ಕುವೈತ್: ತುಳು ಕೂಟ ಕುವೈಟ್ ಇದರ 25ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಸಲ್ಮಿಯಾದ ಇಂಡಿಯಾನ್ ಸ್ಕೂಲ್ ಆಫ್ ಎಕ್ಸಲೆನ್ಸ್ ನಲ್ಲಿ ನಡೆಯಿತು.

ಕುವೈತ್ ಮತ್ತು ಭಾರತೀಯ ರಾಷ್ಟ್ರಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಪುಟಾಣಿಗಳಾದ ಲಾರೆನ್ ಮಸ್ಕರೇನ್ಹಸ್, ರಚೆಲ್ ಮಸ್ಕರೇನ್ಹಸ್, ರೆಲೋನಿ ಕಾರ್ಡೋಝ ಮತ್ತು ವೆಲೋನಾ ಅಲ್ಬುಕರ್ಕ್ ಸ್ವಾಗತ ನೃತ್ಯ ಪ್ರಸ್ತುತಿಪಡಿಸಿದರು. ತುಳು ಕೂಟದ ಆಡಳಿತ ಸಮಿತಿ ಮತ್ತು ಸಲಹಾ ಸಮಿತಿಯ ಪದಾಧಿಕಾರಿಗಳು ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ತುಳು ಕೂಟ ಕುವೈಟ್ ದ ಉಪಾಧ್ಯಕ್ಷ ಶಂಕರ್ ಶೆಟ್ಟಿ ಪಾಂಗಳ ಸ್ವಾಗತಿಸಿದರು. ಕೂಟದ ಚಟುವಟಿಕೆಗಳಿಗೆ ವರ್ಷವಿಡೀ ಬೆಂಬಲ ನೀಡಿ ಸಹಕರಿಸಿದ ಅಲ್ ಮುಲ್ಲಾ ಎಕ್ಸ್ ಚೇಂಜ್, ಬೇಡರ್ ಕ್ಲಿನಿಕ್, ಟಿವಿಎಸ್ ಹೈದರ್ ಗ್ರೂಪ್ ಗೆ ಕೃತಜ್ಞತೆ ಸಲ್ಲಿಸಿದರು.
ಪ್ರಧಾನ ಕಾರ್ಯದರ್ಶಿ ಹರೀಶ್ ಭಂಡಾರಿ ಕಾಪು ಅವರು 2024ರ ವಾರ್ಷಿಕ ವರದಿ ವಾಚಿಸಿದರು. 2024ರ ವಾರ್ಷಿಕ ಹಣಕಾಸು ವರದಿಯನ್ನು ದಿನೇಶ್ ರಾಮ್ ಬನ್ನಂಜೆ ವಾಚಿಸಿದರು. ಎರಡೂ ವರದಿಗಳನ್ನು ತುಳು ಕೂಟ ಕುವೈಟ್ ದ ಸದಸ್ಯರು ಅನುಮೋದಿಸಿದರು.

