ಯುಎಇಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ...

ಕರ್ನಾಟಕ ಸಂಘ ಶಾರ್ಜಾ ನೂತನ ಅಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ ಪ್ರಮಾಣ ವಚನ ಸ್ವೀಕಾರ

ದುಬೈ: ಯುಎಇಯಲ್ಲಿ ಕಳೆದ 23 ವರ್ಷಗಳಿಂದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಮಾಜಮುಖಿ ಸೇವೆಗಳನ್ನು ನಡೆಸುತ್ತಾ ಅನಿವಾಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿರುವ ಕರ್ನಾಟಕ ಸಂಘ ಶಾರ್ಜಾ ಇದರ 2026–2028ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ದುಬೈಯ ದುಬೈ ಗ್ರ್ಯಾಂಡ್ ಹೋಟೆಲ್ ಬೈ ಫಾರ್ಚೂನಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡು, ರೀತೇಶ್ ಅಂಚನ್ ಅವರು ಕಾರ್ಯಕ್ರಮದ ನಿರೂಪಕರಾಗಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಂಘದ ಪಥ ಹಾಗೂ ಸಾಧನೆಗಳ ಕುರಿತು ಸತೀಶ್ ಪೂಜಾರಿ ಅವರು ಮಾಹಿತಿ ನೀಡಿದರು. ಬಳಿಕ ಸಂಘದ ಬೈಲಾ ಕುರಿತು ಗಣೇಶ್ ರೈ ಅವರು ಸದಸ್ಯರಿಗೆ ವಿವರಿಸಿದರು. ನಂತರ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಪರಿಚಯ ನಡೆಯಿತು.

ನಂತರ ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅಧ್ಯಕ್ಷರಾದ ಗಣೇಶ್ ರೈ ಅವರ ನೇತೃತ್ವದಲ್ಲಿ ನೂತನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಅಧಿಕೃತವಾಗಿ ಪದಗ್ರಹಣ ಪ್ರಮಾಣ ವಚನ ಬೋಧಿಸಲಾಯಿತು.

ಸಂಘದ ನೂತನ ಅಧ್ಯಕ್ಷರಾಗಿ ರಂಗಸಾರಥಿ ವಿಶ್ವನಾಥ್ ಶೆಟ್ಟಿ ಅವರು ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿ, ಸಂಘದ ಅಭಿವೃದ್ಧಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉತ್ತೇಜನ ಹಾಗೂ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾಗಿ ಅಜ್ಮಲ್ ಸಯ್ಯದ್, ಪ್ರಧಾನ ಕಾರ್ಯದರ್ಶಿಯಾಗಿ ವಿಘ್ನೇಶ್ ಕುಂದಾಪುರ, ಕೋಶಾಧಿಕಾರಿಯಾಗಿ ಸುಂಗಧರಾಜ್ ಬೇಕಲ್, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಸಾಲಿಯಾನ್, ಜೊತೆ ಕೋಶಾಧಿಕಾರಿಯಾಗಿ ರಘುರಾಮ್ ಶೆಟ್ಟಿಗಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರೀತೇಶ್ ಅಂಚನ್, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರೇಮ್ ಪೂಜಾರಿ, ಕ್ರೀಡಾ ಕಾರ್ಯದರ್ಶಿಯಾಗಿ ಅಮರ್ ಉಮೇಶ್, ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ಜೀವನ್ ಹಾಗೂ ಮೊಹಮ್ಮದ್ ಅಬ್ರಾರ್ ಉಲ್ಲಾ ಶರೀಫ್ ಅವರು ಪದಗ್ರಹಣ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಸಂಘಕ್ಕೆ ನೂತನ ಸದಸ್ಯರಾಗಿ ಸುದರ್ಶನ್ ಹೆಗ್ಡೆ, ಸುರೇಶ್ ಎನ್. ಶೆಟ್ಟಿ, ಕಿರಣ್, ಸುಜಿತ್ ಫೆರ್ನಾಂಡಿಸ್, ಸುಮನ್ ಜಾಯ್ ವಾಸ್, ವಿಠಲ್ ರಿಷನ್ ನಾಯಕ್ ಹಾಗೂ ವಿಜಯ್ ಕುಮಾರ್ ಶೆಟ್ಟಿ ಗಾಣದಮೂಲೆ ಅವರನ್ನು ಸಂಘದ ಸದಸ್ಯರಾಗಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಸಲಹಾ ಮಂಡಳಿಯ ಗೌರವಾನ್ವಿತ ನಿರ್ದೇಶಕರಾದ ಹರೀಶ್ ಶೇರಿಗಾರ್, ಜೋಸೆಫ್ ಮಥಾಯಿಸ್ ಹಾಗೂ ರಾಮಚಂದ್ರ ಹೆಗ್ಡೆ ಉಪಸ್ಥಿತರಿದ್ದು, ನೂತನ ಸಮಿತಿಗೆ ಶುಭ ಹಾರೈಸಿದರು. ತಮ್ಮ ಭಾಷಣಗಳಲ್ಲಿ ಸಂಘದ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ಅದೇ ರೀತಿ ಸಂಘದ ಸಲಹೆಗಾರರಾದ ಎಂ.ಇ.ಮೂಳೂರು, ಗಣೇಶ್ ರೈ, ಸತೀಶ್ ಪೂಜಾರಿ ಹಾಗೂ ನೋಯೆಲ್ ಡಿ ಅಲ್ಮೇಡಾ ಅವರು ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಿ ನೂತನ ಸಮಿತಿಗೆ ಶುಭ ಹಾರೈಸಿದರು.

ನೂತನ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ ಮಾತನಾಡಿ, “ಕರ್ನಾಟಕ ಸಂಘ ಶಾರ್ಜಾವನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸುವುದರೊಂದಿಗೆ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಆಯೋಜಿಸುವ ಮೂಲಕ ಎಲ್ಲ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿಯನ್ನು ಹೊಂದಿದ್ದೇವೆ” ಎಂದು ತಿಳಿಸಿದರು.

ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಕುಂದಾಪುರ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಸಲಹಾ ಮಂಡಳಿ, ಸಲಹೆಗಾರರು, ಸದಸ್ಯರು, ಅತಿಥಿಗಳು ಹಾಗೂ ಎಲ್ಲಾ ಕನ್ನಡಾಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಬಳಿಕ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Hot this week

ಭಾರತದ 80ನೇ ಸ್ವಾತಂತ್ರ್ಯೋತ್ಸವದಲ್ಲಿ ಕರ್ನಾಟಕ ಸಂಘ ಖತರ್‌ನ ಅದ್ದೂರಿ ಭಾಗವಹಿಸುವಿಕೆ

ದೋಹಾ(ಖತರ್): ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತೀಯ ರಾಯಭಾರ ಕಚೇರಿ ದೋಹಾ...

ಬಹರೈನ್; ಆಗಸ್ಟ್ 21ರಂದು ‘ಕೆಸಿಎಫ್’ನಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ...

ಭಾರತೀಯ ರಾಯಭಾರ ಕಚೇರಿಯ ಡಾ.ಈಶ್ ಸಿಂಘಾಲ್​​ಗೆ ಭಾವಪೂರ್ಣ ಬೀಳ್ಕೊಡುಗೆ; ಕರ್ನಾಟಕ ಸಂಘ ಖತರ್‌ನಿಂದ ಅಭಿನಂದನೆ

ದೋಹಾ(ಖತರ್): ಖತರ್‌ನಲ್ಲಿ ತಮ್ಮ ಸೇವಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರಾಯಭಾರ ಕಚೇರಿಯ...

ವಂದೇ ಮಾತರಂ ಮತ್ತು ಜನಗಣಮನ ಗೀತೆಯೊಂದಿಗೆ ಅಮೇರಿಕದಲ್ಲಿ ಗೃಹಪ್ರವೇಶ

ವರದಿ: ಬೆಂಕಿ ಬಸಣ್ಣ, ನ್ಯೂಯಾರ್ಕ್ 1875ರಲ್ಲಿ ಭಾರತದಲ್ಲಿ ಮೊಳಗಿದ ‘ವಂದೇ ಮಾತರಂ’ 150...

ದುಬೈ; ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಸಾಮಾಜಿಕ ಸಮ್ಮಿಲನ ಕಾರ್ಯಕ್ರಮ

ದುಬೈ: ಪರಿಸರ ಸಂರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬದ್ಧವಾಗಿರುವ...

Related Articles

Popular Categories