ಸಲಾಲ(ಒಮಾನ್): ಇಲ್ಲಿನ ಅನಿವಾಸಿ ಕನ್ನಡಿಗರ ಅನ್ನೂರ್ ಎಜುಕೇಶನಲ್ ಸೆಂಟರ್ ವತಿಯಿಂದ ‘ಸ್ನೇಹ ಸಂಗಮ’ ಕಾರ್ಯಕ್ರಮ ಶುಕ್ರವಾರ ಅತ್ಯಂತ ವರ್ಣರಂಜಿತವಾಗಿ ಸಲಾಲದ ಇತಿನ್ ನ ವಿಲ್ಲಾದಲ್ಲಿ ಜರಗಿತು.



ಕಳೆದ ಮೂರು ತಿಂಗಳಿಂದ ಇಲ್ಲಿನ ಕನ್ನಡಿಗ ಕುಟುಂಬದ ಮಕ್ಕಳಿಗೆ ಕನ್ನಡ ಹಾಗೂ ಮೋರಲ್ ಎಜುಕೇಶನ್ ನೀಡುವ ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷ ಫಾರೂಖ್ ಕನ್ನಂಗಾರ್ ಅವರ ನಿವಾಸದಲ್ಲಿ ಸುಮಾರು ಹತ್ತು ಮಕ್ಕಳಿಂದ ಆರಂಭಿಸಿದ ಸ್ಟಡಿ ಕ್ಲಾಸ್ ಇದೀಗ ಸುಮಾರು ಮೂವತ್ತರಷ್ಟು ಕುಟುಂಬದ 45 ಮಕ್ಕಳಿಗೆ ಕನ್ನಡ ಭಾಷಾವಿದ್ಯೆ ಹಾಗೂ ನೈತಿಕ ಭೋದನೆ ನೀಡುತ್ತಿದೆ.
ಇದರ ಪೋಷಕರನ್ನು ಸೇರಿಸಿ ‘ಸ್ನೇಹ ಸಂಗಮ’ ಹಾಗೂ ಮಕ್ಕಳ ಕನ್ನಡ ಹಾಗೂ ಇಸ್ಲಾಮಿಕ್ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ವರ್ಣರಂಜಿತವಾದ ನಡೆದಿದ್ದು, ಈ ವೇಳೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಆಟೋಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಯುವ ಉದ್ಯಮಿ ಅಶ್ರಫ್ ಕಡಬ, ಇಂಡಿಯಾ ಸ್ಪೋರ್ಟ್ ಕ್ಲಬ್ ಕನ್ನಡ ವಿಭಾಗದದ ಕಾರ್ಯದರ್ಶಿ ಶಖೀಲ್ ಹಾಗೂ ಬ್ಯಾರೀಸ್ ಕಮ್ಯುನಿಟಿಯ ಸಿದ್ದೀಖ್ ತೈಬಾರವರು ಭಾಗವಹಿಸಿ ಶುಭಹಾರೈಸಿದರು.





ಸಮಿತಿಯ ಅಧ್ಯಕ್ಷ ಹಾಗೂ ರುವಾರಿ ಫಾರೂಖ್ ಕನ್ನಂಗಾರ್, ಸಂಸ್ಥೆಯ ಅಧ್ಯಾಪಕರಾದ ಅಶ್ರಫ್ ರಝಾ ಅಂಜದಿ ಪಕ್ಷಿಕೆರೆ, ಉದ್ಯಮಿ ಅಶ್ರಫ್ ಕಡಬರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ನಾಸರ್ ನಂದಾವರ, ಕೋಶಾಧಿಕಾರಿ ಶರೀಫ್ ಕುತ್ತಾರ್, ಕೆಸಿಎಫ್ ಅಧ್ಯಕ್ಷರಾದ ಲತೀಫ್ ಸುಳ್ಯ, ಸಮಿತಿ ಸದಸ್ಯರಾದ ಫೈರೋಝ್ ಕಲ್ಲಡ್ಕ, ಶಂಸುದ್ದೀನ್ ಉಜಿರೆ, ಫಾರೂಖ್ ತುಮ್ರೀತ್, ಸದಕತುಲ್ಲಾ ಕಳಸ, ತಂಮ್ರೀಝ್ ಕೈಕಂಬ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಸ್ವಾಗತ ಸಮಿತಿ ಚೇರ್ಮ್ಯಾನ್ ಲತೀಫ್ ಪುತ್ತೂರು ಮಾಡಿದರು. ಕಾರ್ಯಕ್ರಮದಲ್ಲಿ ನೂರಾರು ಕನ್ನಡಿಗರು ಭಾಗವಹಿಸಿದ್ದರು.


