ಯುಎಇಯುಎಇಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರ ನೆರವಿಗೆ ಮುಂದಾಗಿರುವ ಡಾ.ರೊನಾಲ್ಡ್...

ಯುಎಇಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರ ನೆರವಿಗೆ ಮುಂದಾಗಿರುವ ಡಾ.ರೊನಾಲ್ಡ್ ಕೊಲಾಸೋ ನೇತೃತ್ವದ ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡ: ತುರ್ತು ಸಹಕಾರಕ್ಕಾಗಿ ಸರ್ಕಾರಕ್ಕೆ ಮನವಿ

ದುಬೈ; ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ಯುಎಇಯಲ್ಲಿ ಆತಂಕದ ಛಾಯೆ ಮೂಡಿದ್ದು, ಹಲವಾರು ಮಂದಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆಯಲ್ಲಿ ಅನಿವಾಸಿ ಕನ್ನಡಿಗರ ಪೋಷಕರಾದ ಖ್ಯಾತ ಅನಿವಾಸಿ ಉದ್ಯಮಿ ಡಾ.ರೊನಾಲ್ಡ್ ಕೊಲಾಸೋ ಅವರ ನೇತೃತ್ವದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವು ಹಲವು ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಝೂಮ್ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಅವಲೋಕನ ನಡೆಸಿದ್ದಾರೆ.

ಪ್ರಸಕ್ತ ಸನ್ನಿವೇಶದಲ್ಲಿ ಯಾವ ರೀತಿ ಯುಎಇ ಸರಕಾರದೊಂದಿಗೆ ಸಹಕರಿಸಬೇಕು, ಇಲ್ಲಿ ಯಾರೆಲ್ಲ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ, ಈಗಾಗಲೇ ಸಿಲುಕಾಕಿಕೊಂಡಿರುವ ಪ್ರವಾಸಿ ಕನ್ನಡಿಗರನ್ನು ಯಾವ ರೀತಿ ರಕ್ಷಿಸಿ, ಅವರಿಗೆ ಸಹಾಯಹಸ್ತ ನೀಡಬೇಕು ಹಾಗು ಇಲ್ಲಿರುವ ಕನ್ನಡಿಗರ ಸಂಕಷ್ಟಕ್ಕೆ ಪಾವ ರೀತಿ ಸ್ಪಂದಿಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಗಿದೆ.

ಝೂಮ್ ಸಭೆಯಲ್ಲಿ ಯುಎಇ ಪ್ರಸಕ್ತ ಪರಿಸ್ಥಿತಿ ಬಗ್ಗೆ ಮಾತನಾಡಿದ ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಇಲ್ಲಿನ ಸರಕಾರ ಎಲ್ಲ ಅನಿವಾಸಿಗಳ ಸುರಕ್ಷತೆಯನ್ನು ಸಮರ್ಪಕವಾಗಿ ಕಾಪಾಡುತ್ತಿದೆ, ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಗಾಳಿಸುದ್ದಿ, ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಳ್ಳಬಾರದು ಎಂದು ಯುಎಇಯ ಅನಿವಾಸಿ ಕನ್ನಡಿಗರಿಗೆ ಮನವಿ ಮಾಡಿದರು.

ಇದೇ ವೇಳೆ ಡಾ.ರೊನಾಲ್ಡ್ ಕೊಲಾಸೋ ಮಾತನಾಡಿ, ಈಗ ಸಂಕಷ್ಟದಲ್ಲಿರುವ ಪ್ರವಾಸಿಗರ ತುರ್ತು ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ವೆಚ್ಚವನ್ನು ಭರಿಸಲು ತಾನು ಸಿದ್ಧನಿದ್ದೇನೆ. ಜೊತೆಗೆ ಕರ್ನಾಟಕ ಸರಕಾರ ತುರ್ತು ಪರಿಹಾರ ಸಹಾಯಧನ ಘೋಷಣೆ ಮಾಡಲು ಒತ್ತಾಯಿಸುವುದಾಗಿ ಹೇಳಿದರು.

ಪ್ರಸಕ್ತ ದುಬೈನಲ್ಲಿ ಸಿಲುಕಿರುವ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೆಗೌಡರು ಮಾತನಾಡಿ, ಪರಿಸ್ಥಿತಿ ಬೇಗನೇ ತಿಳಿಯಾಗಲಿದೆ, ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರಿಗೆ ಸಹಾಯಹಸ್ತವಾಗಿ ಸಚಿವ ಕೃಷ್ಣಭೈರೇಗೌಡ ಅವರೊಂದಿಗೆ 2 ಕೋಟಿ ತುರ್ತು ಪರಿಹಾರ ಘೋಷಿಸಿ ಎಂದು ಒತ್ತಾಯಿಸಿದ್ದೇವೆ. ಅವರು ಮುಖ್ಯಮಂತ್ರಿ ಜೊತೆ ಕೂಡಲೇ ಮಾತನಾಡಿ ಪರಿಹಾರ ಘೋಷಿಸುವ ಭರವಸೆ ನೀಡಿದ್ದಾರೆ ಎಂದರು.

ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ ಎಲ್ಲಾ ದೂತಾವಾಸಗಳೊಂದಿಗೆ, ಅಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿ ಇದ್ದೇನೆ. ರಾಜ್ಯ ಸರಕಾರದೊಂದಿಗೂ ಮಾಹಿತಿ ಹಂಚಿಕೊಳ್ಳುತ್ತಿದ್ದೇನೆ. ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ವಿಧಾನ ಪರಿಷತ್ ಸದಸ್ಯೆ, ಕೆಎನ್ಆರೈ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದರು.

