಯ ಸದಸ್ಯರಾದ ಮಂಜುನಾಥ್ ರಾಜನ್ ಮತ್ತಿತರರು ಹಾಜರಿದ್ದರು.
ನವೆಂಬರ್ 8ರಂದು ದುಬೈಯ ಅತೀ ದೊಡ್ಡ ವೇದಿಕೆಯಲ್ಲಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಈ ವೇಳೆ ಅವರಿಗೆ ಪ್ರತಿಷ್ಠಿತ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅರುಣ್ ಕುಮಾರ್ ಎಂ.ಕೆ. ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಜಾನಪದ ಉತ್ಸವದಲ್ಲಿ ಕಾರ್ಯಕ್ರಮದ ಫ್ಲೈಯರ್ ಬಿಡುಗಡೆ
‘ಕನ್ನಡ ರಾಜ್ಯೋತ್ಸವ’ ಕಾರ್ಯಕ್ರಮದ ಫ್ಲೈಯರ್ (Flyer) ನ್ನು ಕರ್ನಾಟಕ ಜಾನಪದ ಪರಿಷತ್ UAE ಘಟಕ ರವಿವಾರ ದುಬೈಯಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಜಾನಪದ ಉತ್ಸವ – 2025 ‘ರ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು.