ಸೌದಿ ಅರೇಬಿಯಾ: ಅಮೇರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡುಯುತ್ತಿರುವ ಸಂಘರ್ಷವು ಮುಂದುವರಿಯುತ್ತಿರುವುದರಿಂದ ಬಹುತೇಕ ಗಲ್ಫ್ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.
ಯುಎಇ, ಖತರ್, ಬಹರೈನ್ ಹಾಗೂ ಕುವೈತ್ ಗಳು ಇದೀಗ ಬೆಲೆಯೇರಿಕೆ ಹಾಗೂ ದೈನಂದಿನ ವಸ್ತುಗಳ ಕೊರತೆಯಿಂದ ಕಂಗೆಟ್ಟಿದ್ದು, ಯುದ್ದವು ಈ ದೇಶಗಳ ಜನರ ಮೇಲೆ ನೇರ ಪರಿಣಾಮವನ್ನುಂಟು ಮಾಡಿದೆ. ಸೌದಿ ಅರೇಬಿಯಾ ಹಾಗೂ ಒಮಾನ್ ರಾಷ್ಟ್ರಗಳು ಯುದ್ಧದ ಮುನ್ನೆಚ್ಚಿರಿಕೆಯಿಂದಾಗಿ ಸಾಕಷ್ಟು ಆಹಾರೋತ್ಪನ್ನಗಳನ್ನು ದಾಸ್ತಾನು ಮಾಡಿಕೊಂಡಿದ್ದ ಕಾರಣದಿಂದಾಗಿ ಇದುವರೆಗೆ ಅಷ್ಟಾಗಿ ಆಹಾರೋತ್ಪನ್ನಗಳ ಕೊರತೆಯ ಬಿಸಿ ತಟ್ಟಿಲ್ಲ. ಇನ್ನು ಯುದ್ಧ ಮುಂದುವರಿದಂತೆಯೇ ಈ ರಾಷ್ಟ್ರಗಳೂ ಕೂಡ ದಿನನಿತ್ಯದ ವಸ್ತುಗಳ ಕೊರತೆಯನ್ನು ಎದುರಿಸುವ ಸಾಧ್ಯತೆ ಇದೆ.
ಕೇವಲ ಗಲ್ಫ್ ರಾಷ್ಟ್ರಗಳಲ್ಲದೇ ಭಾರತವೂ ಕೂಡ ಕೊಲ್ಲಿ ಯುದ್ಧದ ನೇರ ಪರಿಣಾಮವನ್ನು ಎದುರಿಸುವಂತಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳ ಕೊರತೆ ಅಷ್ಟಾಗಿ ಕಂಡು ಬಾರದಿದ್ದರೂ ಪೆಟ್ರೋಲ್, ಡಿಸೇಲ್ ಹಾಗೂ ಗ್ಯಾಸ್ ಸಿಲಿಂಡರ್ ನಂತಹ ಅಗತ್ಯ ವಸ್ತುಗಳ ಬಿಸಿ ಈಗಾಗಲೇ ಜನಸಾಮಾನ್ಯರಿಗೆ ತಟ್ಟತೊಡಗಿದೆ.
ಕೊಲ್ಲಿ ಯುದ್ದದ ಪರಿಣಾಮ ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗೆ ಬೀರತೊಡಗಿದೆ. ಕೊಲ್ಲಿ ರಾಷ್ಟ್ರಗಳಿಗೆ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರಗಳಿಂದ ಗೋಮಾಂಸ ಮತ್ತು ಮಟನ್ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಜೊತೆಗೆ ಅಕ್ಕಿ, ತರಕಾರಿ ರಫ್ತಿನ ಮೇಲೂ ಕೂಡ ಪರಿಣಾಮ ಬೀರಿದೆ.