ಯುಎಇಯಲ್ಲಿ ಸಂಕಷ್ಟದಲ್ಲಿರುವ ಹಲವಾರು ಪ್ರವಾಸಿ ಕನ್ನಡಿಗರನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ತಾಯ್ನಾಡಿಗೆ ವಾಪಸ್ ತೆರಳದೇ ಸಿಲುಕಿರುವ ಕನ್ನಡಿಗರಿಗೆ ಯಾವುದೇ ರೀತಿಯ ವೈದ್ಯಕೀಯ ಸೇವೆ ಬೇಕಿದ್ದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನನ್ನು ಸಂಪರ್ಕಿಸಬಹುದು. ವೈದ್ಯಕೀಯ ಸೇವೆಯನ್ನು ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದು ಕನ್ನಡಿಗಾಸ್ ಹೆಲ್ಪ್ ಲೈನ್ ಸಂಯೋಜಕರು, ಬಿಸಿಸಿಐ ಯುಎಇ ಅಧ್ಯಕ್ಷರಾದ ಹಿದಾಯತ್ ಅಡ್ಡೂರು ತಿಳಿಸಿದರು.

ಯುಎಇಯಲ್ಲಿ ಸಿಲುಕಿರುವ ಕನ್ನಡಿಗರು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡವನ್ನು ಸಂಪರ್ಕಿಸಿ, ನೀವು ದುಬೈ, ಶಾರ್ಜ, ಅಬುಧಾಬಿ, ಅಜ್ಮಾನ್ ಎಲ್ಲೇ ಇದ್ದರೂ ನಮ್ಮ ತಂಡ ನಿಮ್ಮನ್ನು ಸಂಪರ್ಕಿಸಿ, ಸಹಕರಿಸಲಿದೆ, ಈಗಾಗಲೇ ಈ ಕೆಲಸದಲ್ಲಿ ನಿರತವಾಗಿದೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ ತಿಳಿಸಿದರು.

ಸಭೆಯಲ್ಲಿ ಹೆಲ್ಪ್ ಲೈನ್ ತಂಡದ ದಯಾ ಕಿರೋಡಿಯನ್, ಚಂದ್ರು ಲಿಂಗದಳ್ಳಿ, ಮಲ್ಲಿಕಾರ್ಜುನ ಗೌಡ, ಇಮ್ರಾನ್ ಖಾನ್, ಶ್ವೇತಾ ಜಾಧವ್, ಮನೋಹರ್ ಹೆಗ್ಡೆ, ನಾಗರಾಜ ರಾವ್, ಸಮದ್ ಬಿರಾಲಿ, ಸಲೀಂ ಮೂಡಬಿದ್ರೆ, ಸಂಶುದ್ದೀನ್ ಪಿಲಿಗೂಡು, ರಾಕ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ರಂಗಪ್ಪ, ಕನ್ನಡ ಪಾಠಶಾಲೆ ದುಬೈಯ ಗಿರೀಶ್ ವೊರಟೆ, ಗಿರೀಶ್ ಪಟ್ವಾರಿ, ಗವಾಸ್ಕರ್, ಸಿದ್ಧಲಿಂಗೇಶ್, ರೂಪ ಶಶಿಧರ್, ಫಿರೋಝ್ ಉಪಸ್ಥಿತರಿದ್ದರು.

Hot this week

ಕೊಲ್ಲಿ ಯುದ್ಧ; ಗಲ್ಫ್ ರಾಷ್ಟ್ರಗಳಲ್ಲಿ ಅಗತ್ಯವಸ್ತುಗಳ ಮೇಲೆ ಬೀರುತ್ತಿದೆ ಪರಿಣಾಮ!

ಸೌದಿ ಅರೇಬಿಯಾ: ಅಮೇರಿಕ-ಇಸ್ರೇಲ್ ಹಾಗೂ ಇರಾನ್ ಮಧ್ಯೆ ನಡುಯುತ್ತಿರುವ ಸಂಘರ್ಷವು ಮುಂದುವರಿಯುತ್ತಿರುವುದರಿಂದ...

ಸೌದಿ: ಅಲ್ ಖಮರ್ ವೆಲ್ಫೇರ್ ಅಸೋಸಿಯೇಷನ್‌ನಿಂದ ಇಫ್ತಾರ್ ಕೂಟ

ಸೌದಿ ಅರೇಬಿಯಾ: ರಮಝಾನ್ ಪವಿತ್ರ ತಿಂಗಳ ಅಂಗವಾಗಿ ಅಲ್ ಖಮರ್ ವೆಲ್ಫೇರ್...

Yakshagana staged in German for first time in Munich, children from Europe perform

Munich: In a significant moment for coastal Karnataka’s traditional...

ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಪ್ರವಾಸಿ ಕನ್ನಡಿಗರಿಗೆ ಧೈರ್ಯ ತುಂಬಿದ ಎಂ.ಎ.ಗಫೂರ್

ದುಬೈ: ಅಮೇರಿಕ-ಇಸ್ರೇಲ್ ಹಾಗು ಇರಾನ್ ಮಧ್ಯೆಗಿನ ಸಂಘರ್ಷದಿಂದ ದುಬೈಯಲ್ಲಿ ಸಂಕಷ್ಟಕ್ಕೀಡಾಗಿರುವ ಕನ್ನಡಿಗ...

Related Articles

Popular Categories