ಯುಎಸ್‌ಎಎವರೆಸ್ಟ್ ಬೇಸ್ ಕ್ಯಾಂಪ್ ಆರೋಹಣ ಮಾಡಿದ ಅಮೇರಿಕದಲ್ಲಿರುವ ಭಾರತೀಯ...

ಎವರೆಸ್ಟ್ ಬೇಸ್ ಕ್ಯಾಂಪ್ ಆರೋಹಣ ಮಾಡಿದ ಅಮೇರಿಕದಲ್ಲಿರುವ ಭಾರತೀಯ ಮೂಲದ ವೀರ ಮಹಿಳೆಯರು!

ಬಹಳಷ್ಟು ಜನ ಮಹಿಳೆಯರು ಮನೆಗೆಲಸ, ಗಂಡ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸದಲ್ಲಿ ತೃಪ್ತಿ ಕಾಣುತ್ತಾರೆ. ಮತ್ತೆ ಕೆಲವು ಮಹಿಳೆಯರು ಈ ಕೆಲಸಗಳ ಜೊತೆಗೆ ಆಫೀಸಲ್ಲಿ ಫುಲ್ ಟೈಮ್ ಜಾಬ್ ಮಾಡುತ್ತಾರೆ. ಆದರೆ ಕೆಲವೇ ಕೆಲವು ಮಹಿಳೆಯರು ಇನ್ನೂ ಮುಂದೆ ಹೋಗಿ ಜೀವನದಲ್ಲಿ ಮಹಾನ್ ಸಾಧನೆ ಮಾಡುತ್ತಾರೆ.

ಅಂತಹ ವಿರಳ ಮಹಿಳೆಯರಲ್ಲಿ ಇತ್ತೀಚಿಗೆ ಅಮೇರಿಕದಲ್ಲಿರುವ ಆರು ಜನ ಭಾರತಿಯ ವೀರ ನಾರಿಯರು “ಎವರೆಸ್ಟ್ ಬೇಸ್ ಕ್ಯಾಂಪ್ ” ಆರೋಹಣ ಮಾಡಿ ಬಂದಿದ್ದಾರೆ. ವಾಪಾಸ್ ಬರುವಾಗ ಅತ್ಯಂತ ಕಷ್ಟಕರ ಹಿಮಾಲಯದ ಪರ್ವತ ಮಾರ್ಗಗಳಲ್ಲಿ ಟ್ರೆಕ್ ಮಾಡಿದ್ದಾರೆ.

ಈ ತಂಡದಲ್ಲಿ ಆಲ್ಬನಿ, ನ್ಯೂಯಾರ್ಕ್‌ನಿಂದ ಡಾ.ಶೈಲಜ ಶೆಟ್ಟಿ, ಉಮಾ ಬೆಂಕಿ, ರಾಣಿ ಮುಪ್ಪಿಡಿ ಮತ್ತು ಸುಗುಣ ಶ್ರೀನಿವಾಸನ್, ಡಲ್ಲಾಸ್, ಟೆಕ್ಸಾಸ್‌ನಿಂದ ಸರಸ್ವತಿ ಕಾಕಿಲೇಟಿ ಹಾಗೂ ಮಿಚಿಗನ್‌ನಿಂದ ಶ್ರೀದೇವಿ ಮನೇಪಳ್ಳಿ ಜೊತೆ ಇದ್ದರು.

ಈ ಆರು ಜನ ತಾಯಂದಿರು. ಒಂದು ವರ್ಷಕ್ಕೂ ಹೆಚ್ಚು ಕಾಲ ಅಮೇರಿಕದಲ್ಲಿರುವ ಬೇರೆ ಬೇರೆ ಪರ್ವತಗಳನ್ನು ಏರಿ ತಯಾರಿ ನಡೆಸಿದ್ದರು. ಅವುಗಳಲ್ಲಿ ಕೋಲೊರಾಡೋ ರಾಜ್ಯದ ಅತ್ಯಂತ ಎತ್ತರದ ಪರ್ವತಗಳ ಆರೋಹಣ ಇವರಿಗೆ ತುಂಬಾ ಸಹಾಯ ಮಾಡಿತು.

ಅಮೇರಿಕದಿಂದ ನೇಪಾಳಕ್ಕೆ ಬಂದು ಇಳಿದ ಇವರು, ಟ್ರೆಕ್ ಆರಂಭಕ್ಕೂ ಮೊದಲು ಕಠ್ಮಂಡುವಿನ ಸ್ವಯಂಭುನಾಥ ಮತ್ತು ಪಶುಪತಿನಾಥ ದೇವಾಲಯಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

ನಂತರ ಲುಕ್ಲಾಕ್ಕೆ ಪುಟ್ಟ ವಿಮಾನದಲ್ಲಿ ಹೋಗಿ, ಅಲ್ಲಿಂದ ಟ್ರೆಕ್ಕಿಂಗ್ ಶುರು ಮಾಡಿದರು. ನಾಮ್ಚೆ ಬಜಾರ್, ತೆಂಗ್ಬೊಚೆ ಮತ್ತು ಡಿಂಗ್ಬೊಚೆ ಮೂಲಕ ಅವರು ಕೊನೆಗೆ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದರು. ಆಗ ಅವರಿಗೆ ಆದ ಆನಂದ ವರ್ಣನಾತೀತ. ಅಲ್ಲಿ ಸಂತೋಷದಿಂದ ಕುಣಿದು ಕುಪ್ಪಳಿಸಿದರು.

ಈ ಪ್ರಯಾಣದಲ್ಲಿ ಶೇರ್ಪಾಗಳ ಸಹಾಯ ಬಹಳ ಮುಖ್ಯವಾಗಿತ್ತು. ಅವರು ಆಹಾರ, ಸಾಮಾನು ಮತ್ತು ಆಮ್ಲಜನಕವನ್ನು ಪರ್ವತ ಮಾರ್ಗಗಳಲ್ಲಿ ಸಾಗಿಸಿದರು. ಯಾಕ್‌ಗಳು ಮತ್ತು ಕತ್ತೆಗಳು ಕೂಡ ತಂಡಕ್ಕೆ ಸಹಾಯ ಮಾಡಿವೆ.

ಎತ್ತರದ ಪರ್ವತಗಳಲ್ಲಿ ಆರೋಗ್ಯ ಸಮಸ್ಯೆಗಳು ಸಹಜ. ಪ್ರತಿದಿನ ಆಮ್ಲಜನಕ ಮಟ್ಟ ಪರೀಕ್ಷಿಸಲಾಯಿತು. ಸರಸ್ವತಿ ಕಾಕಿಲೇಟಿಯ ಆಮ್ಲಜನಕ ಮಟ್ಟ ಕಡಿಮೆಯಾದಾಗ ತಂಡ ಎಚ್ಚರಿಕೆಯಿಂದ ಕ್ರಮ ಕೈಗೊಂಡಿತು. ಪ್ರಾಣಾಯಾಮ ಮತ್ತು ತಂಡದ ಬೆಂಬಲದಿಂದ ಅವರು ಚೇತರಿಸಿಕೊಂಡರು.

ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಬಳಿಕ ಡಾ.ಶೈಲಜ ಶೆಟ್ಟಿ ಮತ್ತು ಉಮಾ ಬೆಂಕಿ ಇನ್ನೂ ಕಠಿಣ ಹಂತವಾದ ಚೋಲಾ ಪಾಸ್ ಕಡೆಗೆ ಹೋಗಲು ಮುಂದಾದರು. ಆದರೆ ಮಾರ್ಗ ಮಧ್ಯದಲ್ಲಿ ಉಮಾ ಬೆಂಕಿ ಆಸ್ವಸ್ಥರಾದರು. ಅವರನ್ನು ಹೆಲಿಕ್ಯಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲು ನಿರ್ಧರಿಸಿದರು. ಆದರೆ ಇದನ್ನು ನಿರಾಕರಿಸಿ ಅನಾರೋಗ್ಯದ ಮಧ್ಯದಲ್ಲಿಯೇ ಉಮಾ ಬೆಂಕಿ ತುಂಬಾ ಕಷ್ಟಪಟ್ಟು ಕಾಲ್ನಡಿಗೆಯಲ್ಲಿಯೇ ವಾಪಾಸು ಬಂದರು.

ಹೀಗಾಗಿ ಡಾ.ಶೈಲಜ ಶೆಟ್ಟಿ ಒಬ್ಬರೇ ಚೋಲಾಪಾಸ್ ದಾಟಿ ಅತ್ಯಂತ ಸುಂದರವಾದ ಗೋಖ್ಯೋ ಸರೋವರ ಮತ್ತು ನಂತರ ರೆಂಜೋ ಲಾ ಪಾಸ್ ತಲುಪಿದರು. ಈ ಟ್ರೆಕ್‌ಗೆ ಅರವಿಂದ್ ತಮಾಂಗ್ ಮತ್ತು ನಿಮಾ ತಮಾಂಗ್ ಮಾರ್ಗದರ್ಶನ ನೀಡಿದರು. ಪೆಂಬಾ ಮತ್ತು ಅರ್ಜುನ್ ಸೇರಿದಂತೆ ಪೋರ್ಟರ್‌ಗಳು ಸಹಾಯ ಮಾಡಿದರು.

ಜೀವನದಲ್ಲಿ ಶಿಸ್ತು ಮತ್ತು ಧೈರ್ಯ ಇದ್ದರೆ, ಜೊತೆಗೆ ಗಂಡ ಮತ್ತು ಮನೆಯವರ ಸಪೋರ್ಟ್ ಇದ್ದರೆ ಯಾವುದೇ ಕನಸನ್ನೂ ಸಾಧಿಸಬಹುದು ಎಂಬುದಕ್ಕೆ ಈ ಮಹಿಳೆಯರ ಕಥೆ ಈ ಸಂದೇಶ ನೀಡುತ್ತದೆ.

ಲೇಖನ: ಬೆಂಕಿ ಬಸಣ್ಣ, ನ್ಯೂಯಾರ್ಕ್

Hot this week

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

ನ್ಯೂಯಾರ್ಕ್; ಆಲ್ಬನಿಯಲ್ಲಿ ಸಂಭ್ರಮದ ಕನ್ನಡ ಕಲಿ ಪದವಿ ಪ್ರದಾನ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ ಆಲ್ಬನಿ(ನ್ಯೂಯಾರ್ಕ್): ಅಮೇರಿಕದಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಿಗೆ ಕನ್ನಡ...

Related Articles

Popular Categories