ಪಶ್ಚಿಮ ಏಷ್ಯಾ ಯುದ್ಧದ ಆರಂಭದೊಂದಿಗೆ, ಕೇರಳದಿಂದ ಅಕ್ಕಿ ಮತ್ತು ಮಸಾಲೆ ರಫ್ತು ನಿಂತುಹೋಗಿದೆ. ಅಕ್ಕಿ ಮತ್ತು ಮಸಾಲೆಗಳನ್ನು ಸಾಗಿಸುವ ನೂರಕ್ಕೂ ಹೆಚ್ಚು ಕಂಟೇನರ್ಗಳು ಬಂದರು ಮತ್ತು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿವೆ. ಅಕ್ಕಿ ಕಂಪನಿಗಳು ಕಂಟೇನರ್ ಮತ್ತು ಬಂದರು ಬಾಡಿಗೆಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಳ್ಳುವಂತಾಗಿದೆ.
ಭಾರತದಲ್ಲಿ ಬೇಯಿಸದ ಅಕ್ಕಿಯ ಅತಿದೊಡ್ಡ ರಫ್ತುದಾರ ಕೇರಳವು ಗಲ್ಫ್, ಯುರೋಪಿಯನ್ ದೇಶಗಳು, ಯುಎಸ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ 22 ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇದರಲ್ಲಿ ಹೆಚ್ಚಿನವು ಗಲ್ಫ್ಗೆ ರಫ್ತಾಗುತ್ತದೆ. ಅಕ್ಕಿ ರಫ್ತಿನಲ್ಲಿ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿರುವ ಪವಿಳಮ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಮತ್ತು ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಸಮಿತಿಯ ಸದಸ್ಯರಾದ ಎನ್.ಪಿ. ಜಾರ್ಜ್, ಈ ದೇಶಕ್ಕೆ ರಫ್ತು ಒಂದು ವಾರದಿಂದ ನಿಂತುಹೋಗಿದೆ ಎಂದು ಹೇಳಿದ್ದಾರೆ.
ಶೇ.80ರಷ್ಟು ಹಡಗು ಮೂಲಕ ಮತ್ತು ಶೇ.20ರಷ್ಟು ವಿಮಾನದ ಮೂಲಕ ರಫ್ತಾಗುತ್ತಿದ್ದು, ಈ ಸೇವೆ ಈಗಾಗಲೇ ಸ್ಥಗಿತಗೊಂಡಿದೆ. ಕೇರಳದಿಂದ ನಿಯಮಿತವಾಗಿ ಅಕ್ಕಿಯನ್ನು ರಫ್ತು ಮಾಡುವ 10-15 ಅಕ್ಕಿ ಕಂಪನಿಗಳಿದ್ದು, ಅದು ರಫ್ತು ಮಾಡಿರುವ . 40 ಕಂಟೇನರ್ ಅಕ್ಕಿಗಳು ಬಂದರು, ವಿಮಾನ ನಿಲ್ದಾಣ ಮತ್ತು ಸಮುದ್ರದ ಮಧ್ಯದಲ್ಲಿ ಸಿಲುಕಿಹಾಕಿಕೊಂಡಿವೆ. ಉಳಿದ ಕಂಪನಿಗಳ 60 ಕ್ಕೂ ಹೆಚ್ಚು ಕಂಟೇನರ್ಗಳು ಸಹ ಅರ್ಧದಾರಿಯಲ್ಲೇ ಇವೆ. ಜೊತೆಗೆ ರಫ್ತಿನ ಕಾರ್ಯದಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರು ಉದ್ಯೋಗವಿಲ್ಲದಂತಾಗಿದೆ.
ಅಮೇರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧವು ಕೇವಲ ಗಲ್ಫ್ ರಾಷ್ಟ್ರಗಳಿಗೆ ಮಾತ್ರವಲ್ಲದೇ ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರತೊಡಗಿದೆ. ಈ ಯುದ್ಧ ಮುಂದುವರಿದಷ್ಚು ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಳವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
-ಎಸ್.ಎ.ರಹಿಮಾನ್ ಮಿತ್ತೂರು

