ದುಬೈ: ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬೈಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ರವಿವಾರ ದುಬೈಯ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ ಸಂಜೆ ಸಂಕಲ್ಪ ಹಾಗೂ ಸುಮಂಗಲೆಯರಿಂದ ಜ್ಯೋತಿ ಬೆಳಗುವುದರರೊಂದಿಗೆ ಪ್ರಾರಂಭವಾಯಿತು.




ಪುರೋಹಿತ ರಘುಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರ್ಥನೆ, ಸಂಕಲ್ಪ, ಗುರುಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ವೃತಕಲ್ಪೋಕ್ತ ಪೂಜೆ, ಕಥಾ ಸಾರ, ಮಹಾನೈವೇದ್ಯ, ಮಂಗಳಾರತಿ, ಬ್ರಾಹ್ಮಣರಾಧನೆ, ಸುವಾಸಿನಿ ಪೂಜೆ, ಕನ್ನಿಕಾರಾಧನೆ ತೀರ್ಥ ಪ್ರಸಾದ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಯಿತು. ಪೂಜೆಯಲ್ಲಿ ಸಾರ್ವಜನಿಕರ ಪರವಾಗಿ ಅಂಜಲಿ ಕೌಶಿಕ್ ದಂಪತಿ, ಕಾರ್ಯಕಾರಿ ಸಮಿತಿಯ ಪರವಾಗಿ ವೀಣಾ ಸುದರ್ಶನ್ ಹೆಗ್ಡೆ ಕಾರ್ಕಳ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಯಾದರು.
ದುಬೈಯಲ್ಲಿ ನೆಲೆಸಿ ಕಾರ್ಯೋನ್ಮುಖವಾಗಿರುವ ಸಂಘ ಸಂಸ್ಥೆಗಳಾದ ಯು.ಎ.ಇ ಬಂಟ್ಸ್. ಬಿಲ್ಲವಾಸ್ ಫ್ಯಾಮಿಲಿ ದುಬೈ, ಬ್ರಾಹ್ಮಣ ಸಮಾಜ ದುಬೈ, ಮೊಗವೀರ್ಸ್ ಯು.ಎ.ಇ., ವಿಶ್ವಕರ್ಮ ಸಮಾಜ. ಪದ್ಮಶಾಲಿ ಸಮುದಾಯ ಯು.ಎ.ಇ., ಜಿ.ಎಸ್.ಬಿ. ಸಮುದಾಯ, ಗಾಣಿಗ ಸಮಾಜ, ತೀಯಾ ಸಮಾಜ, ರಜಕ ಸಮಾಜ, ರಾಮಕ್ಷತ್ರೀಯ ಸಮಾಜ, ಜೈನ್ ಮಿಲನ ಸಂಘಟನೆಗಳ ಪ್ರತಿನಿಧಿಗಳು ಒಗ್ಗೂಡಿ ಕಳೆದ 2001ರಲ್ಲಿ ಪ್ರಾರಂಭಿಸಿದ ಸಾಮೂಹಿಕ ಶ್ರೀ ಸತ್ಯನಾರಯಣ 18ನೇಯ ಪೂಜೆಯಾಗಿತ್ತು.
ಆಕರ್ಷಕ ಪೂಜಾ ಮಂಟಪದ ವಿನ್ಯಾಸ ರಾಜೇಶ್ ಕುತ್ತಾರ್ ತಂಡದವರು ನಿರ್ಮಿಸಿದ್ದರು. ಸಂಚಿತಾ ಶ್ರೀಧರ್ ರವರ ಕೃಷ್ಣ ಭಜನಾ ತರಗತಿ ಪುಟ್ಟ ಮಕ್ಕಳ ತಂಡದವರ ಭಜನೆಯೊಂದಿಗೆ ಪ್ರಾರಂಭಿಸಿ ಶ್ರೀ ರಾಜರಾಜೇಶ್ವರಿ ಭಜನಾ ವೃಂದ ದುಬೈಯ ಸುಮಧುರ ಕಂಠಸಿರಿಯ ಗಾಯಕ ಗಾಯಕಿಯರ ಭಜನಾ ಸೇವೆ ಸಭಾಂಗಣದಲ್ಲಿ ಆಸೀನವಾಗಿದ್ದ ಸರ್ವ ಭಕ್ತಾಧಿಗಳು ಪಾಲ್ಗೊಂಡು ಭಜನಾ ಸೇವೆಯನ್ನು ನಡೆಸಿದರು. ಸ್ಮೈಲ್ ಕ್ರೀಯೇಶನ್ಸ್ ದುಬೈಯ ಜಸ್ಮಿತಾ ವಿವೇಕ್ ರವರ ನಿರ್ದೇಶನದಲ್ಲಿ ಮಕ್ಕಳು ಮತ್ತು ಸುಮಂಗಲೆಯರ ನೃತ್ಯ ಭಜನೆ ಸರ್ವರ ಮನ ಸೆಳೆಯಿತು.




ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ, ಅಲಂಕಾರ ಸೇವೆ, ಸಪತಾಭಕ್ಷ ಸೇವೆ, ಮಹಾ ಅನ್ನದಾನ ಸೇವೆ, ಮಹಾ ಪ್ರಸಾದ ಸೇವೆಯನ್ನು ಮಾಡಿರುವ ಮಹಾ ದಾನಿಗಳನ್ನು ಪೂಜಾ ವೇದಿಕೆಯಲ್ಲಿ ಗೌರವ ನೀಡಿ ಪ್ರಸಾದ ವಿತರಿಸಲಾಯಿತು. ಮಹಾ ಮಂಗಳಾರತಿಯ ನಂತರ ಸರ್ವ ಭಕ್ತಾಧಿಗಳು ತೀರ್ಥ ಪ್ರಸಾದ, ಮಹಾ ಪ್ರಸಾದವನ್ನು ಸ್ವೀಕರಿಸಿದರು.




ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ದುಬೈ ತಂಡದ ಸರ್ವ ಸದಸ್ಯರಾದ ಸತೀಶ್ ಪೂಜಾರಿ, ವಿಶ್ವನಾಥ್ ಶೆಟ್ಟಿ, ಬಿ.ಕೆ.ಗಣೇಶ್ ರೈ, ಬಾಲಕೃಷ್ಣ ಸಾಲಿಯಾನ್, ಜಗನ್ನಾಥ್ ಬೆಳ್ಳಾರೆ, ವಾಸು ಶೆಟ್ಟಿ, ಜೀವನ್ ಕುಕ್ಯಾನ್, ಧನಂಜಯ್ ಶೆಟ್ಟಿಗಾರ್, ಸುಗಂಧರಾಜ್ ಬೇಕಲ್, ದಿನೇಶ್ ಸಾಲಿಯಾನ್, ಸುದರ್ಶನ್ ಹೆಗ್ಡೆ ಕಾರ್ಕಳ, ವಿವೇಕಾನಂದ, ರಮೇಶ್ ಗಾಣಿಗ, ಸಂದೇಶ್ ಜೈನ್, ಕಿರಣ್ ರಾವ್, ಶಿವಾರಾಮ್ ಭಟ್ ಅವರ ಹಲವು ದಿನಗಳ ಪೂರ್ವಭಾವಿ ತಯಾರಿಯೊಂದಿಗೆ ಅತ್ಯಂತ ಭಕ್ತಿಭಾವದೊಂದಿಗೆ ಶಿಸ್ತುಬದ್ಧವಾಗಿ ಪೂಜಾ ಕಾರ್ಯ ಯಶಸ್ವಿಯಾಗಿ ನೆರವೇರಿತು.
ಬಿ. ಕೆ. ಗಣೇಶ್ ರೈ. ದುಬೈ