ತುಳು ಕೂಟ ಕುವೈಟ್ ದ ರಜತ ಮಹೋತ್ಸವ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕೂಟದ ಸಂಚಾಲಕ ಮತ್ತು ಪ್ರಥಮ ಅಧ್ಯಕ್ಷ ಐಕಳ ಸುಧಾಕರ ಶೆಟ್ಟಿಯವರನ್ನು ಅವರ ಸಮರ್ಪಣಾ ಮನೋಭಾವದ ಸೇವೆ ಮತ್ತು ಅಮೂಲ್ಯ ಮಾರ್ಗದರ್ಶನಕ್ಕಾಗಿ ಗೌರವಿಸಲಾಯಿತು. 2024ರಲ್ಲಿ ಕೂಟದ ಚಟುವಟಿಕೆಗಳಿಗಾಗಿ ಅತ್ಯಧಿಕ ಧನ ಸಂಗ್ರಹ ಮಾಡಿದ್ದಕ್ಕಾಗಿ ಒಂಭತ್ತು ಸದಸ್ಯರನ್ನು ಕೂಡಾ ಗೌರವಿಸಲಾಯಿತು.ಅಲ್ಲದೆ ಸಾಧನೆಗೈದ ಕೂಟದ ಸದಸ್ಯರು ಮತ್ತು ಸದಸ್ಯರ ಮಕ್ಕಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜಿಲ್ಲಾ ಮಟ್ಟದ ಅಂತರ್ ಶಾಲಾ ಸ್ಪರ್ಧೆಯ ಫುಟ್ಬಾಲ್ ಪಂದ್ಯಾಟದ ಪ್ರಥಮ ಪ್ರಶಸ್ತಿ ವಿಜೇತ ತಂಡದ ಸದಸ್ಯ ಮೆರ್ಲಿಕ್ ಡಿಸೋಜ, ದ್ವೀತಿಯ ಸ್ಥಾನಿ ತಂಡದ ಸದಸ್ಯ ಮೆರ್ಲಿಯಾ ಡಿಸೋಜ, ಸಿಬಿಎಸ್ ಇ ಕ್ಲಸ್ಟರ್ ಮಟ್ಟದ 11 ವರ್ಷದೊಳಗಿನ ಚೆಸ್ ಟೂರ್ನಿಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಲಾರೆನ್ ಮಸ್ಕರೇನ್ಹಸ್, 19 ವರ್ಷದೊಳಗಿನವರ ಶಾಟ್ ಪುಟ್ ಎಸೆತ ಸ್ಪರ್ಧೆಯಲ್ಲಿ 4ನೇ ಸ್ಥಾನ ಗಳಿಸಿರುವ ಆರವ್ ಮನೋಜ್ ಕುಮಾರ್, 12 ವರ್ಷದೊಳಗಿನ ಚೆಸ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನಿ ಪ್ಯಾಟ್ರಿಕ್ ರಿಯಾನ್ ಪಿಂಟೊ, ಕುವೈತ್ ನಲ್ಲಿ ನಡೆದ ಐಐಟಿ ಮತ್ತು ಐಐಎಂನ ಹಳೆ ವಿದ್ಯಾರ್ಥಿ ಸಂಗಮ ಕಾರ್ಯಕ್ರಮದಲ್ಲಿ ನಡೆದ ಮುಕ್ತ ರಸಪ್ರಶ್ನೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ಅರ್ಜುನ್ ಸುರೇಂದ್ರ ಪೂಜಾರಿ, ಕುವೈತ್ ರಾಷ್ಟ್ರೀಯ ಕ್ರಿಕೆಟ್ ತಂಡ(ಕುವೈತ್ ಕ್ರಿಕೆಟ್ ಕ್ಲಬ್)ದ ಸದಸ್ಯ ಸುಚಿತ ಡೇಸಾ, 16 ವರ್ಷದೊಳಗಿನ ಕುವೈತ್ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ ಮರಿಯೋ ಪೌಲ್ ಡಿ ಕುನ್ಹ, ಶಾಲೆಯ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪರ್ಲ್ ಆಫ್ ದ ಸ್ಕೂಲ್ ಪ್ರಶಸ್ತಿ ಪುರಸ್ಕೃತರಾದ ನಿಯೋರಾ ಲರೀನಾ ಡಿಸೋಜ ಮತ್ತು ಮೆಲನಿ ಡಿಸೋಜ, 12 ತರಗತಿಯಲ್ಲಿ ಶೇ.96 ಅಂಕಗಳನ್ನು ಗಳಿಸಿ ಶೈಕ್ಷಣಿಕ ಶ್ರೇಷ್ಠತಾ ಪ್ರಶಸ್ತಿ ಪುರಸ್ಕೃತ ಲನಿತಾ ಡಿಸೋಜರನ್ನು ಸನ್ಮಾನಿಸಲಾಯಿತು.

ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸೇರಿದ್ದ ಎಲ್ಲಾ ಭಾಗಹಿಸಿದ್ದರು. ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ
ಇದೇವೇಳೆ ಕೂಟದ 2025ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಗೆ ಚುನಾವಣೆ ನಡೆಯಿತು. ಪ್ರಕಾಶ್ ಗುಡ್ವಿನ್ ಪಿಂಟೋ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಶಂಕರ ಶೆಟ್ಟಿ ಪಾಂಗಾಳ ಅವಿರೋಧವಾಗಿ ಆಯ್ಕೆಯಾದರು. ಅದೇ ರೀತಿ ಉಳಿದ ಪದಾಧಿಕಾರಿಗಳು ಕೂಡಾ ಅವಿರೋಧವಾಗಿಯೇ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ರೋಶನ್ ಪ್ರಶಾಂತ್, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ವರ್ ಶಾನುಭೋಗ್ ಉದ್ಯಾವರ್, ಜೊತೆ ಕಾರ್ಯದರ್ಶಿಯಾಗಿ ಡಾ.ವನಿತಾ ವಿನೋದ್ ಕುಮಾರ್, ಖಜಾಂಚಿಯಾಗಿ ಸ್ಟೀವನ್ ಮಿಸ್ಕಿತ್, ಆಂತರಿಕ ಲೆಕ್ಕಪರಿಶೋಧಕರಾಗಿ ಲಿಯೋನಲ್ ರಯಾನ್ ಮಸ್ಕರೇನ್ಹಸ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀನಾಥ್ ಪ್ರಭು, ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ಸುವರ್ಣ, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಶಾರೋನ್ ಗೊನ್ಸಾಲ್ವಿಸ್, ಕಲ್ಯಾಣಾಧಿಕಾರಿ ಸತೀಶ್ ಕೋಟ್ಯಾನ್ ಆಯ್ಕೆಯಾದರು.
ಇದೇವೇಳೆ ತುಳು ಕೂಟ ಕುವೈತ್ ನ 2025ರ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಕ್ರಿಸ್ಮಸ್ ಮತ್ತು ಸಾಂಕೇತಿಕವಾಗಿ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ವಿಜಯ್ ವಿಲ್ಸನ್ ಅಲ್ಬುಕರ್ಕ್ ಕಾರ್ಯಕ್ರಮ ಸಂಯೋಜಿಸಿದರು.
ಪ್ರಧಾನ ಕಾರ್ಯದರ್ಶಿ ಜಗದೀಶ್ವರ್ ಶಾನುಭೋಗ್ ಉದ್ಯಾವರ್ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು.