ಬಹರೈನ್: ಕನ್ನಡ ಸಂಘ ಬಹರೈನ್ ವತಿಯಿಂದ ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್ ಸಹಯೋಗದಲ್ಲಿ ಆಯೋಜಿಸಲಾದ ‘ಆರೋಗ್ಯ ದಿನ’ ಉಚಿತ ವೈದ್ಯಕೀಯ ಶಿಬಿರವು ಇತ್ತೀಚೆಗೆ ಮನಾಮದ ಕನ್ನಡ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.


ಸುಮಾರು 100ಕ್ಕೂ ಹೆಚ್ಚು ಸದಸ್ಯರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆಯ ಸದುಪಯೋಗವನ್ನು ಪಡೆದುಕೊಂಡರು. ಈ ಶಿಬಿರದಲ್ಲಿ ಉಚಿತ ವೈದ್ಯಕೀಯ ಸಲಹೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ರಾಜೇಶ್ ಕುಮಾರ್(ಇಂಟರ್ನಲ್ ಮೆಡಿಸಿನ್ ತಜ್ಞರು), ಡಾ.ಅರುಣ್ ಆಂಟೋನಿ (ಯುರಾಲಜಿಸ್ಟ್), ಡಾ.ಗೌತಮ್ ಎ.ಶಿವಾನಂದ(ಮಕ್ಕಳ ತಜ್ಞರು) ಸೇವೆ ಸಲ್ಲಿಸಿದರು.


ಈ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರಾದ ಅಜಿತ್ ಬಂಗೇರ ಅವರು ಸಮಾಜದ ಆರೋಗ್ಯ ಕಾಳಜಿಗಾಗಿ ಇಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯವೆಂದು ತಿಳಿಸಿ, ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್ನ ಸಹಕಾರವನ್ನು ಪ್ರಶಂಸಿಸಿದರು.
ಡಾ. ಅರುಣ್ ಆಂಟೋನಿ ಅವರು ನಿಯಮಿತ ಆರೋಗ್ಯ ತಪಾಸಣೆಯ ಮಹತ್ವದ ಕುರಿತು ಮಾತನಾಡಿ, ಆರೋಗ್ಯಕರ ಜೀವನಶೈಲಿ ಅನುಸರಿಸುವ ಅಗತ್ಯವನ್ನು ಒತ್ತಿಹೇಳಿದರು.
ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್ ಪರವಾಗಿ ಭರತ್ ಜಯಕುಮಾರ್ ಮತ್ತು ಅಮಲ್ ಅವರು ಆರೋಗ್ಯದಿನದ ಸಂಯೋಜನೆಯಲ್ಲಿ ಸಹಕರಿಸಿದರು.
ಕಾರ್ಯಕ್ರಮದ ಸಮಾರೋಪ ಸಂದರ್ಭದಲ್ಲಿ, ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್ ಅವರಿಗೆ ಕನ್ನಡ ಸಂಘ ಬಹರೈನ್ ವತಿಯಿಂದ ಕೃತಜ್ಞತಾ ಸ್ಮರಣಿಕೆ ನೀಡಿ ಗೌರವಿಸಲಾಯಿತು.



ಉಪಾಧ್ಯಕ್ಷ ನಿತಿನ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. BIIECO ಸಂಸ್ಥೆ ಕಾರ್ಯಕ್ರಮದ ಇವೆಂಟ್ ಸಪೋರ್ಟರ್ ಆಗಿ ಸಹಕರಿಸಿತು.
ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್ ಅಮ್ಮೆನಡ್ಕ ಅವರು ಸ್ವಾಗತ ಹಾಗೂ ವಂದನಾರ್ಪಣೆ ಸಲ್ಲಿಸಿ, ವೈದ್ಯರು, ಅಲ್ ಹಿಲಾಲ್ ಹೆಲ್ತ್ ಕೇರ್ ಗ್ರೂಪ್, ಸ್ವಯಂಸೇವಕರು, ಸಹಾಯಕರಿಗೆ ಹಾಗೂ ಭಾಗವಹಿಸಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.


