ಯುಎಇ ಬಸವ ಸಮಿತಿ ದುಬೈ ಹಾಗು ಅಕ್ಕನ ಬಳಗದವರು ದುಬೈ ಕ್ರೀಕ್ ಪಾರ್ಕ್’ನಲ್ಲಿ ಇತ್ತೀಚಿಗೆ ಸಂಪ್ರದಾಯಬದ್ಧ ಮಕರ ಸಂಕ್ರಾಂತಿಯನ್ನು ಆಚರಿಸಿದರು.

ಉತ್ತರ ಕರ್ನಾಟಕದ ಜಾನಪದ ಸೊಗಡು ದುಬೈಯ ಮಣ್ಣಲ್ಲೂ ತನ್ನ ಕಂಪನ್ನು ಬೀರಿ ನಳನಳಿಸಿತು. ಸಾಂಪ್ರದಾಯಿಕ ಗಾದೆಗಳು, ಒಗಟುಗಳು, ಜಾನಪದ ಗೀತೆಗಳನ್ನು ಹಾಡಿ ನಲಿದರು. ದಂಪತಿಗಳಿಗೆ ವಿಶೇಷವಾದ ಜಾನಪದ ಫ್ಯಾಷನ್ ವಾಕ್ ಏರ್ಪಡಿಸಲಾಗಿತ್ತು . ಎಲ್ಲ ಮಹಿಳೆಯರು ಇಳಕಲ್ ಸೀರೆಯನ್ನುಟ್ಟು ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು. ಪುರುಷರು, ಮಹಿಳೆಯರು , ಹಿರಿಯರು , ಕಿರಿಯರೆಲ್ಲರೂ ಭಾಗವಹಿಸಿದ ಆಚರಣೆಯಲ್ಲಿ ಸುಮಾರು 70ಕ್ಕೂ ಮಿಕ್ಕು ಕುಟುಂಬಗಳು ಭಾಗಿಯಾಗಿದ್ದವು.

ಉತ್ತರ ಕರ್ನಾಟಕದ ವಿಶೇಷ ಅಡುಗೆಗಳಾದ ಬದನೆ ಕಾಯಿ ಎಣ್ಣೆಗಾಯಿ, ಹೆಸರು ಕಾಳು ಪಲ್ಯ, ಜುಣಕ್ ವಡಿ, ಶೇಂಗಾ, ಅಗಸೆ, ಕೆಂಪು ಚಟ್ನಿಗಳು, ಚಪಾತಿ, ಜೋಳದ ರೊಟ್ಟಿ, ಪುಲಾವ್, ಮೊಸರನ್ನ, ಬುತ್ತಿ, ಹುಗ್ಗಿ, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ, ಹಪ್ಪಳ ಸೆಂಡಿಗೆಯನ್ನು 10ಕ್ಕೂ ಹೆಚ್ಚು ಮಹಿಳೆಯರು ತಮ್ಮ ಮನೆಯಲ್ಲಿ ಸ್ವತಃ ತಯಾರು ಮಾಡಿಕೊಂಡು ಬಂದು ಬಡಿಸಿದ್ದರು.


ಆಟೋಟ ಸ್ಪರ್ಧೆ, ಗಾಳಿಪಟ ಹಾರಿಸುವ ಕಾರ್ಯಕ್ರಮ, ಬಹುಮಾನ ವಿತರಣೆಯೊಂದಿಗೆ ಕಾರ್ಯಕ್ರಮ ಮುಗಿದಿದ್ದು ಹೆಂಗಳೆಯರನ್ನು ಅರಸಿನ ಕುಂಕುಮ ನೀಡಿ ಬೀಳ್ಕೊಡಲಾಯಿತು. ಈ ಕಾರ್ಯಕ್ರಮದಲ್ಲಿ ಬಸವ ಸಮಿತಿಯ ಅಧ್ಯಕ್ಷ ವೀರೇಶ್ ಪಾಟೀಲ್, ಸಲಹೆಗಾರರಾದ ಚಂದ್ರ ಶೇಖರ ಲಿಂಗದಳ್ಳಿ, ಮಲ್ಲಿಕಾರ್ಜುನ ಹವಾಲ್ದಾರ್, ಜಗದೀಶ್ ಲಾಲಿ, ಮೋಹನ್ ಬಿ .ಪಿ, ಆದರ್ಶ್ ಮತ್ತು ಅಕ್ಕನ ಬಳಗದ ರಾಜೇಶ್ವರಿ ಪಾಟೀಲ್, ಶಾಕುಂತಲ ಹವಾಲ್ದಾರ್, ಸುಷ್ಮಾ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವರದಿ: ಆರತಿ ಅಡಿಗ